ಸಿಬಿಐ ವಿಚಾರಣೆಯಲ್ಲಿ ಜಯಚಂದ್ರ ಮಾಡಿದ್ದೇನು?
ಬೆಂಗಳೂರು, ಡಿಸೆಂಬರ್ 5: ಅಕ್ರಮ ಸಂಪತ್ತು ಗಳಿಕೆ ಹಿನ್ನೆಲೆ ಐಟಿ ದಾಳಿಗೆ ಗುರಿಯಾಗಿದ್ದ ರಾಜ್ಯ ಹೆದ್ದಾರಿ ನಿಗಮದ ಮುಖ್ಯ ಯೋಜನಾಧಿಕಾರಿ ಎಸ್.ಸಿ. ಜಯಚಂದ್ರ ಅವರನ್ನು ವಶಕ್ಕೆ ಪಡೆದಿರುವ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಜಯಚಂದ್ರ ಅವರ ಜೊತೆಗೆ ಗುತ್ತಿಗೆದಾರ ಚಂದ್ರಕಾಂತ್ ಅವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ರಾತ್ರಿಯಿಂದಲೇ ತೀವ್ರ ವಿಚಾರಣೆ ನಡೆಸಿದ್ದಾರೆ.[ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]
ವಿಚಾರಣೆಗೆ ಸಹಕರಿಸದ ಜಯಚಂದ್ರ ನಿನ್ನೆ ರಾತ್ರಿ ಅನಾರೋಗ್ಯದ ನೆಪವೊಡ್ಡಿದ್ದರು ಆದರೆ ಅವರಿಗೆ ಚಿಕಿತ್ಸೆ ಕೊಡಿಸಿದ ಸಿಬಿಐ ಸೋಮವಾರ ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ಮತ್ತೆ ವಿಚಾರಣೆಗೆ ಒಳಪಡಿಸಿದೆ. ಚಂದ್ರಕಾಂತ್ ಜೊತೆಗೆ ಖಾಸಗಿ ಬ್ಯಾಂಕುಗಳ ವ್ಯವಸ್ಥಾಪಕರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸಿದೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಯೋಜನಾಧಿಕಾರಿ ಜಯಚಂದ್ರ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರ ನಿವಾಸ, ಕಚೇರಿಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು 5.7 ಕೋಟಿ ನಗದು ಹಾಗೂ 152 ಕೋಟಿ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಯಶಸ್ವಿಯಾಗಿತ್ತು.
ಐಟಿ ದಾಳಿ ನಡೆಸಿ ಅಕ್ರಮ ಸಂಪತ್ತು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತ್ತುಗೊಳಿಸಿತ್ತು. ಇದರ ಬೆನ್ನಲ್ಲೇ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖೆ ನಡೆಸುವಂತೆಯೂ ಸೂಚಿಸಿತು.
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಜಯಚಂದ್ರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ.