ಕಬ್ಬನ್ಪಾರ್ಕ್ನಲ್ಲಿ ಆಧುನಿಕ ರೀತಿಯ ಅಕ್ವೇರಿಯಂ ನಿರ್ಮಾಣ: ಸಿಎಂ ಬೊಮ್ಮಾಯಿ
ಬೆಂಗಳೂರು, ಜುಲೈ 04: ಮೀನುಗಾರಿಕೆಗೆ ಉತ್ತೇಜನ ನೀಡಿದಷ್ಟೂ ಸ್ವಯಂ ಉದ್ಯೋಗ, ಕೃಷಿಯ ಜೊತೆಗೆ ಮೀನುಗಾರಿಕೆಯಿಂದ ಆದಾಯ ಹೆಚ್ಚಳವಾಗುವುದು ಹಾಗೂ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Recommended Video
ನಗರದ ಕಬ್ಬನ್ ಪಾರ್ಕ್ನಲ್ಲಿ ಸರ್ಕಾರಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಅವರು, ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಮಾಡಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿ ಮಾಡಿದ್ದಾರೆ. ಇದಕ್ಕೆ ಅತಿಹೆಚ್ಚಿನ ಸಹಾಯಧನ ಅತಿ ಹೆಚ್ಚು ಜನರಿಗೆ ದೊರೆತಿದೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಮೀನುಗಾರಿಕೆ ಇಲಾಖೆ ಪಡೆದುಕೊಳ್ಳಬೇಕು ಎಂದರು.
ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ಬೆಂಗಳೂರಲ್ಲಿ ನಿರ್ಮಾಣ
ಕಬ್ಬನ್ ಪಾರ್ಕ್ನಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಜಂಟಿ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣವಾಗಲಿರುವ ಅಕ್ವೇರಿಯಂ ಉತ್ತಮವಾಗಿ ಮೂಡಿಬರಬೇಕು. ಲಾಲ್ಬಾಗ್ನಲ್ಲಿ ಪಿಪಿಪಿ ಮಾದರಿಯಲಿ ಅಕ್ವೇರಿಯಂ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಹಾಗೂ ಇದೇ ಮಾದರಿಯ ಅಕ್ವೇರಿಯಂ ಮಂಗಳೂರಿನ ಕಡಲತೀರದಲ್ಲಿ ನಿರ್ಮಿಸುವ ಉದ್ದೇಶವಿದೆ. ಸಿಂಗಪೂರ್, ದುಬೈ, ಯೂರೋಪ್ಗಳಲ್ಲಿರುವ ಟನಲ್ ಅಕ್ವೇರಿಯಂಗಳಂತೆ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಲಮಟ್ಟಿಯಲ್ಲಿ ಮೀನಿನ ಮರಿ ಸಾಕಾಣಿಕೆ ಕೇಂದ್ರ ಸ್ಥಾಪಿಸಲು ಮೀನುಗಾರಿಗೆ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೇ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದರು.
ಮೀನುಗಾರರಿಗೆ 10 ಸಾವಿರ ಮನೆಗಳ ನಿರ್ಮಾಣ
2021-2022 ನೇ ಸಾಲಿನಲ್ಲಿ ಒಂದು ಮಿಲಿಯನ್ ಟನ್ ಮೀನು ಉತ್ಪಾದನೆ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಮೀನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯಲು ಅವಕಾಶವಿದೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಮೀನುಗಾರರಿಗೆ ಒಟ್ಟು 10 ಸಾವಿರ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದೆ. ರೈತ ವಿದ್ಯಾ ನಿಧಿ ಯೋಜನೆಯನ್ನು ಮೀನುಗಾರರು ಹಾಗೂ ನೇಕಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ದುಡಿಯುವ ವರ್ಗದಿಂದಲೇ ದೊಡ್ಡ ಬದಲಾವಣೆ ತರಬಹುದು. ದುಡಿಯುವ ವರ್ಗಕ್ಕೆ ಸಹಾಯ ಮಾಡಿದರೆ ಅವರ ಆದಾಯದ ಜೊತೆಗೆ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ ಎಂದರು.
ದುಡಿಯುವ ಸಂಸ್ಕತಿಯನ್ನು ಸರ್ಕಾರ ತರುತ್ತಿದೆ. ಉದ್ಯೋಗ ನೀತಿಯನ್ನು ರೂಪಿಸಲಾಗುತ್ತಿದೆ. ಹೆಚ್ಚಿನ ಉದ್ಯೋಗ ನೀಡುವ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುತ್ತಿದೆ. ವೈಜ್ಞಾನಿಕವಾಗಿ ಮೀನುಗಾರಿಕೆಯನ್ನು ಅಭಿವೃದ್ಧಿಗೊಳಿಸಿ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ಕನಸಿದೆ. ಅದನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
100 ವರ್ಷ ವಯಸ್ಸಿನ 317 ಕೆ.ಜಿ. ತೂಕದ ಮೀನು ಪತ್ತೆ
ಬಜೆಟ್ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೂ ಆದ್ಯತೆ
ಮೀನುಗಾರಿಕೆಯ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿನ ಮೇಲೆ ಹೆಚ್ಚಿನ ಒತ್ತು ನೀಡಿ ಅದಕ್ಕೆ ತಕ್ಕಹಾಗೆ ಕಾರ್ಯಕ್ರಮಗಳನ್ನು ಹಾಗೂ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಈಗಾಗಲೇ ಆಯವ್ಯಯದಲ್ಲಿ ಒಳನಾಡು ಮೀನುಗಾರಿಕೆಗೆ ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಂದು ಕೆರೆಯನ್ನು ಮೀಸಲಿಟ್ಟು ಅಲ್ಲಿನ ಆದಾಯವನ್ನು ಪಂಚಾಯತಿಯ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು. ಸುಮಾರು 2500 ಪಂಚಾಯಿತಿಗಳಲ್ಲಿ ಮೀನುಗಾರಿಕೆ ಕೊಳಗಳನ್ನು ಇದೇ ವರ್ಷದಲ್ಲಿ ಪ್ರಾರಂಭ ಮಾಡಲಾಗುವುದು ಎಂದರು.
ಆಳ ಸಮುದ್ರದ ಮೀನುಗಾರಿಕೆಗೆ 100 ಹೈಸ್ಪೀಡ್ ದೋಣಿ ವಿತರಣೆ
ಸಮುದ್ರದಾಳದ ಮೀನುಗಾರಿಕೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗುತ್ತಿದೆ. ಎಂಟು ಮೀನುಗಾರಿಕೆ ಬಂದುರುಗಳ ಹೂಳು ತೆಗೆಸಿ ದೊಡ್ಡ ಸಾಮರ್ಥ್ಯದ ದೋಣಿಗಳು ಅಲ್ಲಿಗೆ ಬರುವಂತೆ ವ್ಯವಸ್ಥೆ ಮಾಡಿ, ಅವುಗಳ ನವೀಕರಣಕ್ಕಾಗಿ ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿದೆ. ಸಮುದ್ರದಾಳದ ಮೀನುಗಾರಿಕೆಗೆ ವಿಶೇಷವಾದ 100 ಹೈಸ್ಪೀಡ್ ದೋಣಿಗಳನ್ನು ಈ ಬಾರಿಯ ಬಜೆಟ್ನಲ್ಲಿ ಮಂಜೂರು ಮಾಡಲಾಗಿದೆ. ಇದಕ್ಕೆ 150 ಅರ್ಜಿಗಳು ಈಗಾಗಲೇ ಸ್ವೀಕೃತವಾಗಿವೆ. ಇದೇ ತಿಂಗಳು ಅವುಗಳಿಗೆ ಮಂಜೂರಾತಿ ನೀಡಲು ಇಲಾಖೆ ನಿದೇರ್ಶಕರಿಗೆ ಸೂಚಿಸಿದ್ದೇನೆ ಎಂದರು.
ಮೀನುಗಳಿಗೆ ಸಂಸ್ಕರಣಾ ಘಟಕ ಸ್ಥಾಪಿಸಬಹುದು. ಕೆಲವು ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ನಮ್ಮ ಕಡಲು ತೀರದಲ್ಲಿಯೂ ಅತಿ ಹೆಚ್ಚು ರಫ್ತನ್ನು ಮೀನುಗಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕು. ಈಗಾಗಲೇ 50ಕ್ಕಿಂತ ಹೆಚ್ಚು ರೈತ ಉತ್ಪಾದಕರ ಸಂಘಗಳ ರಚನೆಯಾಗಿದ್ದು, ಅವುಗಳಿಗೆ ಹೆಚ್ಚಿನ ಒತ್ತು ನೀಡಿ, ಅವುಗಳ ಮುಖಾಂತರ ಮೀನುಗಾರರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು ಎಂದರು.
ರಾಜ್ಯದಲ್ಲಿ 330 ಕಿ.ಮೀ. ಕರಾವಳಿ ಪ್ರದೇಶವಿದ್ದು, ಮೀನುಗಾರಿಕೆ ಹೆಚ್ಚಿಸಿ, ಸಂಸ್ಕರಿಸಿ, ಮೀನು ರಫ್ತಿಗೆ ವಿಫುಲ ಅವಕಾಶಗಳಿವೆ. ಬರುವ ದಿನಗಳಲ್ಲಿ ಮೀನುಗಾರಿಕೆ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಒಳನಾಡು ಮೀನುಗಾರಿಕೆಗೆ ಉತ್ತೇಜನ
ಕರ್ನಾಟಕದಲ್ಲಿ ಮೀನುಗಾರಿಕೆಯಲ್ಲಿ ವಿಫುಲ ಅವಕಾಶಗಳಿದೆ. ಒಳನಾಡು ಮೀನುಗಾರಿಕೆಗೆ ಸ್ಪಷ್ಟ ನೀತಿ ಇಲ್ಲ. ಕರಾವಳಿ ಮೀನುಗಾರಿಕೆಗೂ, ಒಳನಾಡು ಮೀನುಗಾರಿಕೆಗೆ ವ್ಯತ್ಯಾಸಗಳಿವೆ. ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ, ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಸ್ಥಳೀಯವಾಗಿ ಉತ್ಪಾದನೆಯಾಗಿ ಸ್ಥಳೀಯರಿಗೆ ಲಾಭ ಸಿಗಬೇಕು. ಮೀನುಗಾರಿಕೆಯೂ ಕೃಷಿ ಇದ್ದಂತೆ, ಸಮಗ್ರ ಕೃಷಿಯಲ್ಲಿ ಮೀನುಗಾರಿಕೆ, ಹೈನುಗಾರಿಕೆ, ಕುರಿ ಮತ್ತು ಹಂದಿ ಸಾಕಾಣಿಕೆ, ಆಹಾರ ಸಂಸ್ಕರಣೆ, ಮಾರುಕಟ್ಟೆ ಸೇರಿದಂತೆ ಎಲ್ಲವೂ ಒಳಗೊಂಡಿರುತ್ತದೆ. ಈ ಎಲ್ಲ ಅಂಶಗಳನ್ನು ಒಂದುಗೂಡಿಸುವ ಮೂಲಕ ಮೀನುಗಾರಿಕೆ ವಲಯ ಹಾಗೂ ಮೀನುಗಾರರ ಅಭಿವೃದ್ಧಿಗೆ ಮೀನುಗಾರಿಕೆ ಇಲಾಖೆ ಗಮನಹರಿಸಬೇಕು ಎಂದು ಸೂಚಿಸಿದರು.