ಕರ್ನಾಟಕದಲ್ಲಿ ಚೀಟರ್ , ತಮಿಳುನಾಡಿನಲ್ಲಿ MLA ಕ್ಯಾಂಡಿಡೇಟ್ !
ಬೆಂಗಳೂರು, ಮೇ. 06 : ಉದ್ಯಮಿಗೆ ಏಳು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಂಚಕ ಹರಿನಾಡರ್ ತಮಿಳುನಾಡಿನ ವಿಧಾನ ಸಭೆ ಚುನಾವಣೆಯಲ್ಲಿ ಶಾಸಕನಾಗಲು ಹೊರಟಿದ್ದ. ಮೈಮೇಲೆ ಐದು ಕೆಜಿ ಚಿನ್ನ ಹಾಕಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದ್ದ. ತಮಿಳುನಾಡಿನ ಅಲಂಗುಲಂ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ. 2019 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹರಿ ನಾಡರ್ ಕೇವಲ 1 ಮತಗಳ ಅಂತರದಿಂದ ಸೋತಿದ್ದ !
ಗೋಲ್ಡ್ ಮ್ಯಾನ್ ಆಗಿ ಗುರುತಿಸಿಕೊಂಡಿರುವ ಹರಿ ನಾಡರ್ ಸಾಕಷ್ಟು ಮಂದಿಗೆ ವಂಚನೆ ಮಾಡಿದ್ದಾನೆ.
ಪರಪ್ಪನ ಅಗ್ರಹಾರ ಜೈಲು ಸೇರಿರುವ ಈತ ಉದ್ಯಮಿಗಳಿಗೆ ಗಾಳ ಹಾಕಿ ವಂಚನೆ ಮಾಡುವ ಗ್ಯಾಂಗ್ ಈತನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಿಸಿಬಿ ಪೊಲೀಸರಿಗೆ ಸಿಕ್ಕಿದೆ. ತಿರುವನೇಲ್ವಿ ಜಿಲ್ಲೆಯ ಅಲಂಗಲಂ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಈತ ತನ್ನ ಮೈಮೇಲಿನ ಚಿನ್ನಾಭರಣ ಮೂಲಕವೇ ದೇಶದ ಗಮನ ಸೆಳೆದಿದ್ದ. ಚುನಾವಣಾ ಆಯೋಗಕ್ಕ ಪ್ರಮಾಣ ಪತ್ರ ಸಲ್ಲಿಸುವ ವೇಳೆ ಈತ ಹತ್ತು ಕೆ.ಜಿ. ಚಿನ್ನವನ್ನು ಘೋಷಣೆ ಮಾಡಿದ್ದ. ಒಟ್ಟಾರೆ ಹನ್ನೆರಡು ಕೋಟಿ ಆಸ್ತಿ ಪ್ರಕಟಿಸಿದ್ದ. ಪತ್ನಿ ಹೆಸರಿನಲ್ಲಿ 11 ಕೋಟಿ ರೂ. ಆಸ್ತಿ ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದ. ಉದ್ಯಮಿ ಮತ್ತು ಸಮಾಜ ಸೇವಕ ಎಂದು ಹೇಳಿಕೊಂಡಿದ್ದ ಈತ ಇದೀಗ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಲೋನ್ ಕೊಡಿಸುವ ನೆಪದಲ್ಲಿ 7 ಕೋಟಿ ಪಡೆದು ಮೋಸ ಮಾಡಿ ಜೈಲು ಸೇರಿದ್ದಾನೆ.

ಬೆಂಗಳೂರಿನ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಅವರು ತನ್ನ ಬ್ಯುಜಿನೆಸ್ ಮುಂದುವರೆಸಲು ಬ್ಯಾಂಕ್ ಲೋನ್ ಗಾಗಿ ಪರದಾಡುತ್ತಿದ್ದರು. ವಾರ್ಷಿಕ ಶೇ. 6 ಬಡ್ಡಿ ದರದ ಮೇಲೆ 360 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್ ನಲ್ಲಿ ಕೊಡಿಸುವುದಾಗಿ ನಂಬಿಸಿದ್ದ ವ್ಯಕ್ತಿಯೊಬ್ಬ ಪಂಚತಾರ ಹೋಟೆಲ್ ಗೆ ಕರೆದೊಯ್ದಿದ್ದ. ಅಲ್ಲಿ ಹರಿ ನಾಡರ್ ಮತ್ತು ರಂಜಿತ್ ಪಣಕ್ಕರ್ ಎಂಬುವರನ್ನು ಪರಿಚಯಿಸಿದ್ದರು. ಮೂರು ದಿನದಲ್ಲಿ ವೆಂಕಟರಮಣಿ ಶಾಸ್ತ್ರಿ ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ವಂಚಕ ಗ್ಯಾಂಗ್, ನಕಲಿ ಡಿಡಿಯನ್ನು ತೋರಿಸಿತ್ತು. ನಿಮಗೆ 360 ಕೋಟಿ ರೂಪಾಯಿ ಲೋನ್ ಆಗಿದೆ. ಆದರೆ ಅದು ಬಿಡುಗಡೆಯಾಗಬೇಕಾದರೆ ಸರ್ವೀಸ್ ಚಾರ್ಜ್ 2 ಪರ್ಸೆಂಟ್ ಹಣವನ್ನು ಬ್ಯಾಂಕ್ ನವರಿಗೆ ಕೊಡಬೇಕು ಎಂದು ನಂಬಿಸಿ ನಕಲಿ ಡಿಡಿ ಕೊಟ್ಟು ಟೋಪಿ ಹಾಕಿದ್ದರು.

ನಾಗಮಂಡಲ ಸಿನಿಮಾದಲ್ಲಿ ನಟನೆ ಮಾಡಿರುವ ವಿಜಯಲಕ್ಷ್ಮೀ ಅವರಿಗೂ ಮೋಸ ಮಾಡಿದ್ದ ಎನ್ನಲಾಗಿದೆ. ಸದ್ಯ ಈತ ಮಾಡಿರುವ ಮತ್ತಷ್ಟು ಅಕ್ರಮಗಳನ್ನು ಬಗೆಯುವ ಕಾರ್ಯದಲ್ಲಿ ಸಿಸಿಬಿ ಪೊಲೀಸರು ನಿರತರಾಗಿದ್ದಾರೆ.












Click it and Unblock the Notifications