ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹೆಚ್ಚು ದಿನ ಬಾಳದು: ಅನಂತ್ಕುಮಾರ್
ಬೆಂಗಳೂರು, ಮೇ 19: ಬಿಜೆಪಿಗೆ ರಾಜ್ಯದ ಜನರ ಜನಾದೇಶವಿದೆ ಆದರೆ ರಾಜಕೀಯ ಷಡ್ಯಂತ್ರದಿಂದಾಗಿ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ಕುಮಾರ್ ಅವರು ಆಕ್ರೋಶ ಹೊರಹಾಕಿದರು.
ಯಡಿಯೂರಪ್ಪ ಅವರು ರಾಜಿನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಆದರೆ ಅವರು 3ನೇ ಸ್ಥಾನದಲ್ಲಿರುವ ಜೆಡಿಎಸ್ ಮುಂದೆ ಮಂಡಿಯೂರಿ ಕುಳಿತಿದ್ದಾರೆ, ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೀಳು ಮಟ್ಟಕ್ಕೆ ಇಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಅದು ಅಪವಿತ್ರ ಮೈತ್ರಿ, ಆ ಮೈತ್ರಿ ತಾತ್ಕಾಲಿಕವಷ್ಟೆ ಅದು ಬಹಳ ಕಾಲ ಮುಂದುವರೆಯುವುದಿಲ್ಲಾ, ರಾಜ್ಯದ ಜನರೂ ಕೂಡಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ವಿರುದ್ಧ ಇದ್ದಾರೆ ಎಂದರು.
ಬಿ.ಎಸ್.ಯಡಿಯೂರಪ್ಪ ಪೂರ್ಣ ಪ್ರಮಾಣದ ಸರಕಾರ ರಚಿಸುತ್ತಾರೆ ಎಂಬ ಆಸೆಯಿಂದ ಜನರು ಹೆಚ್ಚಿನ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ್ದಾರೆ ಆದರೆ ಜನರ ಆಶೋತ್ತರಗಳಿಗೆ ಅಪವಿತ್ರ ಮೈತ್ರಿ ಅಡ್ಡಗಾಲು ಹಾಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದಿನಿಂದ ಬಿಜೆಪಿ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ರಾಜ್ಯಾದ್ಯಂತ ಕಾಂಗ್ರೆಸ್ ನ ಬಣ್ಣ ಬಯಲು ಮಾಡಲಿದ್ದೇವೆ ಈ ಮೈತ್ರಿಕೂಟ ಯಾವಾಗ ಬೇಕಾದ್ರೂ ನುಚ್ಚುನೂರು ಆಗಬಹುದು ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ ಅಂಕಗಣಿತದಲ್ಲಿ ಮಾತ್ರ ಮುಂದಿವೆ ಜನಾದೇಶದಲ್ಲಿ ಅಲ್ಲ ಎಂದು ಅನಂತ್ಕುಮಾರ್ ಹೇಳಿದರು.
ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಯ ಬಗ್ಗೆ ಟೀಕೆ ಮಾಡಿದ್ದಾರೆ, ಮೋದಿಯವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದರು, ಇದು ರಾಹುಲ್ ಗಾಂಧಿ ತಮ್ಮ ಮನದ ಸ್ಥಿಮಿತ ಕಳೆದುಕೊಂಡಿರುವುದನ್ನ ತೋರಿಸುತ್ತದೆ ಎಂದು ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.











Click it and Unblock the Notifications