ಹೈಕಮಾಂಡ್ ಬುಲಾವ್, ಯಡಿಯೂರಪ್ಪ ದಿಢೀರ್ ದೆಹಲಿ ಪ್ರವಾಸ
ಬೆಂಗಳೂರು, ಜನವರಿ 29: ಸಿಎಂ ಯಡಿಯೂರಪ್ಪ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಈ ದಿಢೀರ್ ದೆಹಲಿ ಭೇಟಿ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೇಳಲೆಂದೇ ಆಗಿದೆ.
ನಾಳೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಸಂಜೆ ವೇಳೆಗೆ ದೆಹಲಿಗೆ ವಿಮಾನ ಹತ್ತಲಿದ್ದಾರೆ ಸಿಎಂ ಯಡಿಯೂರಪ್ಪ.
ಸಚಿವ ಸಂಪುಟ ಸೇರಲಿರುವವರ ಪಟ್ಟಿಯನ್ನು ಯಡಿಯೂರಪ್ಪ ಸಿದ್ದಪಡಿಸಿಕೊಂಡಿದ್ದು, ಪಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಗೆ ಬರುವಂತೆ ಸ್ವತಃ ಹೈಕಮಾಂಡ್ ಬುಲಾವ್ ನೀಡಿದ್ದರಿಂದ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ.

ಮೊದಲಿಗೆ ಜೆ.ಪಿ.ನಡ್ಡಾ ಭೇಟಿ ಆಗಲಿರುವ ಯಡಿಯೂರಪ್ಪ ನಂತರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಕೆಲವು ಸಚಿವರನ್ನು ಭೇಟಿ ಆಗಿ ರಾಜ್ಯದ ಪರವಾಗಿ ಕೆಲವು ಮನವಿಗಳನ್ನು ಸಲ್ಲಿಸಲಿದ್ದಾರೆ.
ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ಆಗಲಿದ್ದು, ಶುಕ್ರವಾರ ಅಥವಾ ಭಾನುವಾರ ಹೊಸದಾಗಿ ಸಂಪುಟ ಸೇರಲಿರುವವರ ಪಟ್ಟಿ ಬಿಡುಗಡೆ ಆಗಲಿದೆ.
ಯಡಿಯೂರಪ್ಪ ಅವರ ನಿರ್ಣಯದಂತೆಯೇ ಸಂಪುಟ ವಿಸ್ತರಣೆ ಆಗಲಿದ್ದು, ಅವರು ಸೂಚಿಸಿದ ಅಭ್ಯರ್ಥಿಗಳೇ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಬೆಳಗಾವಿ ಜಿಲ್ಲೆಯಿಂದ ಉಪಚುನಾವಣೆ ಸ್ಪರ್ಧಿಸಿ ಗೆದ್ದಿರುವ ಮೂವರಿಗೂ ಸಚಿವ ಸ್ಥಾನ ಪಕ್ಕಾ ಎಂದು ಹೇಳಿದ್ದಾರೆ.












Click it and Unblock the Notifications