ಸಿಎಂ ಸಿದ್ದು ವಿರುದ್ಧ ಬಂಡೆದ್ದ ಮೂಲ ಕಾಂಗ್ರೆಸ್ಸಿಗರು
ಬೆಂಗಳೂರು, ಅ.8 : ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಸಿದ್ದರಾಮಯ್ಯ ಅವರ ಏಕಪಕ್ಷೀಯ ಧೋರಣೆ ನೀತಿ ವಿರುದ್ಧ 20ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ಪತ್ರ ಬರೆದಿರುವ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ಸಿಎಂ ಸಿದ್ದರಾಮಯ್ಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ತಕ್ಷಣ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಅಹವಾಲುಗಳನ್ನು ಆಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಸರ್ಕಾರ ಕಾರ್ಯವೈಖರಿ ಕುರಿತ ವರದಿಯನ್ನು ಹೈಕಮಾಂಡ್ ನಾಯಕರಿಗೆ ತಲುಪಿಸಿದೆ ಎಂದು ತಿಳಿದು ಬಂದಿದೆ.

ಸಿಎಂ ಸಿದ್ದು ಏಕ ಪಕ್ಷೀಯ ನಿರ್ಧಾರ
ಶಾಸಕರು ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳ ವರ್ಗಾವಣೆ ಮುಂತಾದ ವಿಚಾರಗಳಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಂಪಯ್ಯ, ಭೈರತಿ ಸುರೇಶ್, ಲಕ್ಷ್ಮಣ್ ಹಸ್ತಕ್ಷೇಪ
ಅಧಿಕಾರಿಗಳ ವರ್ಗಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ, ಭೈರತಿ ಸುರೇಶ್, ಕೋಣನ ಕುಂಟೆ ಲಕ್ಷ್ಮಣ್ ಅವರುಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕರು ಪತ್ರದಲ್ಲಿ ದೂರಿದ್ದಾರೆ.

ಸಿದ್ದು ಶಾಸಕರನ್ನು ಕಡೆಗಣಿಸಿದ್ದಾರೆ
ನಿಗಮ ಮತ್ತು ಮಂಡಳಿಗಳ ನೇಮಕಾತಿ, ಅಕಾಡಮೆಗಳ ಅಧ್ಯಕ್ಷರ ನೇಮಕ ಮುಂತಾದ ವಿಚಾರಗಳಲ್ಲೂ ಸಿಎಂ ಶಾಸಕರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಡಿಗ್ಗಿಗೆ ಪತ್ರ
ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್ ಸ್ವಲ್ಪ ದಿನ ಕಾದು ನೋಡುವಂತೆ ಶಾಸಕರಿಗೆ ಭರವಸೆ ನೀಡಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮೂಲ ಕಾಂಗ್ರೆಸ್ಸಿಗರು ಗರಮಾಗರಂ.
ಮೂಲ ಕಾಂಗ್ರೆಸ್ಸಿಗರು ಗರಮಾಗರಂ. * 15-20 ಶಾಸಕರಿಂದ ಭಿನ್ನರಾಗ * ಸಿಎಂ ಸಿದ್ದು ಬೆಂಬಲಿಗರು ಹಗಲು ದರೋಡೆಗಿಳಿದಿದ್ದಾರೆ. * ಸಿಎಂ ಸಿದ್ದು ನಿರ್ದೇಶನದಂತೆ ವರ್ಗಾವಣೆ ದಂಧೆ ಜೋರಾಗಿದೆ. ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ. * ಸಿಎಂ ಸಿದ್ದು ಕಾರ್ಯವೈಖರಿ ಬದಲಿಸಿಕೊಳ್ಳಲೇ ಬೇಕು. * ತಕ್ಷಣವೇ ಸಮನ್ವಯ ಸಮಿತಿ ಕರೆಯಬೇಕು. * ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅಪ್ಪಣೆ/ಅನುಮತಿ ಪಡೆಯಲಾಗಿದೆ. * ಮೇಲಿನ ಅಂಶಗಳನ್ನು ಉಲ್ಲೇಖಿಸಿ ಡಾ. ಪರಮೇಶ್ವರ್ ಸೂಚನೆಯಂತೆ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರಿಗೆ ನೇರವಾಗಿ ಪತ್ರ ಬರೆದ ಮೂಲ ಕಾಂಗ್ರೆಸ್ ಶಾಸಕರು.












Click it and Unblock the Notifications