ಬೆಂಗಳೂರಿನ ವಸತಿ ಸಮುಚ್ಚಯಕ್ಕೆ ಸಿಎಂ ಭೇಟಿ; ರಾಜ್ಯದ ಅತಿವೃಷ್ಟಿ ವಿವರ ಕೇಳಿದ ಪ್ರಧಾನಿ!
ಬೆಂಗಳೂರು, ನವೆಂಬರ್ 23: ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉದ್ಯಾನ ನಗರಿ ಬೆಂಗಳೂರು ನಲುಗಿ ಹೋಗಿದ್ದು, ನಗರದ ಹಲವೆಡೆ ಮಂಗಳವಾರ ಕೂಡ ಮಳೆ ಅವಾಂತರ ಮುಂದುವರೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಯಲಹಂಕದ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ, ನೆಹರು ಸಂಶೋಧನಾ ಕೇಂದ್ರ, ಮಾನ್ಯತಾ ಟೆಕ್ ಪಾರ್ಕ್ ಗೆ ಭೇಟಿ ನೀಡಿ ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಜೀಪ್ನಲ್ಲಿ ತೆರಳಿ ಮಳೆ ಅವಾಂತರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕರೆ ಮಾಡಿ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಮ್ಮ ಸರ್ಕಾರ ತೆಗೆದುಕೊಂಡಿರುವ ರಕ್ಷಣಾ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿವರ ನೀಡಲಾಗಿದೆ.

ವಿಶೇಷವಾಗಿ ಜೀವಹಾನಿ ಮತ್ತು ಬೆಳೆಹಾನಿಯ ಬಗ್ಗೆ ಪ್ರಧಾನಮಂತ್ರಿಗಳು ಕಳಕಳಿ ವ್ಯಕ್ತಪಡಿಸಿ, ರಾಜ್ಯಕ್ಕೆ ಸಾಧ್ಯವಿರುವ ಸಹಕಾರ, ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ನೆಲಮಹಡಿ ಜಲಾವೃತ
ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ನಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನ ನೆಲಮಹಡಿ ಜಲಾವೃತವಾಗಿದೆ. 2 ಸಾವಿರಕ್ಕೂ ಹೆಚ್ಚು ಜನರು, 3 ದಿನಗಳಿಂದ ಮನೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಅಪಾರ್ಟ್ಮೆಂಟ್ ಸಮೀಪವೇ ಇದ್ದ ಕೆರೆ ಕೋಡಿಯಿಂದ ಹರಿದ ನೀರು, ನೇರಾನೇರ ಅಪಾರ್ಟ್ಮೆಂಟ್ನತ್ತ ನುಗ್ಗಿದೆ. ಪಾರ್ಕಿಂಗ್ ಬೇಸ್ಮೆಂಟ್ನಲ್ಲಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು ನಿವಾಸಿಗಳು ಕಂಗಾಲಾಗಿದ್ದಾರೆ.

ಎಸ್ಡಿಆರ್ಎಫ್ನಿಂದ ಬೋಟ್ ಮೂಲಕ ನಿವಾಸಿಗಳ ಸ್ಥಳಾಂತರ
ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ಗೆ 5 ಅಡಿ ಎತ್ತರಕ್ಕೆ ನೀರು ನುಗ್ಗಿತ್ತು. ಸದ್ಯ ಇಂದು ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈಗ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರು ನಿಂತಿದೆ. ಹೀಗಾಗಿ ಎಸ್ಡಿಆರ್ಎಫ್ನಿಂದ ಬೋಟ್ ಮೂಲಕ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಸಿಬ್ಬಂದಿಗಳ ಅಪಾರ್ಟ್ಮೆಂಟಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಆನ್ಲೈನ್ನಲ್ಲಿ ಅಗತ್ಯವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಅಪಾರ್ಟ್ಮೆಂಟ್ನ ಕಾಂಪೌಂಡ್ ಒಡೆದು ಮಳೆ ನೀರನ್ನು ಪಂಪ್ ಮಾಡಿ ಹೊರ ಹಾಕಲಾಗುತ್ತಿದೆ.

ನಿನ್ನೆ ಕೂಡ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸಿವಿಲ್ ಡಿಫೆನ್ಸ್, ಹೋಂ ಗಾರ್ಡ್ ಟೀಮ್ ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಕರೆತಂದಿದ್ದರು. ಇನ್ನು ಅಪಾರ್ಟ್ಮೆಂಟ್ ನಿವಾಸಿಗಳ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿತ್ತು.
ನೆಹರು ಸಂಶೋಧನಾ ಕೇಂದ್ರದಲ್ಲೂ ಮಳೆ ಹಾನಿ:
ಭಾರಿಮಳೆಯಿಂದ ಜಕ್ಕೂರು ವಿಮಾನ ನಿಲ್ದಾಣ ಸಮೀಪದಲ್ಲಿ ಇರುವ ಜವಾಹರ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೀರು ನಿಂತು ಭಾರಿ ಅವಾಂತರ ಸೃಷ್ಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸಂಸ್ಥೆಯ ಮುಖ್ಯಸ್ಥ ಭಾರತ ರತ್ನ ಸಿ.ಎನ್. ಆರ್. ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮಳೆಯಿಂದಾಗಿ ಸಂಶೋಧನಾ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಮಳೆಯಿಂದಾಗಿ ಕೊಟ್ಯಂತರ ರೂಪಾಯಿ ನಷ್ಟವಾಗಿರುವ ಅಂದಾಜಿದೆ. ಪ್ರತಿ ಬಾರಿ ಮಳೆಯಾದಾಗಲೂ ಇಲ್ಲಿ ಸಮಸ್ಯೆಯಾಗುತ್ತಿದೆ. ಪಕ್ಕದ ರಾಜಕಾಲುವೆಯಿಂದ ಮಳೆ ನೀರು ಕೇಂದ್ರದೊಳಗೆ ನುಗ್ಗುತ್ತವೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಕೇಂದ್ರದಿಂದ ಸರ್ಕಾರಕ್ಕೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪರಿಹಾರ ಯೋಜನೆ ರೂಪಿಸದಿರುವುದರಿಂದ ಈ ರೀತಿಯ ಹಾನಿಯಾಗಿದೆ ಎಂದು ಮುಖ್ಯಮಂತ್ರಿಯ ಗಮನಕ್ಕೆ ತರಲಾಯಿತು. ನೆಹರೂ ಕ್ಯಾಂಪಸ್ನಲ್ಲಿ ಆಗಿರುವ ಹಾನಿಯಾದ ಬಗ್ಗೆ ಸಂಪೂರ್ಣ ವರದಿಯನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂಡ ಮಾನ್ಯತಾ ಟೆಕ್ಪಾರ್ಕ್ಗೂ ಭೇಟಿ ನೀಡಿ ಮಳೆಹಾನಿ ಕುರಿತ ಪರಿಶೀಲನೆ ನಡೆಸಿತು.












Click it and Unblock the Notifications