ಬೆಂಗಳೂರಿನ ಈ ಕಾಮಗಾರಿಗೆ ಡೈಡ್ಲೈನ್ ನಿಗದಿ: ಆಯುಕ್ತ ರಾಜೇಂದ್ರ ಚೋಳನ್
ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ (ಅಕ್ಟೋಬರ್ 9)ರ ಬೆಳಿಗ್ಗೆ ದ್ವಿಚಕ್ರ (ಬೈಕ್) ವಾಹನ ಮೂಲಕ ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವ್ಯಾಪ್ತಿಯಲ್ಲಿನ ವಿವಿಧ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ, ವೈಟ್ ಟಾಪಿಂಗ್ ಕಾಮಗಾರಿ, ರಸ್ತೆ ಬದಿ ತ್ಯಾಜ್ಯ ಬಿಸಾಡಿರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದ್ದಾರೆ.
ರಸ್ತೆ ಗುಂಡಿಗಳನ್ನು ಗುಣಮಟ್ಟದೊಂದಿಗೆ ಮುಚ್ಚಲು, ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಪಾದಚಾರಿಗಳ ಮಾರ್ಗಗಳ ಒತ್ತುವರಿ ತೆರವುಗೊಳಿಸಲು, ರಸ್ತೆ ಮೇಲೆ ಅಳವಡಿಸಿರುವ ಅನಧಿಕೃತ ಕೇಬಲ್ ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

ಅಲ್ಲದೇ ಅನಧಿಕೃತವಾಗಿ ರಸ್ತೆ ಅಗೆಯುವುದನ್ನು ತಡೆಯಲು ಹಾಗೂ ಅವರಿಗೆ ದಂಡ ವಿಧಿಸಲು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆ ಬದಿ/ಖಾಲಿ ಜಾಗ/ಪಾದಚಾರಿ ಮಾರ್ಗಗಳಲ್ಲಿ ತ್ಯಾಜ್ಯ ಹಾಕಿರುವುದರಿಂದ ಉಂಟಾಗುವ ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ವಿಧಾನಸೌಧ ಮುಂಭಾಗದ ರಸ್ತೆ ಹಾಗೂ ಬಹುಮಹಡಿ ಕಟ್ಟಡದ ಮುಂಭಾಗದ ರಸ್ತೆಗಳಲ್ಲಿನ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಸಮನ್ವಯದೊಂದಿಗೆ ಕೈಗೊಳ್ಳಲು ಸೂಚಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಕಂಡು ಅಧಿಕಾರಿಗಳಿಗೆ ತರಾಟೆ: ಇನ್ನು ದ್ವಿಚಕ್ರ ವಾಹನ ಮೂಲಕ ಸಂಚರಿಸಿದ ಹಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಗಮನಿಸಿದ ಆಯುಕ್ತರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ತುರ್ತಾಗಿ ಗುಂಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ರಸ್ತೆ ಅಗೆತವನ್ನು ಸ್ಥಗಿತಗೊಳಿಸಿ: ಕಮರ್ಷಿಯಲ್ ಸ್ಟ್ರೀಟ್ 3ನೇ ಕ್ರಾಸ್ ನ ನಾರಾಯಣ್ ಪಿಳೈ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ರಸ್ತೆ ಅಗೆಯುವುದನ್ನು ಸ್ಥಗಿತಗೊಳಿಸಲು ಹಾಗೂ ಸಂಬಂಧಪಟ್ಟವರ ಮೇಲೆ ಕ್ರಮ ವಹಿಸಲು ಸೂಚಿಸಿದ್ದು, ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದಲೇ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ.
ಪರಿಶೀಲನೆಯ ವೇಳೆ ನೀಡಿದ ಪ್ರಮುಖ ನಿರ್ದೇಶನಗಳು:
* ರೇಸ್ ಕೋರ್ಸ್ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಪೇ & ಪಾರ್ಕಿಂಗ್ ವ್ಯವಸ್ಥೆಗೆ ಕಾರ್ಯಸಾಧ್ಯತಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
* ಶಿವಾನಂದ ವೃತ್ತದ ರಸ್ತೆಯಲ್ಲಿನ ಹೈ ಗ್ರೌಂಡ್ ಬಳಿಯ ಖಾಲಿ ಜಾಗವು ನಗರ ಪಾಲಿಕೆಯದ್ದಾಗಿದ್ದರೆ ಈ ಬಗ್ಗೆ ಪರಿಶೀಲನೆ ನಡೆಸಿ ಈ ಸ್ಥಳದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಿಸುವ ಕುರಿತು ಕಾರ್ಯ ಸಾಧ್ಯತಾ ವರದಿ ಸಲ್ಲಸಲು ಸೂಚನೆ.
ಇಂದು ಪರಿಶೀಲನೆ ನಡೆಸಿದ ಪ್ರಮುಖ ರಸ್ತೆಗಳು:
ರೇಸ್ ಕೋರ್ಸ್ ರಸ್ತೆ
ಚಾಲುಕ್ಯ ವೃತ್ತ
ವಸಂತ ನಗರ ಸುತ್ತಮುತ್ತಲಿನ ರಸ್ತೆ
ಅರಮನೆ ರಸ್ತೆ
ವಿಧಾನಸೌಧ ರಸ್ತೆ
ರಾಜಭವನ ರಸ್ತೆ
ಕ್ವೀನ್ಸ್ ರಸ್ತೆ
ಅಲಿ ಆಸ್ಕರ್ ರಸ್ತೆ
ಶಿವಾಜಿನಗರದ ವಿವಿಧ ರಸ್ತೆಗಳು
ಈ ವೇಳೆ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ರಾಘವೇಂದ್ರ ಪ್ರಸಾದ್, ಅಧೀಕ್ಷ ಎಂಜಿನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications