ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್ಗಳ ಕೈ ತಪ್ಪಿದ ವಾರ್ಡ್!
ಬೆಂಗಳೂರು, ಸೆಪ್ಟೆಂಬರ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಆದರೆ, ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಕಾಂಗ್ರೆಸ್, ಬಿಜೆಪಿ ಸದಸ್ಯರ ಕೆಂಗಣ್ಣಿಗೆ ಪಟ್ಟಿ ಗುರಿಯಾಗಿದೆ.
ನಗರಾಭಿವೃದ್ಧಿ ಇಲಾಖೆ ಕರಡು ಮೀಸಲಾತಿ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅವಧಿಯಲ್ಲಿ ಪಾಲಿಕೆಯ ಮೇಯರ್ ಆಗಿದ್ದ ನಾಲ್ವರಿಗೆ ತಮ್ಮ ವಾರ್ಡ್ನಲ್ಲಿಯೇ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿಲ್ಲ.
ಹೊಸ ಮೀಸಲಾತಿ ಪಟ್ಟಿ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಕರ್ನಾಟಕ ಸರ್ಕಾರ ಬಿಬಿಎಂಪಿಯ ವಾರ್ಡ್ಗಳನ್ನು 198ರಿಂದ 225ಕ್ಕೆ ಹೆಚ್ಚಿಲು ಮುಂದಾಗಿದೆ. ಹೀಗೆ ಆದರೆ, ಪುನಃ ಮೀಸಲಾತಿ ಪಟ್ಟಿ ಬದಲಾಗಬೇಕಿದೆ.
ಕಾಂಗ್ರೆಸ್ ಪಕ್ಷದ ಪ್ರಮುಖ ಪಾಲಿಕೆ ಸದಸ್ಯರಿಗೆ ತಮ್ಮ ಕ್ಷೇತ್ರದ ಮೀಸಲಾತಿ ಬದಲಾಗಿರುವುದು ಅಸಮಾಧಾನ ಮೂಡಿಸಿದೆ. ಮೀಸಲಾತಿ ಪಟ್ಟಿ ರಚನೆ ಹಿಂದೆ ರಾಜಕೀಯ ನಡೆದಿದೆ ಎಂದು ಅವರು ಆರೋಪಿಸುತ್ತಿದ್ದಾರೆ.

ಮಾಜಿ ಮೇಯರ್ಗಳ ಕೈ ತಪ್ಪಿದ ಕ್ಷೇತ್ರ
ಬಿಬಿಎಂಪಿ ಮಾಜಿ ಮೇಯರ್ ಜಿ. ಪದ್ಮಾವತಿ ಪ್ರತಿನಿಧಿಸಿದ್ದ ಪ್ರಕಾಶ ನಗರ, ಗಂಗಾಬಿಕೆ ಮಲ್ಲಿಕಾರ್ಜುನ್ ಪ್ರತಿನಿಧಿಸಿದ್ದ ಜಯನಗರ ವಾರ್ಡ್ಗಳು ಅಸ್ತಿತ್ವ ಕಳೆದುಕೊಂಡಿವೆ. ಬಿ. ಎನ್. ಮಂಜುನಾಥ ರೆಡ್ಡಿ ಅವರ ಮಡಿವಾಳ, ಆರ್. ಸಂಪತ್ ಕುಮಾರ್ ಅವರ ದೇವರಜೀವನಹಳ್ಳಿ ವಾರ್ಡ್ ಮೀಸಲಾತಿ ಸಾಮಾನ್ಯ ಮಹಿಳೆ ಪಾಲಾಗಿದೆ.

ವಾರ್ಡ್ ಹೆಸರು, ಮೀಸಲಾತಿ ಬದಲು
ಪಾಲಿಕೆ ವಿರೋಧ ಪಕ್ಷದ ನಾಯರಾಗಿದ್ದ ಅಬ್ದುಲ್ ವಾಜಿದ್ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್ ಹೆಸರು ಚಾಮುಂಡಿ ನಗರ ಎಂದು ಬದಲಾಗಿದೆ. ಮೀಸಲಾತಿ ಸಾಮಾನ್ಯ ಮಹಿಳೆ ಪಾಲಾಗಿದೆ. ಆರ್. ಎಸ್. ಸತ್ಯನಾರಾಯಣ ಪ್ರತಿನಿಧಿಸಿದ್ದ ದತ್ತಾತ್ರೇಯ ದೇವಸ್ಥಾನ ವಾರ್ಡ್ ಮೀಸಲಾತಿ ಸಾಮಾನ್ಯ ಮಹಿಳೆ ಎಂದು ಬದಲಾಗಿದೆ.

ಬಸವನಗುಡಿ ವಾರ್ಡ್ ಮೀಸಲಾತಿ ಬದಲು
ಬಿ. ಎಸ್. ಸತ್ಯನಾರಾಯಣ ಪ್ರತಿನಿಧಿಸುತ್ತಿದ್ದ ಬಸವನಗುಡಿ ವಾರ್ಡ್ ಮೀಸಲಾತಿ ಸಾಮಾನ್ಯ ಮಹಿಳೆ ಎಂದು ಬದಲಾಗಿದೆ. ಆಡಳಿತ ಪಕ್ಷದ ನಾಯಕರಾಗಿದ್ದ ಎಂ. ಶಿವರಾಜಯ ಪ್ರತಿನಿಧಿಸಿದ್ದ ಶಂಕರಮಠ ವಾರ್ಡ್ ಮೀಸಲಾತಿ ಹಿಂದುಳಿದ ವರ್ಗದ 'ಎ' ನಿಂದ 'ಬಿ'ಗೆ ಬದಲಾಗಿದೆ.

ಕಾಂಗ್ರೆಸ್ ಆರೋಪವೇನು?
ಕಾಂಗ್ರೆಸ್ ನಾಯಕ ಅಬ್ದುಲ್ ವಾಜಿದ್ ಮೀಸಲಾತಿ ಬದಲಾಯಿಸುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಪಾಲಿಕೆಯಲ್ಲಿ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್ ನಾಯಕರು, ಪ್ರತಿನಿಧಿಸಿದ್ದ ವಾರ್ಡ್ಗಳ ಮೀಸಲಾತಿ ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ" ಎಂದು ಆರೋಪಿಸಿದ್ದಾರೆ.












Click it and Unblock the Notifications