ಯಡಿಯೂರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು
ಬೆಂಗಳೂರು, ಜೂ. 4 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲೆ ವಕೀಲ ವಿನೋದ್ ಕುಮಾರ್ ಮತ್ತೊಂದು ದೂರು ಸಲ್ಲಿಸಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದ ಬಗ್ಗೆ ಅವರು ದೂರು ನೀಡಿದ್ದು, ಜುಲೈ 3 ರಂದು ಇದರ ತೀರ್ಪು ಹೊರಬರಲಿದೆ.
ಶಿವಮೊಗ್ಗದ ವಕೀಲರಾದ ವಿನೋದ್ ಕುಮಾರ್ ಬುಧವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಉದಯ್ ಕುಮಾರ್ ವಿರುದ್ಧ ಅಕ್ರಮ ಆಸ್ತಿಗಳಿಗೆ ಪ್ರಕರಣದ ವಿರುದ್ಧ ದೂರು ನೀಡಿದ್ದಾರೆ.

ನ್ಯಾಯಾಲಯ ಈ ಖಾಸಗಿ ದೂರನ್ನು ಸ್ವೀಕರಿಸಿದ್ದು ಈ ಕುರಿತು ತನಿಖೆ ನಡೆಸಬೇಕೆ? ಎಂಬ ಕುರಿತು ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಜುಲೈ 3ಕ್ಕೆ ತೀರ್ಪು ನೀಡಲಿದೆ. ನ್ಯಾಯಾಲಯ ದೂರಿನ ಕುರಿತು ತನಿಖೆ ನಡೆಸಲು ಆದೇಶ ನೀಡಿದರೆ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬವರ್ಗದವರು ಮತ್ತೊಂದು ತನಿಖೆ ಎದುರಿಸಬೇಕಾಗುತ್ತದೆ. [ಬಿಎಸ್ವೈ, ಈಶ್ವರಪ್ಪಗೆ ಸಿಹಿ ಸುದ್ದಿ]
ಈಗಾಗಲೇ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಕಿಕ್ ಬ್ಯಾಕ್ ಹಗರಣ, ಡಿನೋಟಿಫಿಕೇಷನ್ ಹಗರದಲ್ಲಿ ದೂರುಗಳು ದಾಖಲಾಗಿದ್ದು, ಅವುಗಳ ವಿಚಾರಣೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮತ್ತು ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿರುದ್ಧ ದೂರುಗಳು ದಾಖಲಾಗಿವೆ. [ಯಡಿಯೂರಪ್ಪ ಬಗ್ಗೆ ಮೋದಿ ಹೇಳಿದ್ದೇನು?]
ವಿನೋದ್ ಕುಮಾರ್ ಮೊದಲು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಿಸಿದ್ದರು. ಸದ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications