Breaking: ನ್ಯಾಯಾಂಗ ನಿಂದನೆ ಕೇಸ್: ನಟ ಚೇತನ್ ಕುಮಾರ್ಗೆ ಜಾಮೀನು
ಬೆಂಗಳೂರು, ಫೆಬ್ರವರಿ 25: ಹಿಜಾಬ್ ವಿವಾದ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ ಅರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ನಟ ಚೇತನ್ ಕುಮಾರ್ ಅವರಿಗೆ ಇಂದು ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಹಿಜಾಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿಗಳ ವಿರುದ್ಧ ಟ್ವೀಟ್ ಮಾಡಿದ್ದರಿಂದ ನಟ ಚೇತನ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಟ್ವೀಟ್ ಆಧಾರದ ಮೇಲೆ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದರು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಕುಮಾರ್ ಜಾಮೀನು ಪಡೆದುಕೊಂಡಿದ್ದಾರೆ.
ಹಿಜಾಬ್ ಕುರಿತು ಯಾವುದೇ ವಿವಾದತ್ಮಕ ಪೋಸ್ಟ್ ಮಾಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸೂಚನೆ ನೀಡಿದ್ದರು. ಅತ್ಯಾಚಾರ ಪ್ರಕರಣವೊಂದು ಉಲ್ಲೇಖಿಸಿ ಎರಡು ವರ್ಷದ ಹಿಂದೆ ನಟ ಚೇತನ್ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಹಿಜಾಬ್ ವಿವಾದವನ್ನು ನ್ಯಾ. ಕೃಷ್ಣ ದೀಕ್ಷಿತ್ ವಿಚಾರಣೆ ನಡೆಸುತ್ತಿದ್ದನ್ನು ಉಲ್ಲೇಖಿಸಿ ಫೆ. 16 ರಂದು ಪೋಸ್ಟ್ ಮಾಡಿದ್ದರು. " ಈ ವಾರ ಕರ್ನಾಟಕ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ ಬಿ. ಅವರಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ " ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ. ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಯಿಸುವ ರೀತಿ ಅದಲ್ಲ ಎಂಬ ಹೇಳಿಕೆ ನೀಡಿದ್ದರು.

ನಟ ಚೇತನ್ ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ. ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು. ಬಳಿಕ ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಎಫ್ಐಆರ್ ( FIR - Cr No40/2022) ದಾಖಲಿಸಿದ್ದಾರೆ.
ಇದಕ್ಕೂ ಮುನ್ನ ನಟ ಚೇತನ್ ಪತ್ನಿ ಮೇಘಾ ಅವರು ಮಂಗಳವಾರ ರಾತ್ರಿ ಫೇಸ್ಬುಕ್ ಲೈವ್ ಬಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದರು. 'ನನ್ನ ಪತಿಯ ಅಪಹರಣವಾಗಿದೆ' ಎಂದು ಹೇಳಿಕೊಂಡಿದ್ದರು. ಇದಕ್ಕೆ ಪೊಲೀಸರಿಂದ ಸ್ಪಷ್ಟನೆ ಸಿಕ್ಕಿದ್ದು, ಅವರನ್ನು ಬಂಧಿಸಲಾಗಿದೆ ಎಂದಿದ್ದರು.
"ಶೇಷಾದ್ರಿಪುರಂ ಠಾಣೆಯ ಪೊಲೀಸರು ಚೇತನ್ರನ್ನು ಬಂಧಿಸಿದ್ದಾರೆ. ನ್ಯಾಯಾಧೀಶರಿಗೆ ನಿಂದಿಸಿದ ಆರೋಪ ಪ್ರಕರಣದಡಿ ಬಂಧನ ನಡೆದಿದೆ. ಸ್ವಯಂಪ್ರೇರಿತ ಕೇಸ್ ದಾಖಲಿಸಿ ನಟ ಚೇತನ್ನನ್ನ ಬಂಧಿಸಿದ್ದೇವೆ,'' ಎಂದು ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಸ್ಪಷ್ಟನೆ ನೀಡಿದರು.












Click it and Unblock the Notifications