ಬೆಂಗಳೂರಲ್ಲಿ 221 ರಸ್ತೆಗುಂಡಿ ಮುಚ್ಚುವುದು ಬಾಕಿ: ಕೋರ್ಟ್ ದಾರಿ ತಪ್ಪಿಸುತ್ತಿರುವ ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 23: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಗುರುತಿಸಿ ಬಾಕಿ ಉಳಿದ 221 ಗುಂಡಿಗಳನ್ನು ಉಂದಿನ 10 ದಿನಗಳಲ್ಲಿ ಮುಚ್ಚಲಾಗುವುದು ಎಂದು ಹೈಕೋರ್ಟ್ಗೆ ಬಿಬಿಎಂಪಿ ಭರವಸೆ ನೀಡಿದೆ. ಈ ರೀತಿ ಹಲವು ವರ್ಷಗಳಿಂದ ಹೇಳುತ್ತ ಬಂದಿರುವ ಬಿಬಿಎಂಪಿ ಪುನಃ ಅದೇ ಮಾತನ್ನು ಹೇಳುತ್ತಲೇ ಹೈಕೋರ್ಟ್ನ ಹಾದಿ ತಪ್ಪಿಸುತ್ತಿದೆ ಎನ್ನಲಾಗಿದೆ.
ನಾಗರಿಕ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ರಸ್ತೆಗಳೆಲ್ಲ ಸಂಚರಿಸಿ ರಸ್ತೆಗುಂಡಿ ಎಣಿಕೆ ಮಾಡಿ ಕೋರ್ಟ್ಗೆ ಹೇಳಿದಂತಿರುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಅನೇಕ ಕಡೆ ರಸ್ತೆಗಳಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದರು ಬಿಬಿಎಂಪಿ ಮಾತ್ರ 221 ಗುಂಡಿಗಳು ಬಾಕಿ ಇವೆ ಎಂದು ಹೇಳಿದೆ. ಈ ಮೂಲಕ ನ್ಯಾಯಾಲಯವನ್ನು ದಾರಿ ತಪ್ಪಿಸುವಂತಿದೆ.
ಬಿಎಂಎಸ್ ಟ್ರಸ್ಟ ಅಕ್ರಮ: ಅಶ್ವಥ್ ನಾರಾಯಣ ರಾಜೀನಾಮೆಗೆ ಉಭಯ ಸದನಗಳಲ್ಲಿ ಜೆಡಿಎಸ್ ಪಟ್ಟು
ನಗರದ ಕೇಂದ್ರ ವ್ಯಾಪಾರ ಪ್ರದೇಶದ ಕೆಲವು ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿವೆ. ಇದರ ಹೊರತು ಉಳಿದ ಕೆಲವು ಪ್ರದೇಶಗಳ ರಸ್ತೆಗಳು ವಾಸ್ತವಿಕವಾಗಿ ಅಸ್ತಿತ್ವದಲ್ಲೆ ಇಲ್ಲ ಎಂಬಂತಾಗಿವೆ. ಅಲ್ಲಿನ ರಸ್ತೆಗಳು ಗುಂಡಿಗಳಿಂದಲೇ ತುಂಬಿವೆ. ಹೀಗಿದ್ದರು ಹತ್ತೆ ದಿನದಲ್ಲಿ ಬಾಕಿ ಉಳಿದ ಎಲ್ಲ ಗುಂಡಿ ಮುಚ್ಚುವುದಾಗಿ ಬಿಬಿಎಂಪಿ ಹೇಳಿದೆ. ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹೈಕೋರ್ಟ್ ಮೃಧು ಧೋರಣೆ ತಾಳಿರುವುದನ್ನು ಪಾಲಿಕೆಯು ದಾರಿ ತಪ್ಪಿಸಲು ದುರುಪಯೋಗ ಮಾಡಿಕೊಳ್ಳುತ್ತದೆ ಎಂಬ ಆರೋಪ ಕೇಳಿ ಬಂದಿವೆ.
ವೆಬ್ಸೈಟ್ಗೆ ಪ್ರಚಾರ ನೀಡಲು ಸೂಚಿಸಿದ್ದ ಹೈಕೋರ್ಟ್
ಪದೇ ಪದೆ ಆದೇಶ ಉಲ್ಲಂಘಿಸುತ್ತಿರುವ ಸಂಬಂಧ ಕೆಲವು ಅಧಿಕಾರಿಗಳನ್ನು ಜೈಲಿಗೆ ಕಳುಹಿಸದ ಹೊರತು ಬಿಬಿಎಂಪಿಯಲ್ಲಿ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ರಸ್ತೆ ಗುಂಡಿಗಳ ಕುರಿತು ವರದಿ ಮಾಡಲು ವೆಬ್ಸೈಟ್ ನಿರ್ಮಿಸಿದೆ. ಅದರಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ, ಕ್ರಮ ತೆಗೆದುಕೊಂಡ ವರದಿ ಅಪ್ಲೋಡ್ ಮಾಡಲಾಗುತ್ತಿದೆ ಎಂದು ಹೈಕೋರ್ಟ್ಗೆ ಬಿಬಿಎಂಪಿ ತಿಳಿಸಿದೆ. ಆ ವೆಬ್ಸೈಟ್ ಅನ್ನು ಹೆಚ್ಚು ಪ್ರಚಾರ ಮಾಡುವಂತೆ ಹೈಕೋರ್ಟ್ ಸೂಚಿಸಿರುವುದು ಬಿಬಿಎಂಪಿಗೆ ಮತ್ತೆ ತಲೆನೋವಾಗಿ ಪರಿಣಮಿಸಲಿದೆ.
ಇನ್ನೂ ಕಳೆದ 5 ವರ್ಷದಲ್ಲಿ ರಸ್ತೆ ದುರಸ್ತಿಗೆಂದು ಬಿಬಿಎಂಪಿ 25,000 ಕೋಟಿ ರೂ.ವ್ಯಯಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2021ರಲ್ಲಿ ವಿಧಾನಮಂಡಲಕ್ಕೆ ತಿಳಿಸಿದ್ದರು. ಹಣ ಬಳಕೆ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಸಿವಿಲ್ ಕಾಮಗಾರಿ ಗುತ್ತಿಗೆಯಲ್ಲಿ ಶೇ.40ರಷ್ಟು ಸರ್ಕಾರಕ್ಕೆ ಕಿಕ್ ಬ್ಯಾಕ್ ನೀಡಬೇಕು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಹೀಗಾಗಿಯೇ ಕಾಮಗಾರಿ ನಡೆದ ರಸ್ತೆಗಳಲ್ಲೆ ಕೆಲವೇ ದಿನಕ್ಕೆ ಮತ್ತೆ ಅಲ್ಲಿಯೇ ಗುಂಡಿ ಬೀಳುತ್ತಿವೆ.
ಸಾರ್ವಜನಿಕ ದೂರುಗಳು ಪರಿಶೀಲನೆ ಆಗಬೇಕು
ಬಿಬಿಎಂಪಿ ಅಧಿಕಾರಿಗಳಿಗೆ ತಾವು ಸಲ್ಲಿಸುವ ದಾಖಲೆ, ಪ್ರಮಾಣ ಪತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದುಕೊಂಡಿದ್ದಾರೆ. ಈಗಾಗಲೇ ಬೆಂಗಳೂರು ರಸ್ತೆಗುಂಡಿ, ಕಳಪೆ ಕಾಮಗಾರಿಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.
ಆದ್ದರಿಂದ ಪಾಲಿಕೆಯ ವೆಬ್ಸೈಟ್ ಅಥವಾ ಮೊಬೈಲ್ ಆಪ್ಗೆ ಸಾರ್ವಜನಿಕರಿಂದ ಸಲ್ಲಿಕೆ ಆಗುವ ರಸ್ತೆಗುಂಡಿ ದೂರು, ಅಂಕಿಅಂಶ, ನಂತರ ಪಾಲಿಕೆ ಮುಚ್ಚುವ ರಸ್ತೆಗುಂಡಿ ಬಗ್ಗೆ ಪರಿಶೀಲಿಸಲು ನ್ಯಾಯಾಲಯದ ಅಧಿಕಾರಿಗಳನ್ನು ನೇಮಿಸಬೇಕು. ಇದರಿಂದ ಸಾರ್ವಜನಿಕರನ್ನು ಹಾದಿ ತಪ್ಪಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ಆಡಳಿತದ ಸತ್ಯಾಂಶ ಗೊತ್ತಾಗುತ್ತದೆ.