ರಾಜಿ ಕಬೂಲ್: ಜಮೀರ್ ಬೇಡಿಕೆಗೆ ದೇವೇಗೌಡ ತಥಾಸ್ತು
ಬೆಂಗಳೂರು, ಫೆ.24: ಮನೆ ಮಗನಂತಿರುವ ಆದರೆ ಸದಾ ಮನೆ ಬಿಟ್ಟು ಹೋಗುವ ಮಾತನ್ನಾಡುವ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಅವರನ್ನು ಜೆಡಿಎಸ್ ವರಿಷ್ಠ ನಾಯಕ ಎಚ್ಡಿ ದೇವೇಗೌಡರು ಕೊನೆಗೂ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಾಗ್ಗೆ ಕೈಯಲ್ಲಿ ಕೆಂಪು ಬಾವುಟ ಹಿಡಿದು, ಪಕ್ಷದ ಚಟುವಟಿಕೆಗಳಿಂದ ದೂರ ಓಡಿಹೋಗುವ ಜಮೀರ್ ಅಹಮದ್ ಅವರನ್ನು ಸ್ವತಃ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ದೊಡ್ಡ ಗೌಡರು ಕಳೆದ ವಾರಾಂತ್ಯ ಪದ್ಮನಾಭನಗರದ ತಮ್ಮ ಮನೆಯಲ್ಲಿ ಯಶಸ್ವಿಯಾಗಿ ರಾಜಿ ಕಬೂಲ್ ಮಾಡಿಸಿದ್ದಾರೆ.

ಇಷ್ಟಕ್ಕೇ ಅರ್ಧ ಕರಗಿಹೋದ ಶಾಸಕ ಜಮೀರ್ ಅಹಮದ್ ಅವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವೇ ಪ್ರಚಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅದಾದ ನಂತರ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಷಯ ಪ್ರಸ್ತಾಪಕ್ಕೆ ಬಂದಿದೆ.
(ಹಜ್ಘರ್: ತಿಳಿಗೇಡಿ ಜಮೀರ್ ರಂಪಾಟ ಯಾರ ವಿರುದ್ಧ?)
ಆರಂಭದಲ್ಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಶಾಸಕ ಜಮೀರ್ ಅವರು ನಾನಾಗಲೀ ನನ್ನ ತಮ್ಮನಾಗಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಿಲ್ಲ. ಆದರೆ ಒಂದು ಕಂಡೀಷನ್ ... ನಾನು ಹೇಳುವ ಅಭ್ಯರ್ಥಿಗೇ (ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಲ್ಲಿ) ಟಿಕೆಟ್ ಕೊಡಬೇಕು ಎಂದು ಶಾಸಕ ಜಮೀರ್ ಅವರು ದೊಡ್ಡಗೌಡರೆದುರು ಅಲವತ್ತುಕೊಂಡಿದ್ದಾರೆ. ಇದಕ್ಕೆ ಗೌಡರು ತಥಾಸ್ತು ಅನ್ನುತ್ತಿದ್ದಂತೆ ಶಾಸಕ ಜಮೀರ್ ಪೂರ್ತಿ ಕರಗಿದ್ದಾರೆ ಎಂಬಲ್ಲಿಗೆ ಜಮೀರ್- ಎಚ್ಡಿಕೆ ಭಾಯಿ-ಭಾಯಿ ಪ್ರಕರಣ ಮತ್ತೊಂದು ಮಜಲು ಪ್ರವೇಶಿಸಿದೆ.












Click it and Unblock the Notifications