ಬ್ಯಾಂಕ್ ಎಟಿಎಂಗಳ ಬಳಿಯ ಭದ್ರತಾ ಸಿಬ್ಬಂದಿಯೇ ನಾಪತ್ತೆ; ಬ್ಯಾಂಕ್ ಗಳ ಕಾಸ್ಟ್ ಕಟ್ಟಿಂಗ್
ಬ್ಯಾಂಕ್ ಗಳ ಎಟಿಎಂ ಕೇಂದ್ರಗಳ ಬಳಿ ಭದ್ರತಾ ಸಿಬ್ಬಂದಿ ಇರಬೇಕು ಎಂಬ ನಿಯಮದ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಬೆಂಗಳೂರಿನ ನಗರದ ಮಟ್ಟಿಗಂತೂ ಹಲವು ಕಡೆ ಯಾವ ಸಿಬ್ಬಂದಿಯೂ ಕಾಣುತ್ತಿಲ್ಲ. ಬ್ಯಾಂಕ್ ಗಳು 'ಕಾಸ್ಟ್ ಕಟ್ಟಿಂಗ್'ಗಾಗಿ ಹೀಗೆ ಮಾಡುತ್ತಿದೆಯಾ? ಅಥವಾ ನಿಯಮವೇ ಬದಲಾಗಿದೆಯಾ ಎಂದು ಮೂಲ ಹುಡುಕಿ ಹೊರಟರೆ ಅಂತೂ ಇವೆಲ್ಲಾ ಗೊತ್ತಾಯಿತು.
ಈಗ ಬ್ಯಾಂಕ್ ಗಳ ಎಟಿಎಂಗಳ ಸರ್ವೇಲನ್ಸ್ ಮಾಡಲಾಗಿದೆಯಂತೆ. ಅಂದರೆ ಸಿಸಿಟಿವಿ ಕ್ಯಾಮೆರಾ ಮೂಲಕವೇ ನಿಗಾ ಮಾಡುವುದು. ಇನ್ನು ರಾತ್ರಿ ಹತ್ತು ಗಂಟೆಗೆ ಹಲವು ಕಡೆ ಎಟಿಎಂನ ಷಟರ್ ಬಂದ್ ಆಗಿ ಬಿಡುತ್ತದಂತೆ. ರಾತ್ರಿ ಸರಹೊತ್ತಿನಲ್ಲಿ ಎಟಿಎಂ ತೆಗೆದು ಕೂತರೆ ತಾನೇ ಭದ್ರತಾ ಸಿಬ್ಬಂದಿ? ರಾತ್ರಿ ಹತ್ತು ಗಂಟೆಗೆ ಮುಚ್ಚಿಬಿಟ್ಟರೆ ಸಮಸ್ಯೆ ಇಲ್ಲವಲ್ಲ!
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ವೊಬ್ಬರು ಹೇಳುವ ಪ್ರಕಾರ, ಸದ್ಯಕ್ಕೆ ಆ ಬ್ಯಾಂಕ್ ನ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಇದ್ದಾರೆ. ಹೊರಗುತ್ತಿಗೆ ನೀಡಿರುವ ಈ ಜವಾಬ್ದಾರಿಯನ್ನು ಖಾಸಗಿ ಕಂಪೆನಿಯೊಂದು ನಿರ್ವಹಿಸುತ್ತಿದೆ. ಆದರೆ ಆ ಬ್ಯಾಂಕ್ ಸಹ ಸದ್ಯದಲ್ಲೇ ಭದ್ರತಾ ಸಿಬ್ಬಂದಿಗೆ ಕೊಕ್ ಕೊಟ್ಟು, ಸರ್ವೇಲನ್ಸ್ ಜಾರಿಗೆ ತರುವ ಆಲೋಚನೆಯಲ್ಲಿದೆ.

ಇನ್ನೊಂದು ವಿಚಾರ ಏನು ಗೊತ್ತಾ? ಖಾಸಗಿ ಸಿಬ್ಬಂದಿಗೆ ಹೊರಗುತ್ತಿಗೆ ನೀಡುವುದರಿಂದ ಆಂಥ ಸಿಬ್ಬಂದಿಯಿಂದಲೇ ತೊಂದರೆ ಆಗಿದೆ ಎನ್ನುತ್ತಾರೆ.
ತೀರಾ ಅನಿವಾರ್ಯ ಸಂದರ್ಭ ಅಂದರೆ ಏನು ಮಾಡಬೇಕು ಅಂತ ಕೇಳಿದರೆ, ಪೇಟಿಎಂ, ಗೂಗಲ್ ಪೇ, ಭೀಮ್ ಆಪ್, ಆನ್ ಲೈನ್ ವ್ಯವಹಾರ ಇವೆಲ್ಲವೂ ಯಾಕಿವೆ? ಅವುಗಳ ಬಳಕೆ ಹೆಚ್ಚು ಪರಿಣಾಮಕಾರಿ ಆಗಲಿ ಎಂದು ಹೀಗೆ ಮಾಡಲಾಗುತ್ತಿದೆ ಎನ್ನುತ್ತಾರೆ. ಇದರ ಜತೆಗೆ ಇನ್ನು ಮುಂದೆ ಎಟಿಎಂಗಳು 'ಇ ಲಾಬಿ'ಗಳಾಗುತ್ತವೆ. ಬಹುತೇಕ ಬ್ಯಾಂಕಿಂಗ್ ವ್ಯವಹಾರ ಆನ್ ಲೈನ್ ನಲ್ಲಿ ಅಲ್ಲೇ ಮಾಡಬಹುದು ಎನ್ನುವ ಉತ್ತರ ಬಂತು.
ಹಲವು ಬ್ಯಾಂಕ್ ಗಳ ವಿಲೀನ, ಹಲವು ಶಾಖೆಗಳಿಗೆ ಬಾಗಿಲು ಹಾಕುವುದು ಸೇರಿದಂತೆ ಹಲವಾರು ಯೋಜನೆಗಳು ಜಾರಿಗೆ ತರುವ ಆಲೋಚನೆ ಇದೆ. ಎಲ್ಲವನ್ನೂ ಒಂದೇ ಸಲಕ್ಕೆ ತರಲು ಸಾಧ್ಯವಿಲ್ಲ. ಆದ್ದರಿಂದ ಒಂದೊಂದಾಗಿ ತರಲಾಗುವುದು ಎಂಬ ಪ್ರತಿಕ್ರಿಯೆ ಬರುತ್ತದೆ.
ಬ್ಯಾಂಕಿಂಗ್ ವ್ಯವಹಾರ ಬದಲಾಗುತ್ತಿರುವುದರಿಂದ ನೀವೂ ಬದಲಾಗಲೇ ಬೇಕು. ಗೂಗಲ್ ಪೇ, ಪೇಟಿಎಂ, ಭೀಮ್ ಆಪ್ ಜತೆಗೆ ಆನ್ ಲೈನ್ ಪಾವತಿಗೆ ಸಿದ್ಧರಾಗಿ. ನಾವೀಗ 'ಕಾಸ್ಟ್ ಕಟ್ಟಿಂಗ್' ಕಾಲದಲ್ಲಿ ಇದ್ದೀವಿ. ನಿಮ್ಮ ಮೇಲೆ ಬ್ಯಾಂಕ್ ಗಳು ಹಾಕುವ ಶುಲ್ಕ, ದರಗಳ ಬಗ್ಗೆಯೂ ತಿಳಿದಿಟ್ಟುಕೊಳ್ಳಿ.












Click it and Unblock the Notifications