ಸಿಲಿಕಾನ್ ಸಿಟಿಯಲ್ಲಿ 'ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ' ಜಾರಿ
ಬೆಂಗಳೂರು, ಜುಲೈ 15: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021ಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
"ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021 ಜಾರಿಯಿಂದ ಸ್ವಯಂ-ಉದ್ಯೋಗ, ಪರಿಸರ ಸ್ನೇಹಿ ವಾತಾವರಣಕ್ಕೆ ಉತ್ತೇಜನ, ಇಂಧನ ಸಂರಕ್ಷಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು "ಎಂದು ಸಿಎಂ ಹೇಳಿದ್ದಾರೆ.
ಬೈಕ್ ಟ್ಯಾಕ್ಸಿ ಬಳಕೆ ಸಂದರ್ಭದಲ್ಲಿ ಪ್ರಯಾಣಿಕರು ಸಂಚರಿವು ಮಾರ್ಗವು 10 ಕಿ.ಮೀ ಗಿಂತ ಹೆಚ್ಚಾಗಿರಬಾರದು. ಯಾವ ಮಾರ್ಗದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬುದನ್ನು ಪ್ರಾಧಿಕಾರವು ಕಾಲ ಕಾಲಕ್ಕೆ ನಿರ್ಧರಿಸುತ್ತದೆ.

ಸಿಲಿಕಾನ್ ಸಿಟಿ ಜನರಿಗೆ ಉಪಯೋಗ:
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಡುವೆ ಸರಿಯಾದ ಸಮಯಕ್ಕೆ ನಿಗದಿತ ಪ್ರದೇಶವನ್ನು ತಲುಪುದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಪ್ರಯಾಣದ ಸಮಯವನ್ನು ಉಳಿಸುವುದು, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ತಲುಪುವುದಕ್ಕೆ ಯೋಜನೆ ಅನುಕೂಲಕರವಾಗಲಿದೆ. ಸಾರ್ವಜನಿಕ ಹಾಗೂ ಖಾಸಗಿ ಕಂಪನಿಗಳ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲು ಅನುಮತಿ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರಾಧಿಕಾರವು ಪರವಾನಗಿಯನ್ನು ನೀಡಲಿದೆ.
ಈ ಯೋಜನೆಯಡಿ ನೋಂದಾಯಿಸಲಾದ ವಾಹನಗಳು ಸಾರಿಗೆ ವಿಭಾಗಕ್ಕೆ ಸೇರಿರುತ್ತವೆ. ಇದಕ್ಕಾಗಿಯೇ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಪರವಾನಗಿ, ತೆರಿಗೆ ಮತ್ತು ಆರ್ಥಿಕ ಪ್ರಯೋಜನ ಸೇರಿದಂತೆ ಹಲವು ವಿನಾಯಿತಿಗಳನ್ನು ನೀಡಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.












Click it and Unblock the Notifications