ನಾಲ್ಕು ದಿನದಲ್ಲಿ ಹಲವು ಬಾರಿ ಇಶಾ ಪಂತ್ ವರ್ಗಾವಣೆ!
ಬೆಂಗಳೂರು, ಮಾರ್ಚ್ 01 : ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಹಲವು ಗೊಂದಲ ಹುಟ್ಟು ಹಾಕಿದೆ. ನಾಲ್ಕು ದಿನದಲ್ಲಿ ಹಲವು ಬಾರಿ ವರ್ಗಾವಣೆ ಆದೇಶ ಹೊರಡಿಸಿ ಸರ್ಕಾರ ಟೀಕೆಗೆ ಕಾರಣವಾಗಿದೆ.
ಕರ್ನಾಟಕ ಸರ್ಕಾರ ಫೆಬ್ರವರಿ 26ರಂದು ಇಶಾಪಂತ್ ಸೇರಿ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ರನ್ನು ಸಿಐಡಿಯ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಫೆಬ್ರವರಿ 29ರಂದು ಮತ್ತೊಂದು ಆದೇಶ ಹೊರಡಿಸಿದ ಸರ್ಕಾರ ಇಶಾಪಂತ್ ಅವರನ್ನು ಫೆಬ್ರವರಿ 26ರಂದು ವರ್ಗಾವಣೆ ಮಾಡಿದ ಆದೇಶವನ್ನು ವಾಪಸ್ ಪಡೆಯಿತು. ಆಗ್ನೇಯ ವಿಭಾಗದ ಡಿಸಿಪಿಯಾಗಿಯೇ ಮುಂದುವರೆಯುವಂತೆ ಸೂಚಿಸಿತು.

ಕೆಲವೇ ಗಂಟೆಗಳಲ್ಲಿ ಮತ್ತೊಂದು ಆದೇಶ ಹೊರಡಿಸಿದ ಸರ್ಕಾರ ಇಶಾಪಂತ್ರನ್ನು ಕಮಾಂಡ್ ಸೆಂಟರ್ ಆಫ್ ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಿತ್ತು. 2015ನೇ ಬ್ಯಾಚ್ ಐಪಿಎಸ್ ಅಧಿಕಾರಿ ಶ್ರೀನಾಥ್ ಮಹಾದೇವ್ರನ್ನು ಆಗ್ನೇಯ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಿತು.
ಚಿತ್ರದುರ್ಗದ ಎಸ್ಪಿಯಾಗಿದ್ದ ಶ್ರೀನಾಥ್ ಮಹಾದೇವ್ ಅವರಿಗೆ ಬಡ್ತಿ ನೀಡಿದ ಸರ್ಕಾರ ಆಗ್ನೇಯ ವಿಭಾಗಕ್ಕೆ ವರ್ಗಾವಣೆ ಮಾಡಿತು. ಇಶಾಪಂತ್ ಅವರು ಶ್ರೀನಾಥ್ಗೆ ಅಧಿಕಾರ ಹಸ್ತಾಂತರ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದರು.
ಇಶಾಪಂತ್ 2011ನೇ ಬ್ಯಾಚ್ ಮಧ್ಯಪ್ರದೇಶ ಕೆಡರ್ನ ಐಪಿಎಸ್ ಅಧಿಕಾರಿ. ಕಳೆದ ಒಂದು ವರ್ಷದಿಂದ ಆಗ್ನೇಯ ವಿಭಾಗದ ಡಿಸಿಪಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕನ್ನಡ ಹಾಡುಗಳನ್ನು ಹಾಡುವ ಇಶಾಪಂತ್ ಖಡಕ್ ಅಧಿಕಾರಿಯಾಗಿದ್ದಾರೆ.












Click it and Unblock the Notifications