ಕೃಷಿಕರ ಮಕ್ಕಳು ಉದ್ಯಮಿಗಳಾಗಲು ಶ್ರಮಿಸಬೇಕು: ಅಶ್ವಥ್ ನಾರಾಯಣ್
ಬೆಂಗಳೂರು, ನವೆಂಬರ್ 25, 2022: ರೈತರ ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು. ನಿಮಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ, ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ಪ್ರಾದೇಶಿಕ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ರಚಿಸಲಾದ ವೇದಿಕೆ 'ಫರ್ಸ್ಟ್ ಸರ್ಕಲ್' ವತಿಯಿಂದ ನವೆಂಬರ್ 25ರಿಂದ ಮೂರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಬಿಸಿನೆಸ್ ನೆಟ್ ವರ್ಕಿಂಗ್ ಎಕ್ಸ್ ಪೋ ಹಾಗೂ ವಾರ್ಷಿಕ ಸಮಾವೇಶ ಆಯೋಜಿಸಲಾಗಿದೆ. ಈ ಸಮಾರಂಭ ಉದ್ಘಾಟಿಸಿ ಸಚಿವರು ಮಾತನಾಡಿದರು.
ಈ ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು ಉದ್ಯಮಶೀಲತೆಯ ಸ್ಫೂರ್ತಿ ಹೊಂದಿದವರಾಗಿದ್ದಾರೆ. ನೀವೆಲ್ಲರು ಒಕ್ಕಲುತನ (ಕೃಷಿ) ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು. ಕರ್ನಾಟಕದ ಬೆಂಗಳೂರು ಇಡೀ ವಿಶ್ವಕ್ಕೆ ಆವಿಷ್ಕಾರದ ನಾಡಾಗಿ ಗುರುತಿಸಿಕೊಂಡಿದೆ. ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯಭೂಮಿ, ಭರವಸೆಯ ನಾಡಿನಲ್ಲಿ ನಾವಿದ್ದೇವೆ. ಇಲ್ಲಿನ ಅವಕಾಶಗಳನ್ನು ನಿವೆಲ್ಲರು ಅರಿಯಬೇಕು ಎಂದು ತಿಳಿಸಿದರು.

ಉದ್ಯಮಿಗಳಾದ ಮೇಲೆ ಸಮಾಜಕ್ಕೆ ಕೊಡುಗೆ ನೀಡಿ
ಉದ್ಯಮಿಗಳಾಗಿ ಯಶಸ್ಸು ಗಳಿಸಿದ ನಂತರ ಸಮಾಜಕ್ಕೆ ನಿಮ್ಮದೇ ಆದಷ್ಟು ಕೊಡುಗೆ ನೀಡಬೇಕು. ಹೊಸ ಆಲೋಚನೆವುಳ್ಳ ಉದ್ಯಮಿಗಳಿಗೆ ನನ್ನ ಬೆಂಬಲ ಸದಾ ಇದೆ. ಹೊಸ ಆಲೋಚನೆಗಳತ್ತ ಕೊಂಡೊಯ್ಯುವುದು ಮತ್ತು ಉದ್ಯಮಿಗಳನ್ನಾಗಿ ಸನ್ನದ್ಧಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಜೊತೆಯಲ್ಲಿರುವ ನೂರಾರು ಮಂದಿ ಇಂದು ಉದ್ಯಮಿಗಳಾಗಿದ್ದಾರೆ. ಅದೇ ರೀತಿ ಕೃಷಿಕರ ಮಕ್ಕಳು ಉದ್ಯಮಿಗಳಾಗಲು ಶ್ರಮಿಸಬೇಕು ಎಂದು ಪುನರುಚ್ಚರಿಸಿದರು.
ಬಿಬಿಎಂಪಿ ವಿಶೇಷ ಆಯುಕ್ತ ಜೈರಾಮ್ ರಾಯಪುರ ಮಾತನಾಡಿ, ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಈ ಫರ್ಸ್ಟ್ ಸರ್ಕಲ್ ಇನ್ನೂ 25 ಜಿಲ್ಲೆಗಳಿಗೆ ವಿಸ್ತರಿಸಲಿದೆ. ಕ್ರಮೇಣ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಿದೆ. 250ಕ್ಕೂ ಹೆಚ್ಚು ಉದ್ಯಮಿಗಳು ಇದರ ವ್ಯಾಪ್ತಿಗೆ ಮುಂದೆ ಸೇರಿಕೊಳ್ಳಲಿದ್ದಾರೆ. ಇದು ಆಂತರಿಕ ಅರ್ಥ್ಯವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ ಎಂದು ಹೇಳಿದರು.

'ಫರ್ಸ್ಟ್ ಸರ್ಕಲ್' ಇದೊಂದು ಜಾಗತಿಕ ನೆಟ್ವರ್ಕ್
ಫರ್ಸ್ಟ್ ಸರ್ಕಲ್ ಸಂಸ್ಥೆಯು ಪ್ರಾದೇಶಿಕ ಸಮುದಾಯದ ಏಳಿಗೆಗಾಗಿ ಕೊಡುಗೆ ನೀಡಲು ಸಿದ್ದರಿರುವ ವೃತ್ತಿಪರರು, ಸ್ವಯಂ ಉದ್ಯೋಗಿಗಳು, ಹಾಗೂ ವ್ಯಾಪಾರಸ್ಥರನ್ನು ಒಳಗೊಂಡಿದೆ. ಜಾಗತಿಕ ನೆಟ್ ವರ್ಕಿಂಗ್ ಮೂಲಕ ಉದ್ದಿಮೆಗಳನ್ನು ಬೆಳೆಸಲು ಫಸ್ಟ್ ಸರ್ಕಲ್ ಸಹಾಯ ಮಾಡುತ್ತಿದೆ. ಬಹಳ ಅಲ್ಪ ಕಾಲದಲ್ಲಿ ಸಂಸ್ಥೆಯು ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಆದಾಗ್ಯೂ ಬೆಂಗಳೂರು ನಗರಕ್ಕೆ ಮೊದಲ ಆದ್ಯತೆ ನೀಡಲಾಗಿದೆ, ಕ್ರಮೇಣ ಕರ್ನಾಟಕದ ಎಲ್ಲಾ ನಗರಗಳಿಗೂ ವಿಸ್ತರಿಸಲಿದೆ ಎಂದರು.

ಉದಯೋನ್ಮುಖ ಉದ್ಯಮಿಗಳು ಎಕ್ಸ್ಪೋ ಲಾಭ ಪಡೆಯಿರಿ
ಈ ಎಕ್ಸ್ ಪೋ ಕುರಿತು ಫರ್ಸ್ಟ್ ಸರ್ಕಲ್ ಅಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ನಂದೀಶ್ ಎಸ್.ಆರ್ ಅವರು, ಈ ಮೂರು ದಿನಗಳ ಎಕ್ಸ್ ಪೋ ಕರ್ನಾಟಕದ ಉದ್ಯಮಿಗಳಿಗೆ ಜಾಲ ನಿರ್ಮಿಸಿಕೊಳ್ಳಲು, ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಇತರ ಉದ್ಯಮದವರ ಜೊತೆಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ದೇಶ ವಿದೇಶಗಳ ಹೂಡಿಕೆದಾರರು, ಉದ್ಯಮಿಗಳು ಭಾಗವಹಿಸುವ ಈ ಎಕ್ಸ್ ಪೋ ಹಾಗೂ ಸಮ್ಮೇಳನದ ಸದವಕಾಶವನ್ನು ಉದಯೋನ್ಮುಖ ಉದ್ಯಮಿಗಳು ಪಡೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದು ವಿವರಿಸಿದರು.

6ತಿಂಗಳಲ್ಲಿ 57 ಕೋಟಿ ರೂ. ವ್ಯವಹಾರ
ಫರ್ಸ್ಟ್ ಸರ್ಕಲ್ ಸಂಸ್ಥೆಯು 6 ವಲಯಗಳಲ್ಲಿ 150 ಸದಸ್ಯರು ಹಾಗೂ 500+ ಸದಸ್ಯರನ್ನು ಒಳಗೊಂಡಿದ್ದು ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ 57 ಕೋಟಿ ರೂ. ವ್ಯವಹಾರ ನಡೆದಿದೆ.ಫರ್ಸ್ಟ್ ಸರ್ಕಲ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಾವಿರಾರು ಸಂಬಾವ್ಯ ಗ್ರಾಹಕರೊಂದಿಗಿರುವ ಹಲವು ವಲಯಗಳ ಹೂಡಿಕೆದಾರರು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳು, ಯಶಸ್ವಿ ವೃತ್ತಿಪರರು, ಅಧಿಕಾರಿಗಳಿಗಾಗಿ ಶ್ರಮಿಸುತ್ತಿದೆ. ಇದಲ್ಲದೆ ದೇಶಾದ್ಯಂತ ಇರುವ ನವನವೀನ ಸ್ಟಾರ್ಟ್ಅಪ್ಗಳು, ವ್ಯಾಪಾರಿ ಸಂಸ್ಥೆಗಳು ಮತ್ತು ಉದ್ಯಮಿಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.
ಪ್ರಸ್ತುತ ನಡೆಯುತ್ತಿರುವ ಭಾರತದ ಅತ್ಯಂತ ದೊಡ್ಡ ಬೃಹತ್ ಬಿಸಿನೆಸ್ ಎಕ್ಸ್ ಪೋ ದಲ್ಲಿ ಪ್ರಪಂಚದ ವಿವಿಧ ಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಬಿ.ಎನ್.ಬಚ್ಚೇಗೌಡ, ಫ್ರೀಡಂ ಆಪ್ ಸಂಸ್ಥಾಪಕ ಸುಧೀರ್, ಕರ್ನಾಟಕ ಗ್ಯಾಸ್ಟ್ರೊ ಎಂಟರಾಲಜಿ ಇನ್ಸ್ ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕ ಡಾ.ನಾಗೇಶ್, ಫರ್ಸ್ಟ್ ಸರ್ಕಲ್ ಸದಸ್ಯರಾದ ಮನೋಹರ್ ಗೌಡ, ನಂದೀಶ್, ಇಂದ್ರೇಶ್, ಫಿಡೆಲಿಟಸ್ ಸಂಸ್ಥಾಪಕ, ಉದ್ಯಮಿ ಅಚ್ಚುತ್ ಗೌಡ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications