ಮೀಟರ್ ಬಡ್ಡಿ ದಂಧೆ: ಮತ್ತೆ ಬೆಂಗಳೂರಲ್ಲಿ ಸಿಸಿಬಿ ಘರ್ಜನೆ
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರು ನಗರದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರೌಡಿ ಶೀಟರ್ ಗಳು ಹಾಗೂ ಬಡ್ಡಿಕುಳಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಸಿಸಿಬಿ ಮಂಗಳವಾರ ಬೆಳಗಿನ ಜಾವ ತನ್ನ ಕಾರ್ಯಾಚರಣೆ ಮುಂದುವರೆಸಿದೆ.
ಲಯನ್ ಕೆವಿ ಬಾಲಕೃಷ್ಣ ಸೇರಿದಂತೆ ಹಲವಾರು ಹಣಕಾಸು ವ್ಯವಹಾರ ನಡೆಸುವ ವ್ಯಕ್ತಿಗಳ ಆಸ್ತಿಗಳ ಮೇಲೆ ಸಿಸಿಬಿಯ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಫೈನಾನ್ಶಿಯರ್ ಗಳ ಆಸ್ತಿ ಪತ್ರಗಳನ್ನು ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆಸ್ತಿಗಳನ್ನು ಒತ್ತೆಯಿಟ್ಟಕೊಂಡು ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಅಕ್ರಮ ಲೇವಾದೇವಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪ್ರಮುಖ 12 ಬಡ್ಡಿ ಕುಳಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅಂತಹುದೇ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.ಕಳೆದ ಒಂದು ತಿಂಗಳಲ್ಲಿ 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಇದೀಗ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ಲಯನ್ ಕೆವಿ ಬಾಲಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
20 ದಿನಗಳ ಹಿಂದೆ ಬೆಂಗಳೂರಿನ ಹಲವೆಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು, 20ದಿನಗಳ ಹಿಂದೆ ಕಪಾಲಿ ಮೋಹನ್ ಮನೆ ಮೇಲೆ ದಾಳಿ ನಡೆದಿತ್ತು, ಅಲ್ಲಿ ದೊರೆತಂತಹ ಕೆಲವು ದಾಖಲೆ ಮೇರೆಗೆ ಬಾಲಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಮಂಗಳವಾರ ಕೇವಲ ಬಾಲಕೃಷ್ಣ ಅವರ ಮನೆ ಮಾತ್ರವಲ್ಲದೆ ಸಾಕಷ್ಟು ಕಡೆ ನಾಲ್ಕು ತಂಡಗಳಲ್ಲಿ ದಾಳಿ ನಡೆಯುತ್ತಿದೆ. ಎಸಿಪಿ ಮಂಜುನಾಥ್ ಚೌದರಿ ಸಾಥ್ ನೀಡುತ್ತಿದ್ದಾರೆ.












Click it and Unblock the Notifications