ಬಿಜೆಪಿಗೆ ಎಲ್ಲಿದೆ ಬಹುಮತ? ಜೆಡಿಎಸ್, ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಜುಲೈ 26: ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಅನುಮತಿ ನೀಡಿದ ಕೂಡಲೇ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕುಮಂಡಿಸಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದಾರೆ.
ಆದರೆ, ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಪಾಳಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅನೈತಿಕ ಮಾರ್ಗದ ಮೂಲಕ ಸರ್ಕಾರ ಉರುಳಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಿರುವ ಮೈತ್ರಿ ನಾಯಕರು, ಈಗ ಸರ್ಕಾರ ರಚನೆಗೆ ಸಿದ್ಧತೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಹುಮತವೇ ಇಲ್ಲದೆ ಬಿಜೆಪಿ ಸರ್ಕಾರ ರಚಿಸಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಶ್ನಿಸಿವೆ. ಬಿಜೆಪಿಗೆ ಇರುವುದು 105 ಶಾಸಕರ ಬಲ ಮಾತ್ರ. ಚುನಾವಣೆ ನಡೆದಾಗ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಸರ್ಕಾರ ರಚನೆಯ ಸಾಹಸದಿಂದ ನಿರ್ಗಮಿಸಿತ್ತು. ಹೀಗೆ ಕಣ್ಣ ಮುಂದೆಯೇ ಒಂದು ನಿದರ್ಶನ ಇರುವಾಗ ಮತ್ತೆ ಸರ್ಕಾರ ರಚಿಸುವ ದುಸ್ಸಾಹಸಕ್ಕೆ ಕೈಹಾಕುತ್ತಿದೆ. ಇದಕ್ಕೆ ರಾಜ್ಯಪಾಲರು ಕೂಡ ಅನುಮತಿ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಲಾಗಿದೆ.

ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ
ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಯಡಿಯೂರಪ್ಪ ಅವರು ತಮಗೆ 105 ಶಾಸಕರ ಬೆಂಬಲವಿದೆ ಎಂದು ಸರ್ಕಾರ ರಚನಗೆ ಹಕ್ಕು ಮಂಡಿಸಿದ್ದು, ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜಾತ್ಯತೀತ ಜನತಾದಳ ಟ್ವೀಟ್ ಮಾಡಿದೆ.

ಬಿಜೆಪಿಯವರದ್ದು ಎಲ್ಲವೂ ಅನೈತಿಕವೇ..
ಇದ್ದ ಸರ್ಕಾರವನ್ನು ಬೀಳಿಸುವುದೂ ಅನೈತಿಕವಾಗಿ. ಸಹಜ ಬಹುಮತವಿಲ್ಲದೆ ಸರ್ಕಾರ ರಚಿಸುವುದೂ ಅನೈತಿಕವಾಗಿ. ಬಿಜೆಪಿಯವರಿಗೆ ನೈತಿಕವಾಗಿ ಏನನ್ನೂ ಮಾಡುವುದಕ್ಕೆ ಬರುವುದೇ ಇಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕಳೆದ ಎರಡು ದಶಕಗಳಲ್ಲಿ ಸರಕಾರಗಳನ್ನು ಅಸ್ಥಿರಗೊಳಿಸುವುದೇ ಕರ್ನಾಟಕಕ್ಕೆ ಬಿಜೆಪಿ ನೀಡಿರುವ ಕೊಡುಗೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಟೀಕಿಸಿದ್ದಾರೆ.

ಕರ್ನಾಟಕ ಪ್ರಯೋಗದ ಲ್ಯಾಬ್ ಆಗಿದೆ
ಬಿಜೆಪಿಗೆ ಕರ್ನಾಟಕ ವಿಧಾನಸಭೆಯು ಪ್ರಯೋಗಾಲಯವಾಗಿ ಪರಿಣಮಿಸಿದೆ ಮತ್ತು ಬಿಜೆಪಿ ಬೆಂಬಲಿಸುವ ರಾಜ್ಯಪಾಲರು ಸರ್ಕಾರ ರಚಿಸಲು ಅಸಾಂವಿಧಾನಿಕ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಬಹುಮತ ಇಲ್ಲದೇ ಇರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡುವುದಕ್ಕೆ ಸಂವಿಧಾನದ ಯಾವ ನಿಮಯ ಅನುಮತಿ ನೀಡುತ್ತದೆ? ಇದು ನಾಚಿಕೆಗೇಡು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪಾಠ ಕಲಿಯದಿರುವುದು ದುರಂತ
ಸದಾ ಸಂವಿಧಾನದ ಕಾನೂನು ಕಟ್ಟಳೆಗಳನ್ನು ಮೀರಿ ತಮ್ಮದೇ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಲು ಯತ್ನಿಸುವ ಬಿಜೆಪಿ ಮತ್ತು ಯಡಿಯೂರಪ್ಪ ಅವರು ತಮ್ಮದೇ ಕರಾಳ ಇತಿಹಾಸದಿಂದ ಪಾಠವನ್ನು ಕಲಿಯದಿರುವುದು ನಿಜಕ್ಕೂ ದುರಂತ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯಡಿಯೂರಪ್ಪನವರೇ ಸಂವಿಧಾನವು ತಮ್ಮ ಅನೀತಿಗಳಿಗೆ ಮತ್ತೊಮ್ಮೆ ತಕ್ಕ ಪಾಠ ಕಲಿಸಲಿದೆ. ಹೀಗಾಗಿ ಇಷ್ಟೊಂದು ಅವಸರ ಬೇಡ.












Click it and Unblock the Notifications