ಕುಮಾರಸ್ವಾಮಿ ಕರೆದ ಮಹತ್ವದ ಸಭೆಗೆ ಗೈರಾದ ರಮೇಶ್ ಜಾರಕಿಹೊಳಿ
ಬೆಂಗಳೂರು, ಜೂನ್ 07: ಬೆಳಗಾವಿ ಜಿಲ್ಲೆಯ ನೀರಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಅವರು ಕರೆದಿದ್ದ ಸಭೆಗೆ ಇಂದು ರಮೇಶ್ ಜಾರಕಿಹೊಳಿ ಅವರು ಗೈರಾದರು. ಗೈರುಹಾಜರಿಗೆ ಅವರು ಕಾರಣ ನೀಡಿದ್ದಾರಾದರೂ, ಅವರ ಈ ಗೈರು ಉದ್ದೇಶಪೂರ್ವಕ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬೆಳಗಾವಿಗೆ ನೀರು ಹರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ ಹೇರುವ ಬಗ್ಗೆ ಚರ್ಚಿಸಲು ಕುಮಾರಸ್ವಾಮಿ ಅವರು ಇಂದು ಜಿಲ್ಲೆಯ ಶಾಸಕರ, ಮುಖಂಡರ, ರೈತ ಮುಖಂಡರು, ಅಧಿಕಾರಿಗಳ ಸಭೆಯನ್ನು ಇಂದು ಕುಮಾರಸ್ವಾಮಿ ಕರೆದಿದ್ದರು. ಆದರೆ ಈ ಸಭೆಗೆ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಗೈರಾಗಿದ್ದರು.
ಕುಮಾರಸ್ವಾಮಿ ಅವರು ಕರೆದ ಸಭೆಗೆ ಹೋಗುವುದಕ್ಕೂ ಮೊದಲು, ಸೆವೆನ್ ಕ್ವಾಟರ್ಸ್ನಲ್ಲಿ ಶಾಸಕರಾದ ಮಹೇಶ್ ಕುಮಟಳ್ಳಿ, ಬೆಳಗಾವಿಯ ಕನ್ನಡ ಸಂಘದ ಮುಖಂಡರು, ರೈತ ಸಂಘದ ಮುಖಂಡರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು.

ಸಭೆಗೆ ಮುನ್ನಾ ರಮೇಶ್ ಜಾರಕಿಹೊಳಿ ಭೇಟಿ
ನೀವೆಲ್ಲರೂ ಸಭೆಗೆ ಹಾಜರಾಗಿ ಚರ್ಚೆ ಮಾಡಿ, ನಾನು ದೂರವಾಣಿ ಮೂಲಕ ಸಿಎಂ ಅವರ ಜೊತೆ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ ಎಂದು ಮಹೇಶ್ ಕುಮಟಳ್ಳಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ವ್ಯತಿರಿಕ್ತ ರಾಜಕೀಯ ಅರ್ಥ ಕಲ್ಪಿಸುತ್ತಾರೆಂಬ ಭಯ
ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಮೈತ್ರಿ ಸರ್ಕಾರವನ್ನು ಉರುಳಿಸಿಯೇ ತೀರಬೇಕೆಂದು ನಿಶ್ಚಯಿಸಿದ್ದಾರೆ. ಈ ಸಯದಲ್ಲಿ ಅವರು ಸಿಎಂ ಅವರನ್ನು ಭೇಟಿ ಮಾಡಿದರೆ ರಾಜಕೀಯವಾಗಿ ಬೇರೆಯದ್ದೇ ಅರ್ಥ ಕಲ್ಪಿಸುತ್ತಾರೆ ಎಂಬ ಭಯದಿಂದ ರಮೇಶ್ ಜಾರಕಿಹೊಳಿ ಅವರು ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ.

ಮಹೇಶ್ ಕುಮಟಳ್ಳಿ ಭಾಗಿ
ಮುಖ್ಯಮಂತ್ರಿ ಅವರು ಇಂದು ಕರೆದಿರುವ ಸಭೆಗೆ ಅತೃಪ್ತ ಶಾಸಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಹೇಶ್ ಕುಮಟಳ್ಳಿ ಅವರು ಭಾಗವಹಿಸಿದ್ದಾರೆ. ಅವರೊಂದಿಗೆ ಜಿಲ್ಲೆಯ ಇತರ ಶಾಸಕರೂ ಭಾಗವಹಿಸುತ್ತಿದ್ದಾರೆ. ಜೊತೆಗೆ ರೈತ ಮುಖಂಡರು, ಕನ್ನಡ ಪರ ಸಂಘಟನೆಗಳ ಸದಸ್ಯರು ಭಾಗವಹಿಸುತ್ತಿದ್ದಾರೆ.

ಸಮಾನ ಮನಸ್ಕರ ಸಭೆ ಕರೆದಿರುವ ರಮೇಶ್
ರಮೇಶ್ ಜಾರಕಿಹೊಳಿ ನಾಳೆ ಸಮಾನಮನಸ್ಕರ ಸಭೆ ಕರೆದಿದ್ದು, ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವವರನ್ನು ನಾಳಿನ ಸಭೆಗೆ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಎಂಬುದರ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಊಹಿಸಲಾಗಿದೆ.












Click it and Unblock the Notifications