ಮಕ್ಕಳ ದಿನ: ಯಡಿಯೂರಪ್ಪ ಬಳಿ ದಿಟ್ಟೆ ಎನ್ನಿಸಿಕೊಂಡ ಕಾವ್ಯಶ್ರೀ ಯಾರು?
"ಬಾಲ್ಯವನ್ನು ಚಿವುಟುವ ಪ್ರಯತ್ನವನ್ನು ದಿಟ್ಟವಾಗಿ ಎದುರಿಸಿದ ಕಾವ್ಯಶ್ರೀ ಇತರರಿಗೆ ಮಾದರಿ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
ಮುಖ್ಯಮಂತ್ರಿಗಳ ಬಳಿಯೇ ದಿಟ್ಟೆ ಎನ್ನಿಸಿಕೊಂಡ ಈ ಕಾವ್ಯಶ್ರೀ ಯಾರು ಎಂಬುದಕ್ಕೂ ಯಡಿಯೂರಪ್ಪ ಉತ್ತರ ನೀಡಿದ್ದಾರೆ.
ಮಕ್ಕಳ ದಿನವಾದ ಇಂದು(ನವೆಂಬರ್ 14) ಮಕ್ಕಳ ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಿದ ಯಡಿಯೂರಪ್ಪ, ಮಕ್ಕಳಿಗೆ ಯಾವುದೇ ತೊಂದರೆ ಎದುರಾದರೂ 1098 ಚಿಲ್ಡ್ರನ್ ಹೆಲ್ಪ್ ಲೈನ್ ಗೆ ಕರೆ ಮಾಡಿ ಎಂದಿದ್ದಾರೆ. ಮಕ್ಕಳ ದಿನಾಚರಣೆಯಂದು ಸಮಸ್ತ ಜನರಲ್ಲಿ ಸವಿನಯ ಪ್ರಾರ್ಥನೆ, ಮಕ್ಕಳನ್ನು ಬದುಕಲು ಬಿಡಿ, ಬೆಳೆಯಲು ಬಿಡಿ, ಬೆಳಗಲು ಬಿಡಿ ಎಂದು ಅವರು ಕೇಳಿಕೊಂಡಿದ್ದಾರೆ.

ಯಾರೀಕೆ ಕಾವ್ಯಶ್ರೀ?
ಮಂಡ್ಯದ ಕೆ. ಆರ್. ಪೇಟೆ ತಾಲೂಕಿನ ಚಟ್ಟೇನಹಳ್ಳಿ ಗ್ರಾಮದ ರಾಮೇಗೌಡ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರಿ ಸಿ. ಆರ್.ಕಾವ್ಯಶ್ರೀಗೆ 15 ವರ್ಷ ವಯಸ್ಸು. ಕಾಲೇಜಿಗೆ ಹೋಗಇ, ಹೆಚ್ಚಿ ವಿದ್ಯಾಭ್ಯಾಸ ಮಾಡುವ ಕನಸು ಕಾಣುತ್ತಿದ್ದ ಆಕೆಗೆ ಕುಟುಂಬಸ್ಥರು ಮದುವೆ ನಿಶ್ಚಯಿಸಿದ್ದರು. ಅದು ಆಕೆಗೆ ಇಷ್ಟವೂ ಇರಲಿಲ್ಲ, ಜೊತೆಗೆ ಬಾಲ್ಯ ವಿವಾಹ ಅಪರಾಧ ಎಂಬುದು ಆಕೆಗೆ ತಿಳಿದಿತ್ತು.
ರಹಸ್ಯವಾಗಿ ತನ್ನನ್ನು ದೇವಾಲಯದಲ್ಲಿ ಮದುವೆ ಮಾಡಿಸಲು ಮನೆಯವರು ಚಿಂತನೆ ನಡೆಸುತ್ತಿರುವುದು ತಿಳಿಯುತ್ತಿದ್ದಂತೆಯೇ ಕಾವ್ಯಶ್ರೀ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಫೋನ್ ಮಾಡಿ ಸಹಾಯ ಕೇಳಿದ್ದಾಳೆ. ನಂತರ ಆಕೆಯನ್ನು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪಾರು ಮಾಡಿದ್ದಾರೆ.
ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಶಿಕ್ಷಕರು ಮಕ್ಕಳಿಗೆ ಸಹಾಯವಾಣಿಯ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂದಿದ್ದ ಈಕೆ ಆ ಸಂಖ್ಯೆಗೆ ಕಾಲ್ ಮಾಡಿದ್ದಳು. ಆಕೆಯ ಧೈರ್ಯ, ಸಮಯಪ್ರಜ್ಞೆಯನ್ನು ಮೆಚ್ಚಿ, ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications