'ಹಳೆ ಹಾಲು ಬೇಕೋ, ತಾಜಾ ನೀರು ಬೇಕೋ?'
ಬೆಂಗಳೂರು, ಮಾ. 20 : "ಪ್ರಾಯಶಃ ಹಾಲಿನ ಎಕ್ಸ್ಪೈರಿ ದಿನಾಂಕ ಮುಗಿದುಹೋಗಿರೋದ್ರಿಂದ ಹಾಲಿನ ಗುಣಮಟ್ಟದ ಬಗ್ಗೆ ಬೆಂಗಳೂರಿಗರು ಪ್ರಶ್ನೆ ಮಾಡುವ ಸಮಯ ಸನ್ನಿಹಿತವಾಗಿದೆ. ಆಯ್ಕೆ ಇರೋದು ಹದಿನೆಂಟು ವರ್ಷದ ಹಳೆಯ ಹಾಲು ಮತ್ತು ತಾಜಾ ನೀರಿನ ನಡುವೆ. ಬೆಂಗಳೂರಿನ ಜನರಿಗೆ ಬೇಕಿರುವುದು ತಾಜಾ ನೀರೇ ಹೊರತು ಹಳಸಿ ಹಾಲಲ್ಲ."
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ನಂದನ್ ನಿಲೇಕಣಿ ಅವರು, ಹದಿನೆಂಟು ವರ್ಷಗಳಿಂದ ಈ ಕ್ಷೇತ್ರದ ಅಧಿಪತ್ಯ ಸಾಧಿಸಿರುವ ಬಿಜೆಪಿಯ ನಾಯಕ ಅನಂತ್ ಕುಮಾರ್ (5 ಬಾರಿ ಸಂಸದ) ಅವರಿಗೆ ತಿರುಗೇಟು ನೀಡಿರುವ ರೀತಿ ಇದು. ಅನಂತ್ ಕುಮಾರ್ ಅವರು, 'ನಂದನ್ ನೀರು, ನಾನು ಹಾಲು' ಎಂಬ ಹೇಳಿಕೆ ನೀಡಿದ್ದರು.
ಜರಗನಹಳ್ಳಿಯ ಗಂಗಾಧರೇಶ್ವರ ದೇವಸ್ಥಾನದ ಬಳಿ ಬುಧವಾರ ಸಂಜೆ ನಾಲ್ಕು ಗಂಟೆಗೆ ಪದ್ಮ ಭೂಷಣ ನಂದನ್ ನಿಲೇಕಣಿಯ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ಆಡಿದ ಮಾತುಗಳಿವು. ಗಂಗಾಧರೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಆರಂಭಗೊಂಡ ಪಾದಯಾತ್ರೆಯಲ್ಲಿ ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿಯವರೂ ಸೇರಿದಂತೆ ಇನ್ನೂ ಕೆಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದು, ನಿಲೇಕಣಿಯವರಿಗೆ ಬೆಂಬಲ ನೀಡಿದರು. [ನಿಲೇಕಣಿಗೆ ಅನಂತ್ ತಿರುಗೇಟು]

ಅನಂತ್ಗೆ ನಿಲೇಕಣಿ ಬೀಸಿದ ಮಾತಿನ ಚಾಟಿ
"ಅನಂತ್ ಕುಮಾರ್ ಹೇಳ್ತಾರೆ, ನಂದನ್ ಗೆ 18 ವರ್ಷ ರಾಜಕೀಯ ಮಾಡಿ ಗೊತ್ತಿಲ್ಲ ಅಂತ, ಅದೂ ನಿಜಾನ್ನಿ. ಜನರಿಗೆ ಭರವಸೆ ಕೊಟ್ಟು, ಅವನ್ನು ಮುಂದಿನ ಚುನಾವಣೆಯವರೆಗೆ ಮರೆಯೋದು ನಂಗೆ ಗೊತ್ತಿಲ್ಲ. ಬೇರೆಯವರು ಮಾಡಿದ ಕೆಲಸವನ್ನ ನಾನೇ ಮಾಡಿದೆ ಅಂತ ಹೇಳ್ಕೊಂಡು ತಿರುಗಾಡೋದು ನಂಗೆ ಗೊತ್ತಿಲ್ಲ" ಎಂದು ನಿಲೇಕಣಿ ಅನಂತ್ ಅವರು ಮಾತಿನ ಚಾಟಿ ಬೀಸಿದರು.

ಭ್ರಷ್ಟಾಚಾರ ಮಾಡಿದ ಅನುಭವ ನನಗಿಲ್ಲ : ನಿಲೇಕಣಿ
"18 ವರ್ಷ ಅಲ್ಲಾ ಸ್ವಾಮಿ, ಒಂದೇ ಒಂದು ದಿನ ಕೂಡ ಇಂತಹ ಭ್ರಷ್ಟಾಚಾರದ ಕೆಲಸಗಳನ್ನು ಮಾಡಿದ ಅನುಭವ ನಂಗಿಲ್ಲ. ನನ್ನ ಅನುಭವ ಏನಿದ್ರೂ ಇನ್ಫೋಸಿಸ್ ಅಂತಹ ಬೃಹತ್ ಕಂಪನಿಯನ್ನು ಬೇರೆಯವರ ಜೊತೆ ಸೇರಿ ಕಟ್ಟಿ ಬೆಳೆಸಿದ್ದು. ಬಿಎಟಿಎಫ್ ನಲ್ಲಿದ್ದುಕೊಂಡು ಬೆಂಗಳೂರು ಅಭಿವೃದ್ಧಿಗೆ ಕೆಲ್ಸ ಮಾಡಿದ್ದು, ಆಧಾರ್ ಕೆಲ್ಸ ಮಾಡಿದ್ದು. ಇವೆಲ್ಲ ನಾನು ನಿಜಕ್ಕೂ ಮಾಡಿದ ಕೆಲಸಗಳು. ನಾನು ಏನು ಕೆಲ್ಸ ಕೈಗೆ ತಗೊಂಡಿದ್ದೀನೋ, ಆ ಕೆಲ್ಸಗಳನ್ನು ಹೇಳಿದ್ದ ಸಮಯದಲ್ಲಿ ಮಾಡಿಮುಗಿಸಿದೀನಿ" ಎಂದು ಸವಾಲೆಸೆಯುವ ರೀತಿಯಲ್ಲಿ ಅವರು ನುಡಿದರು.

ಬೆಂಗಳೂರನ್ನ ಉತ್ತಮ ನಗರ ಮಾಡ್ತೀನಿ : ನಿಲೇಕಣಿ
"ನಾನು ಬಿಳೇಕಹಳ್ಳಿಯಲ್ಲಿರಲಿ ಅಥವಾ ಕೋರಮಂಗಲದಲ್ಲಿ ಇರಲಿ, ನನ್ನ ಸಂದೇಶ ಒಂದೇ, ನಾನು ದೆಹಲಿಯಲ್ಲಿ ನಿಮ್ಮೆಲ್ಲರ ಧ್ವನಿಯಾಗ್ತೀನಿ. ನಿಮ್ಮೆಲ್ಲರ ಸಮಸ್ಯೆಗಳನ್ನು ಅರ್ಥಮಾಡ್ಕೊಂಡು, ಕೆಲಸ ಮಾಡ್ತೀನಿ. ನಿಮ್ಮಲ್ಲಿ ಪ್ರತಿಯೊಬ್ಬರ ಜೊತೆ ಸೇರಿ ಕೆಲಸ ಮಾಡ್ತಾ ಬೆಂಗಳೂರನ್ನ ಇನ್ನಷ್ಟು ಉತ್ತಮ ನಗರ ಮಾಡ್ತೀನಿ ಅಂತ ಹೇಳಕ್ಕೆ ಬಯಸ್ತೀನಿ" ಎಂದು ನಂದನ್ ಜನರನ್ನುದ್ದೇಶಿಸಿ ಹೇಳಿದರು.

ಕಾಂಗ್ರೆಸ್ಸಿನ ಅತ್ಯಂತ ಶುದ್ಧಹಸ್ತ ನಂದನ್
ನಂದನ್ ಅವರನ್ನು ಸ್ವಾಗತಿಸಿ ಮಾತನಾಡಿದ ಮುಖಂಡರುಗಳು ದಕ್ಷಿಣ ಬೆಂಗಳೂರಿಗರು ಪದ್ಮ ಭೂಷಣ ನಂದನ್ ನಿಲೇಕಣಿಯವರಿಗೆ ಮತ ಹಾಕಬೇಕೆಂದು ಕೋರಿದರು. ಕಾಂಗ್ರೆಸ್ ಮುಖಂಡರೊಂದಿಗೆ ವಾಹನದಲ್ಲಿ ಸಾಗುತ್ತಿದ್ದ ನಂದನ್ ನಿಲೇಕಣಿ ಕೈಬೀಸುತ್ತಿದ್ದಂತೆ ಪಾದಯಾತ್ರೆಯಲ್ಲಿ ಸೇರಿದ್ದ ಜನರೂ "ನಮ್ಮ ಮತ ಕಾಂಗ್ರೆಸ್ ಗೆ", "ಕಾಂಗ್ರೆಸ್ಸಿನ ಅತ್ಯಂತ ಶುದ್ಧಹಸ್ತ ನಂದನ್" ಎಂದು ಧ್ವನಿಗೂಡಿಸಿದರು.

ಪುಟ್ಟೇನಹಳ್ಳಿ, ಜೆಪಿನಗರ, ಅರಕೆರೆ, ಬಿಳೇಕಹಳ್ಳಿಯಲ್ಲಿ ಪಾದಯಾತ್ರೆ
ನಿಲೇಕಣಿಯವರ ಪಾದಯಾತ್ರೆ ಪುಟ್ಟೇನಹಳ್ಳಿ, ಜೆಪಿನಗರ ಮಾರ್ಗವಾಗಿ ಅರಕೆರೆ, ಬಿಳೇಕಹಳ್ಳಿಯತ್ತ ಸಾಗಿದಂತೆ ನೂರಾರು ಬೆಂಬಲಿಗರು, ಸ್ವಯಂಸೇವಕರು ಸೇರಿಕೊಂಡರು. ಉತ್ತಮ ಬೆಂಗಳೂರು ಮಾಡುವ ಏಕೈಕ ಗುರಿಯೊಂದಿಗೆ ಸಾಗುತ್ತಿರುವ ಪ್ರವಾಹದಂತೆ ಪಾದಯಾತ್ರೆ ಕಾಣುತ್ತಿತ್ತು. ಕಾಂಗ್ರೆಸ್ಸಿಗೇ ಮತ ಎಂದು ಜೆಪಿ ನಗರ 24ನೇ ಮುಖ್ಯ ರಸ್ತೆಯ ನಿವಾಸಿ ಹಮೀದ್ ಅಂದರೆ, ಮೈಕೋ ಲೇಔಟಿನ ಗೃಹಿಣಿ ರಾಜಲಕ್ಷ್ಮಿ ಸ್ವಚ್ಛ ಬೆಂಗಳೂರಿಗಾಗಿ ನನ್ನ ಮತ ಅಂದಿದ್ದಾರೆ.












Click it and Unblock the Notifications