ರೈತರ ಹಾಲು ಉತ್ಪಾದಕರ ಡೈರಿ ನೋಂದಣಿಗೂ 25 ಸಾವಿರ ಲಂಚ: ಎಸಿಬಿ ಬಲೆಗೆ ಅಧಿಕಾರಿ
ಬೆಂಗಳೂರು, ಫೆ. 15: ದಾಸನಪುರದ ಮೈಹಿಮಣ್ಣನ ಪಾಳ್ಯದಲ್ಲಿ ರೈತರ ಹಾಲು ಉತ್ಪಾದಕರ ಸಂಘ ಪ್ರಾರಂಭಕ್ಕಾಗಿ ನೋಂದಣಿ ಮಾಡಲು 25 ಸಾವಿರ ರೂ. ಲಂಚ ಸ್ವೀಕರಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಮಲ್ಲೇಶ್ವರಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕೇಸ್ ವರ್ಕರ್ ಸುನೀಲ್ ಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಲಂಚ ಹಣದ ಸಮೇತ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಕೇಸು ದಾಖಲಿಸಿದ್ದಾರೆ.
ಬೆಗಳೂರು ಉತ್ತರ ತಾಲೂಕು ದಾಸನಾಪುರ ಹೋಬಳಿಯ ಮೈಹಿಮಣ್ಣ ಪಾಳ್ಯದಲ್ಲಿ ರೈತರ ಹಾಲು ಉತ್ಪಾದಕರ ಸಹಕಾರ ಸಂಘ ತೆಗೆಯಲು ಮಲ್ಲೇಶ್ವರಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿ ವಿಲೇವಾರಿ ಮಾಡಲು 40 ಸಾವಿರ ರೂ. ಲಂಚ ನೀಡುವಂತೆ ಕೇಸ್ ವರ್ಕರ್ ಸುನೀಲ್ ಕುಮಾರ್ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ 25 ಸಾವಿರ ರೂ. ಲಂಚಕ್ಕೆ ಪೀಡಿಸಿದ್ದು, ನಂತರದಲ್ಲಿ ಹತ್ತು ಸಾವಿರ ನೀಡುವಂತೆ ಸೂಚಿಸಿದ್ದಾನೆ.
ಮುಂಗಡವಾಗಿ ಹಣ ಪಡೆದಿದ್ದ ಸುನೀಲ್ ಕುಮಾರ್, ಎರಡನೇ ಸಲ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications