ಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟ
Recommended Video

ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳಿಗೆ ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದರೂ, ಎರಡು ನಿರ್ಣಾಯಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಲು ತೀವ್ರ ಹೆಣಗಾಡುತ್ತಿದೆ ಎನ್ನುವ ಮಾತಿದೆ.
ಮೈತ್ರಿಯ ಭಾಗವಾಗಿ ಹನ್ನೆರಡು ಕ್ಷೇತ್ರಗಳನ್ನು ಜೆಡಿಎಸ್ ಡಿಮಾಂಡ್ ಮಾಡಿತ್ತು, ಕೊನೆಗೆ ಎಂಟು ಸೀಟು ಫೈನಲ್ ಆದವು. ಆದರೆ, ಎಂಟು ಕ್ಷೇತ್ರಕ್ಕೇ ಜೆಡಿಎಸ್ಸಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ ಎನ್ನುವುದಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವೇ ಉದಾಹರಣೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಕಟ್ಟಾ ಕಾಂಗ್ರೆಸ್ ಮುಖಂಡ, ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿಯಿಂದ ಸ್ಪರ್ಧಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಬಿಫಾರಂ ನೀಡಿದ್ದಾರೆ ಎನ್ನುವ ವಿಚಾರವನ್ನು ಖುದ್ದು ಮಧ್ವರಾಜ್ ಅವರೇ ಸ್ಪಷ್ಟ ಪಡಿಸಿದ್ದಾರೆ. ಅಲ್ಲಿ ಇನ್ನು ಶೋಭಾ ಕರಂದ್ಲಾಜೆ - ಪ್ರಮೋದ್ ನಡುವೆ ಫೈಟ್ ನಡೆಯಲಿದೆ.
ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಇನ್ನು, ಬೆಂಗಳೂರು ದಕ್ಷಿಣ, ಸೆಂಟ್ರಲ್ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ಸಿಗೆ ಮತ್ತು ಉತ್ತರದಲ್ಲಿ ಜೆಡಿಎಸ್ಸಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಹೊಸಹೊಸ ಹೆಸರುಗಳು ಬಂದು ಹೋಗುತ್ತಿವೆ. ಮತ್ತಷ್ಟು ಹೊಸದಾಗಿ ಸೇರ್ಪಡೆಯಾಗುತ್ತಿರುವ ಹೆಸರುಗಳು, ಮುಂದೆ..

ಬೆಂಗಳೂರು ಉತ್ತರನೋ ತುಮಕೂರೋ ಎನ್ನುವ ಗೊಂದಲ
ಬೆಂಗಳೂರು ಉತ್ತರನೋ ತುಮಕೂರೋ ಎನ್ನುವ ಗೊಂದಲ ಇನ್ನೂ ದೇವೇಗೌಡರಿಗೆ ಕಾಡುತ್ತಿರುವಂತಿದೆ. ದೇವೇಗೌಡರೇ ಮನಸ್ಪೂರ್ತಿಯಾಗಿ ಕಳೆದ ಮೂರು ವರ್ಷಗಳ ಹಿಂದೆಯೇ ಹಾಸನದಲ್ಲಿ ಪ್ರಜ್ವಲ್ ಅವರನ್ನು ನಿಲ್ಲಿಸುವ ತೀರ್ಮಾನವನ್ನು ಮಾಡಿದ್ದರು. ಅದರಿಂದ ಹಿಂದೆ ಸರಿಯಲು ಅವರ ಮನಸ್ಸು ಒಪ್ಪಿಲ್ಲ ಎನ್ನುವ ಮಾತನ್ನು ಸಿಎಂ ಕುಮಾರಸ್ವಾಮಿ ಹೇಳಿದ್ದರು. ಬೆಂಗಳೂರು ಉತ್ತರ ಸೇಫ್ ಅಲ್ಲ ಎನ್ನುವ ಕಾರಣಕ್ಕಾಗಿ ಗೌಡ್ರು ಅಲ್ಲಿಂದ ಸ್ಪರ್ಧಿಸಲು ಹಿಂದಕ್ಕೆ ಸರಿಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಬಿ ಎಂ ಫಾರೂಕ್ ಮತ್ತು ಬಿ ಎಲ್ ಶಂಕರ್ ಅವರ ಹೆಸರು ಕೇಳಿಬರುತ್ತಿತ್ತು
ಬೆಂಗಳೂರು ಉತ್ತರಕ್ಕೆ ಉದ್ಯಮಿ ಬಿ ಎಂ ಫಾರೂಕ್ ಮತ್ತು ಬಿ ಎಲ್ ಶಂಕರ್ ಅವರ ಹೆಸರು ಕೇಳಿಬರುತ್ತಿತ್ತು. ಶಂಕರ್ ಉಮೇದುವಾರಿಕೆಗೆ ಗೌಡ್ರು ಸಹಮತ ವ್ಯಕ್ತ ಪಡಿಸಿದ್ದರು. ಕಾಂಗ್ರೆಸ್ ಮುಖಂಡರ ಮತ್ತು ಕ್ಶೇತ್ರದ ವ್ಯಾಪ್ತಿಯಲ್ಲಿ ಬರುವ ಶಾಸಕರ ತಕರಾರೂ ಇರಲಿಲ್ಲ. ಆದರೂ, ಬಿಜೆಪಿ ವಿರುದ್ದ ಶಂಕರ್ ವಿನ್ನಿಂಗ್ ಕ್ಯಾಂಡಿಡೇಟ್ ಆಗಬಲ್ಲರೇ ಎನ್ನುವ ಅನುಮಾನ ಗೌಡ್ರಿಗೆ ಕಾಡಿದಂತಿದೆ. ಹಾಗಾಗಿ, ಯುವ ಒಕ್ಕಲಿಗ ಸಚಿವರ ಮನೆಗೆ ಗೌಡ್ರು, ಗುರುವಾರ ಸಂಜೆ ತೆರಳಿದ್ದರು.

ಕೃಷ್ಣ ಭೈರೇಗೌಡರ ಮನೆಗೆ ಖುದ್ದು ಗೌಡರು ಹೋಗಿ ಮಾತುಕತೆ ನಡೆಸಿದ್ದರು
ಗುರುವಾರ ಸಂಜೆ, ಸಚಿವ ಮತ್ತು ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡರ ಮನೆಗೆ ಖುದ್ದು ದೇವೇಗೌಡರು ಹೋಗಿ ಮಾತುಕತೆ ನಡೆಸಿದ್ದರು. ನೀವೇ ನಿಲ್ಲಬೇಕು ಎಂದು ಭೈರೇಗೌಡರನ್ನು ದೊಡ್ಡ ಗೌಡ್ರು ಒತ್ತಾಯಿಸಿದ್ದಾರೆ. ಆದರೆ, ಕೃಷ್ಣ ಭೈರೇಗೌಡರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎನ್ನುವ ಮಾತಿದೆ. ಗೌಡ್ರ ಭೇಟಿಯ ನಂತರ ಭೈರೇಗೌಡ ಹೇಳಿದ್ದು, ' ಗೌಡ್ರೇ ಅಭ್ಯರ್ಥಿಯಾಗಬೇಕೆಂದು ಕ್ಷೇತ್ರದ ಎಲ್ಲಾ ಏಳು ಶಾಸಕರು ಬಯಸಿದ್ದೇವೆ. ಅದನ್ನು ಗೌಡ್ರಿಗೂ ಹೇಳಿದ್ದೇವೆ. ನನಗೆ ಅಭ್ಯರ್ಥಿಯಾಗಬೇಕೆನ್ನುವ ಒತ್ತಡ ಬರಬಹುದು, ಆದರೆ ಅದಕ್ಕೆ ನಾನು ಸಿದ್ದನಿಲ್ಲ, ಈ ಮಾತನ್ನು ನಮ್ಮ ವರಿಷ್ಠರಿಗೂ ತಿಳಿಸಿದ್ದೇನೆ'.

ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರ ಹೆಸರು ಕೇಳಲಾರಂಭಿಸಿತು
ಬೆಂಗಳೂರು ದಕ್ಷಿಣದಲ್ಲೂ ಕಾಂಗ್ರೆಸ್ಸಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ ಎನ್ನುವ ಮಾತಿದೆ. ರಾಮಲಿಂಗ ರೆಡ್ಡಿ, ಪ್ರಿಯಕೃಷ್ಣ, ನಿಲೇಕಣಿ ಪತ್ನಿಯ ಹೆಸರು ಚಾಲ್ತಿಯಲ್ಲಿತ್ತು. ಯಾರೂ ಸ್ಪರ್ಧೆಗೆ ಆಸಕ್ತಿ ತೋರದ ಹಿನ್ನಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರ ಹೆಸರು ಕೇಳಲಾರಂಭಿಸಿತು. ಆದರೆ, ಅದಕ್ಕೂ ಕರ್ನಾಟಕ ಕಾಂಗ್ರೆಸ್ ಚುನಾವಣಾ ಸಮಿತಿ ಮನಸ್ಸು ಮಾಡದೇ ಇದ್ದ ಹಿನ್ನಲೆಯಲ್ಲಿ ಹೊಸ ಮಹಿಳೆಯ ಹೆಸರು ಕೇಳಲಾರಂಭಿಸಿದೆ.

ಜಯನಗರ ಉಪಚುನಾವಣೆಯಲ್ಲಿ ಗೆದ್ದ, ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿ
ಕೆಲವೊಂದು ಮೂಲಗಳ ಪ್ರಕಾರ, ಏಳೆಂಟು ತಿಂಗಳ ಹಿಂದೆ ಜಯನಗರ ಉಪಚುನಾವಣೆಯಲ್ಲಿ ಗೆದ್ದ, ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿಯವರನ್ನು ಸ್ಪರ್ಧಿಸುವಂತೆ ಒತ್ತಡ ಹೇರಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸೌಮ್ಯಾ ಸುತರಾಂ ಸಾಧ್ಯವಿಲ್ಲ, ಶಾಸಕಳಾಗಿ ಮಾಡಬೇಕಾಗಿರುವ ತುಂಬಾ ಇರುವುದರಿಂದ, ಟಿಕೆಟ್ ನಿರಾಕರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಇದರ ಜೊತೆಗೆ, ಮಾಜಿ ಸಿಎಂ ರಾಮಕೃಷ್ಣ ಹೆಗಡೆಗೆ ಆತ್ಮೀಯರಾದ ಮಹಿಳೆಯೊಬ್ಬರ ಹೆಸರೂ ಬೆಂಗಳೂರು ದಕ್ಷಿಣಕ್ಕೆ ಕೇಳಿಬರುತ್ತಿದೆ. ಕೊನೆಗೆ, ತೀವ್ರ ಒತ್ತಡದದಿಂದಾಗಿ ಪ್ರಿಯಕೃಷ್ಣ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.












Click it and Unblock the Notifications