ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಿಸಲು ಎಚ್.ಡಿ.ಕುಮಾರಸ್ವಾಮಿ ಕರೆ
ಬೆಂಗಳೂರು, ಜೂನ್ 05 : 'ಪರಿಸರಕ್ಕೆ ಆಗಿರುವ ಹಾನಿಯನ್ನು ಈಗಲಾದರೂ ಮನಗಂಡು ಮಾಲಿನ್ಯ ತಡೆಗೆ ಕೈಜೋಡಿಸಬೇಕು ಹಾಗೂ ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಿ ಮಾಡಬೇಕು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ಮಂಗಳವಾರ ಚೌಡಯ್ಯ ಸ್ಮಾರಕ ಭವನದಲ್ಲಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಪರಿಸರ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರಧಾನ ಸಮಾರಂಭ - 2018 ಅನ್ನು ಉದ್ವಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಉತ್ಪನ್ನ ನಿಗ್ರಹಕ್ಕೆ ಶೇ.5ರಷ್ಟು ಹೆಚ್ಚುವರಿ ತೆರಿಗೆ ಹೇರಲು ಸರ್ಕಾರ ಚಿಂತನೆ
'ಪರಿಸರ ದಿನಾಚರಣೆ ಒಂದು ಸಮಾರಂಭವಾಗದೆ, ನೆಲ, ಜಲ, ವಾತಾವರಣ ರಕ್ಷಣೆಗೆ ಎಲ್ಲರೂ ಪಣತೊಡಬೇಕು. 1973 ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಪರಿಸರ ರಕ್ಷಣೆಗಳನ್ನು ಮಾಡಿದ್ದರು' ಎಂದರು.
'ಈಗ ಹವಾಗುಣಗಳಲ್ಲಿ ಏರುಪೇರಾಗಿ, ತಾಪಮಾನ ಹೆಚ್ಚಳವಾಗಿದೆ. ಮರಗಿಡಗಳನ್ನು ಕಡಿದು ಹಾಕುತ್ತಿದ್ದೇವೆ. ಪ್ರತಿಯೊಬ್ಬರೂ ಮನೆಯ ಸುತ್ತಮುತ್ತಲ ಸಸಿಗಳನ್ನು ನೆಟ್ಟು ಪರಿಸರವನ್ನು ಮಾಲಿನ್ಯ ಮುಕ್ತವಾಗಿಸಬೇಕು. ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರದ ಮಟ್ಟದಲ್ಲಿ ಸಹ ಚಿಂತನೆ ನಡೆಸಲಾಗುತ್ತದೆ' ಎಂದು ಹೇಳಿದರು.
ಬಿಸಾಡಿದ ಪ್ಲಾಸ್ಟಿಕ್ ಕೊಳೆತು ಮಣ್ಣಾಗಲು ಬೇಕು 250 ವರ್ಷ!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ವಿವಿಧ ಸಂಸ್ಥೆ, ವಿವಿಧ ಜಿಲ್ಲಾ ಮುಖ್ಯಸ್ಥರಿಗೆ, ಶಾಲೆಗಳಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಎನ್.ಸಂಪರ್ ರಾಜ್, ಚಿತ್ರನಟ ದರ್ಶನ್ ಮುಂತಾದವರು ಉಪಸ್ಥಿತರಿದ್ದರು.