ವೇಶ್ಯಾವಾಟಿಕೆ ದಂಧೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ
ಬೆಂಗಳೂರು, ಜು. 03: ಕೋವಿಡ್ ನಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ವ್ಯಾಪಾರ, ಉದ್ಯಮ ನಡೆಸುವರು ಬ್ಯಾಂಕ್ ಸಾಲ ಕಟ್ಟಲಾಗದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಇಂತಹ ಸಂಕಷ್ಟ ಕಾಲದಲ್ಲೂ ಸದ್ದಿಲ್ಲದೇ ವೇಶ್ಯಾವಾಟಿಕೆ, ಜೂಜು, ಮಾದಕ ವಸ್ತು ಸಾಗಣೆ ಅಕ್ರಮಗಳು ನಿರಾತಂಕವಾಗಿ ನಡೆದಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಲಾಕ್ ಡೌನ್ ಅವಧಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆ ಕಡೆಸಿ ಜೂಜುಕೊರರ ದಂಧೆಕೋರರ ಎಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಲಾಕ್ ಡೌನ್ ತೆರವು ಆಗುತ್ತಿದ್ದಂತೆ ಮಸಾಜ್ ಪಾರ್ಲರ್ ಗಳು ನಾಯಿ ಕೊಡಗಳಂತೆ ತಲೆಯೆತ್ತಿ ಕಾರ್ಯ ನಿರ್ವಹಿಸುತ್ತಿವೆ. ಮಾದಕ ಜಾಲ, ವೇಶ್ಯಾವಾಟಿಕೆ ಹಾಗೂ ರೌಡಿ ಚಟುವಟಿಕೆ ಮೇಲೆ ವಿಶೇಷ ನಿಗಾ ಇಡಲಾಗಿದೆ. ಇನ್ನು ಲಾಕ್ ಡೌನ್ ಅವಧಿಯಲ್ಲಿ ಸಿಸಿಬಿ ಪೊಲೀಸರು ನಡೆಸಿರುವ ದಾಳಿ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೀಡಿರುವ ವಿವರ ಇಲ್ಲಿದೆ ನೋಡಿ.

167 ಮಂದಿ ಬಂಧಿಸಿರುವ ಸಿಸಿಬಿ
ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾದರೂ ಜೂಜುಕೋರರು ಮಾತ್ರ ಸುಮ್ಮನಾಗಿಲ್ಲ. ಮಟ್ಕಾ , ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜು ಅಡ್ಡೆಗಳು ಪೊಲೀಸರ ಕಣ್ಣು ತಪ್ಪಿಸಿ ಕಾರ್ಯ ನಿರ್ವಹಿಸುತ್ತಿದ್ದವು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ 167 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 26 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಕಲಾಸಿಪಾಳ್ಯ, ಜೆ.ಜೆ.ನಗರ, ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಹದಿನೈದು ಪ್ರತ್ಯೇಕ ಪ್ರಕರಣಗಳನ್ನು ಸಿಸಿಬಿ ಪೊಲೀಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮಸಾಜ್ ಪಾರ್ಲರ್ ದಂಧೆ
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಗಳ ಮೇಲೆ ದಾಳಿ ಮಾಡಿ ಐವತ್ತೊಂದು ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಾಗೂ ತೊಡದಿದ್ದ ಐವತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.41 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಐಟಿ ಹಬ್ ಮಾರತಹಳ್ಳಿ, ಬಾಣಸವಾಡಿ, ಬಸವನಗುಡಿ ಸೇರಿದಂತೆ ಬೆಂಗಳೂರಿನ ನಾನಾ ಕಡೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣ ವಿವಿಧ ಠಾಣೆಗಳಲ್ಲಿ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಮನೆ ಮತ್ತು ಹೋಟೆಲ್ ಮೇಲೆ ದಾಳಿ
ಅಪ್ರಾಪ್ತರನ್ನು ವೇಶ್ಯಾವಾಟಿಕೆ ತಳ್ಳಿರುವ ಹಾಗೂ ಅಪ್ರಾಪ್ತರು ಅಪರಾಧ ಕೃತ್ಯದಲ್ಲಿ ಭಾಗಿಯಗಿರುವ ಸಂಬಂಧ ಹತ್ತು ಪ್ರಕರಣಗಳನ್ನು ಸಿಸಿಬಿ ಪೊಲೀಸರು ದಾಖಲಿಸಿದ್ದಾರೆ. ಹತ್ತು ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಉಳಿದಂತೆ ಅಪರಾಧ ಕೃತ್ಯ ಎಸಗಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Recommended Video

ರೌಡಿ ಗ್ಯಾಂಗ್ ವಾರ್ ಮೇಲೆ ಕಣ್ಣು
ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆ ಗರಿಗೆದರಿವೆ. ಬ್ಯಾಟರಾಯನಪುರದಲ್ಲಿ ಗ್ಯಾಂಗ್ ವಾರ್ ವರದಿಯಾಗಿದೆ. ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆ ಹಿಂದೆಯೂ ರೌಡಿ ಪಾತಕಿಗಳು ಇರುವುದು ಬೆಳಕಿಗೆ ಬಂದಿದೆ. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್ ಗಳು ಶುರುವಾಗಿವೆ. ರಾಜಧಾನಿಯಲ್ಲಿ ರೌಡಿ ಚಟುವಟಿಕೆ ನಿಗ್ರಹಿಸಲು ಪ್ರತ್ಯೇಕ ಘಟಕ ಹೊಂದಿರುವ ಸಿಸಿಬಿ ಪೊಲೀಸ್ ಘಟಕ ಇದೀಗ ರೌಡಿ ನಿಗ್ರಹಕ್ಕೆ ಹದ್ದಿನ ಕಣ್ಣಿಟ್ಟಿದೆ. ಬೆಂಗಳೂರಿನಲ್ಲಿರೌಡಿ ಶೀಟರ್ ಗಳು ಅವರ ಚಟುವಟಿಕೆ ಬಗ್ಗೆ ಸದ್ದಿಲ್ಲದೇ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ












Click it and Unblock the Notifications