ಮೈಸೂರು ಮಸಾಲಾ ದೋಸಾ ಬೇಕಾ, ಬಾಂಬೆ ಜಿಲೇಬಿ ಬೇಕಾ?
ಮೈಸೂರು ಮಸಾಲಾ ದೋಸೆ, ಕೊಲ್ಕತ ರಸಗುಲ್ಲಾ, ಮಧುರೈ ಜಿಗರ್ದಂಡ, ಬನಾರಸಿ ಪಾನ್ ಮತ್ತು ಲಸ್ಸಿ, ಮುರುಗ ಇಡ್ಲಿ, ಬಾಂಬೆ ಜಿಲೇಬಿ, ಇವುಗಳ ಹೆಸರು ಓದುತ್ತಿದ್ದಂತೆಯೇ ನಿಮ್ಮ ಬಾಯಲ್ಲಿ ಜುಳುಜುಳನೆ ನೀರೂರುತ್ತಿದೆ ಅಂತಾನೂ ಗೊತ್ತು. ತಿನ್ನಲು ನೀವು ಚಟಪಡಿಸುತ್ತಿದ್ದೀರಿ ಅಂತಾನೂ ಗೊತ್ತು.
ಇವಿಷ್ಟನ್ನು ಸವಿಯಲು, ನೀವು ಆಯಾ ಊರುಗಳಿಗೆ ಹೋಗಬೇಕೆಂದಿಲ್ಲ. ಈ ಸ್ವಾದಿಷ್ಟ ಮತ್ತು ರುಚಿಕಟ್ಟಾದ ಖಾದ್ಯಗಳು ನಮ್ಮ ಬೆಂಗಳೂರಿನಲ್ಲಿ, ಜನವರಿ 22, 23, 24ರಂದು, ಶುಕ್ರವಾರದಿಂದ ಭಾನುವಾರದವರೆಗೆ ಬಸವನಗುಡಿಯಲ್ಲಿ ನಡೆಯಲಿರುವ "ರುಚಿ ಸಂತೆಯಲ್ಲಿ" ನಿಮಗೆ ಸಿಗಲಿವೆ. ಬೆಂಗಳೂರೆಂಬೋ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ತಿಂಡಿಪೋತರ ಸ್ವರ್ಗವಾಗಿದೆ ಎಂಬುದು ಜಿಹ್ವಾಪಂಡಿತರ ಅಂಬೋಣ.
ಯುನಿಕ್ 360 ಕನಸಿನ ಕೂಸಾದ ರುಚಿ ಸಂತೆ, 3 ದಿನಗಳ ಕಾಲ ಜಾತ್ರೆಯ ಸಂಭ್ರಮವನ್ನು ಹೊತ್ತು ತರಲಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕನ್ನಡ ಸ್ನೇಹಿತರು ಫೇಸ್ ಬುಕ್ ಮೂಲಕ ಪರಿಚಿತರಾಗಿ ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸ ಮಾಡೋಣ ಎಂದು ಒಟ್ಟಾಗಿ, ಯಾವುದೇ ಹೆಸರು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ದುಡಿಯುವ ಧ್ಯೇಯದೊಂದಿಗೆ ಯುನಿಕ್ 360 (Unik 360) ಸ್ಥಾಪನೆಯಾಗಿದೆ. [ನಾಲಗೆ ಚಪಲ ತಣಿಸುವ ರುಚಿಸಂತೆ, ನೀವೂ ಬರ್ತೀರಂತೆ]
ರುಚಿ ಸಂತೆಯಲ್ಲಿ, 100ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ, ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಭಾರತ ಶೈಲಿಯ ಶುದ್ಧ ಸಸ್ಯಾಹಾರಿ ಆಹಾರಗಳ ಜಾತ್ರೆ ನಡೆಯುತ್ತದೆ. ಜೊತೆಗೆ, ಭಾರತದ ಇತರೆ ಪ್ರದೇಶಗಳ ಆಹಾರದ ಸವಿಯನ್ನು ಸವಿಯಬಹುದು. ಇಲ್ಲಿ ಸಿಗುವ ಪ್ರತಿಯೊಂದು ಆಹಾರವೂ ಪರಿಶುದ್ಧ ಸಸ್ಯಾಹಾರಿ ಆಹಾರವಾಗಿರುತ್ತದೆ.
ಬಗೆಬಗೆಯ ಆಹಾರ ಪದಾರ್ಥಗಳ ರುಚಿ ತೋರಿಸುವುದಷ್ಟೇ ಅಲ್ಲಾ, ರುಚಿ ಸಂತೆ ಪ್ರಮುಖವಾಗಿ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳನ್ನು ಪರಿಚಯಿಸುತ್ತದೆ. ಸಂಕ್ರಾಂತಿ ಸುಗ್ಗಿಯ ಸಮಯವಾಗಿದ್ದರಿಂದ ಸ್ವಾದಿಷ್ಟಕರ ಹುಗ್ಗಿ ಸಿಕ್ಕರೂ ಸಿಗಬಹುದು. ಸಿಕ್ಕರೆ ಒಂದು ಕೈ ನೋಡೇಬಿಡಿ.
ಇದು ಬರೀ ತಿಂಡಿಪೋತರ ಜಾತ್ರೆಯಲ್ಲ. ಸಿದ್ಧ ಆಹಾರ, ಕಿಚನ್ ವೇರುಗಳ ಮಾರಾಟ, ಜೊತೆಗೆ, ಗಿನ್ನಿಸ್ ದಾಖಲೆ ಮಾಡಿರುವ ಬ್ಯಾಲನ್ಸರ್ ನಿಶ್ಚಲ್ ನೇತ್ರಾನಂದ ಅವರಿಂದ ಬ್ಯಾಲನ್ಸ್ ಪ್ರದರ್ಶನ, ವಾಕಿಂಗ್ ವಯಲಿನ್ ವಾದಕ ಎಂದೇ ಪ್ರಖ್ಯಾತವಾಗಿರುವ ಅನೀಶ್ ವಿದ್ಯಾಶಂಕರ್ ಅವರ ವಯಲಿನ್ ವಾದನ, ವಾಸು ದೀಕ್ಷಿತ್ ಅವರ ಗಾನ ಸುಧೆ, ಬೀಟ್ ಗುರುಗಳ ಜಂಭೆ ವಾದನ, ರೂಪಾ ರವಿಚಂದ್ರನ್ ಮತ್ತು ಗಜೇಂದ್ರ ಶರ್ಮಾ ಮತ್ತು ತಂಡದವರಿಂದ ಭರತನಾಟ್ಯ, ಸುಧಾ ಬರಗೂರ್ ಅವರ ಹಾಸ್ಯ ಕಚಗುಳಿ, ವನಿತಾ ಅಶೋಕ್ ಅವರ ಫಿಟ್ನೆಸ್ ಮಂತ್ರ ಮುಂತಾದ ಮನರಂಜನೆಯ ಮಹಾಪೂರವೇ ಹರಿಯಲಿದೆ. [ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]
ಸುಮಾರು 150 ಲೇಡೀಸ್ ಕ್ಲಬ್ ಗಳಲ್ಲಿ ನಾನಾ ಹಂತಗಳಲ್ಲಿ ನಾನಾ ಹಂತಗಳಲ್ಲಿ ನಡೆದ ಅಡುಗೆ ಸ್ಪರ್ಧೆಯ ಅಂತಿಮ ಹಂತ "ಸೂಪರ್ ಶೆಫ್" ರುಚಿ ಸಂತೆಯಲ್ಲಿ ನಡೆಯುತ್ತದೆ. ಇಲ್ಲಿ ಗೆದ್ದವರಿಗೆ, "ಸೂಪರ್ ಶೆಫ್ ಕ್ವೀನ್" ಎಂಬ ಬಿರುದು ಕೊಡಲಾಗುತ್ತದೆ. ಇದರ ಜೊತೆಗೆ ಮಹಿಳಾ ಕಾರ್ಪೊರೇಟರುಗಳು ಮತ್ತು ಪ್ರಖ್ಯಾತ ತಾರೆಯರಿಗಾಗಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಹಲವು ಕ್ಷೇತ್ರಗಳ ಮಾಜಿ ಹಾಗು ಹಾಲಿ ಮಹಿಳಾ ಕಾರ್ಪೊರೇಟರುಗಳು ಮತ್ತು ಪ್ರಖ್ಯಾತ ತಾರೆಯರು ಭಾಗವಹಿಸಲಿದ್ದಾರೆ. ಈ ಎಲ್ಲಾ ಸ್ಪರ್ಧೆಗಳಿಗೆ ಭೋಜನ ಪ್ರಿಯ ಸಿಹಿಕಹಿ ಚಂದ್ರು ಅವರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ಪ್ರವೀಣ್ ಗೊಡ್ಖಿಂಡಿ ಮತ್ತಿತರ ಖ್ಯಾತನಾಮರು ಆಗಮಿಸಲಿದ್ದಾರೆ.
ರುಚಿ ಸಂತೆ ಜನವರಿ 22, 23, 24ರಂದು ಬಸವನಗುಡಿಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ 3 ದಿನಗಳ ಕಾಲ ನಡೆಯಲಿದೆ. ಬನ್ನಿ, ರುಚಿ ಸವಿಯಿರಿ ಮತ್ತು ಆನಂದಿಸಿರಿ.