ರಾಜ್ಯ ಮೈತ್ರಿ ಸರ್ಕಾರದ ಭವಿಷ್ಯವೇನು? ಡಿಕೆಶಿ ಏನಂತಾರೆ ಕೇಳಿ!
ಬೆಂಗಳೂರು, ಆಗಸ್ಟ್ 09: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಸದ್ಯದಲ್ಲೇ ಮುರಿದುಬೀಳಲಿದೆಯಾ? ಇತ್ತೀಚೆಗಷ್ಟೇ ಹಬ್ಬಿದ್ದ ಈ ವದಂತಿಯನ್ನು ಕಾಂಗ್ರೆಸ್ ಮುಖಂಡ, ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ ಮತ್ತು-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದು ಮುರಿದುಬೀಳುವ ಪ್ರಶ್ನೆಯೇ ಇಲ್ಲ ಎಂದು ಕನಕಪುರ ಶಾಸಕ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅಥವಾ ಆಯಕಟ್ಟಿನ ಮಂತ್ರಿಸ್ಥಾನವನ್ನು ನಿರೀಕ್ಷಿಸಿದ್ದ ಡಿಕೆ ಶಿವಕುಮಾರ್ ಅವರಿಗೆ ಭ್ರಮನಿರಸನವಾಗಿತ್ತು. ಆದರೆ ಸದ್ಯಕ್ಕೆ ಆ ಎಲ್ಲ ಬೇಸರಗಳನ್ನೂ ಮರೆತು ಅವರು ಆಡಳಿತ ಯಂತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ ಬಿಜೆಪಿ ಆಪರೇಶನ್ ಕಮಲ ನಡೆಸುತ್ತಿದೆ ಎಂಬ ಗುಲ್ಲೇಳುತ್ತಿದ್ದಂತೆಯೇ ಕೊಂಚ ಧ್ವನಿ ಏರಿಸಿರುವ ಡಿಕೆಶಿ ಮತ್ತೆ ಅಖಾಡಕ್ಕಿಳಿದಂತಿದೆ!

10 ಶಾಸಕರು ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ವದಂತಿ ಬಗ್ಗೆ...
"ಕಾಂಗ್ರೆಸ್ಸಿನಿಂದ 10 ಶಾಸಕರು ಪಕ್ಷವನ್ನು ತೊರೆದು ಹೋಗುತ್ತಾರೆ. ಆಗ ಮೈತ್ರಿ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಎಲ್ಲ ವದಂತಿಯೂ ಸುಳ್ಳು. ನಮ್ಮ ಸರ್ಕಾರ ಸ್ಥಿರವಾಗಿದೆ. ಸಂಪೂರ್ಣ ಐದು ವರ್ಷಗಳ ಕಾಲ, ಯಾವ ತಡೆಯಿಲ್ಲದೆ ನಾವು ಸರ್ಕಾರ ನಡೆಸುತ್ತೇವೆ" ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಆಪರೇಷನ್ ಕಮಲ?
ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಆಪರೇಷನ್ ಕಮಲದ ಪ್ರಯತ್ನ ಮಾಡುತ್ತಿದೆಯಾ ಎಂಬ ವದಂತಿಯೂ ಹಬ್ಬಿತ್ತು. ಸ್ವತಃ ಡಿ ಕೆ ಶಿವಕುಮಾರ್ ಅವರೇ ಇತ್ತೀಚೆಗೆ ನೀಡಿದ್ದ ಹೇಳಿಕೆಯಲ್ಲಿ, 'ಬಿಜೆಪಿಗೆ ಅಧಿಕಾರದ ದಾಹವಿದೆ. ಆಪರೇಷನ್ ಕಮಲದ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ' ಎಂಬ ಹೇಳಿಕೆ ನೀಡಿದ್ದರು. ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಅವರ ನಡೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅನುಮಾನದಲ್ಲೇ ನೋಡಿದ್ದರು.

ಯಡಿಯೂರಪ್ಪ ಸಮಜಾಯಿಷಿ
ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಸಮಜಾಯಿಷಿ ನೀಡಿದ್ದ ಬಿ ಎಸ್ ಯಡಿಯೂರಪ್ಪ, 'ಆಪರೇಷನ್ ಕಮಲ ಮಾಡುತ್ತಿಲ್ಲ. ಅದರ ಅಗತ್ಯವೂ ನಮಗಿಲ್ಲ. ನಾವು ವಿಪಕ್ಷದಲ್ಲೇ ಇರಲು ಬಯಸುತ್ತೇವೆ. ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ಬೇರೆ ವಿಚಾರಕ್ಕೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ್ದೇನೆ' ಎಂದಿದ್ದರು. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ರಾಜ್ಯದಲ್ಲಿ 20(28) ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಅನ್ನು ಕೇಂದ್ರದ ನಾಯಕರು ರಾಜ್ಯ ಬಿಜೆಪಿಗೆ ನೀಡಿದ್ದಾರೆ. ಈ ತಲೆಬಿಸಿಯಲ್ಲಿರುವ ರಾಜ್ಯದ ನಾಯಕರು ರಾಜ್ಯ ರಾಜಕಾರಣದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡತಿಲ್ಲ.

ಲೋಕಸಭಾ ಚುನಾವಣೆ ವರೆಗೆ ಸುಮ್ಮನಿರುವ ತಂತ್ರ?
2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ರಾಜ್ಯದ ಮೈತ್ರಿ ಸರ್ಕಾರ ಗಟ್ಟಿಯಾಗಿರುವಂತಿದೆ! ಕಾಂಗ್ರೆಸ್ ನ ಹಲವು ಶಾಸಕರಿಗೆ ಅವರು ನಿರೀಕ್ಷಿಸಿದ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿದೆ. ಆ ವೈಮನಸ್ಯವೆಲ್ಲಕ್ಕೂ 'ಲೋಕಸಭಾ ಚುನಾವಣೆಯ' ಗಡುವು ನೀಡಿ ನಾಯಕರು ಸುಮ್ಮನಿದ್ದಾರೆ. ಹೀಗೆ ಬೂದಿ ಮುಚ್ಚಿರುವ ಕೆಂಡದಂತಿರುವ ಕೋಪ ಯಾವತ್ತಾದರೂ ಸ್ಫೋಟವಾಗಬಹುದು. ಆ ಸಂದರ್ಭಕ್ಕಾಗಿಯೇ ಬಿಜೆಪಿಯೂ ಕಾಯುತ್ತಿದೆ!











Click it and Unblock the Notifications