ರಾರಾ ನಗರ ಚುನಾವಣೆ ಮುಂದೂಡಿಕೆ, ಪ್ರಜ್ವಲ್ ರೇವಣ್ಣಗೆ ಸಿಗಬಹುದೇ ಅವಕಾಶ?
ಬೆಂಗಳೂರು, ಮೇ 11: ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೊಂದು ಆರಂಭವಾಗಿದೆ. ಪ್ರಜ್ವಲ್ ರೇವಣ್ಣಗೆ ರಾರಾನಗರದಿಂದ ಚುನಾವಣೆ ಸ್ಪರ್ಧಿಸಲು ಅವಕಾಶ ಸಿಗಬಹುದೇ ಎಂಬುದೇ ಆ ಚರ್ಚೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದ ಪ್ರಜ್ವಲ್ ರೇವಣ್ಣಗೆ ಇದು ಮತ್ತೊಂದು ಸುವರ್ಣಾವಕಾಶ, ಈ ಬಾರಿ ಅವರಿಗೆ ಅವಕಾಶ ಸಿಗುತ್ತದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಅಸಂಭವ.

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದಕ್ಕೆ ಹೋಗಿದಿಯೇ ಹೊರತು ರದ್ದಾಗಿಲ್ಲ, ಜಯನಗರ ಕ್ಷೇತ್ರದಲ್ಲಿ ಆದಂತೆ ಚುನಾವಣೆ ರದ್ದಾಗಿ ಮರು ಚುನಾವಣೆ ಆಗಿದ್ದಿದ್ದರೆ ಆಗ ಅವಕಾಶ ಇತ್ತೇನೋ ಆದರೆ ಈಗಿನ ಪರಿಸ್ಥಿತಿಯಲ್ಲಿ ರೇವಣ್ಣ ಅವರಿಗೆ ಅವಕಾಶ ಇಲ್ಲವೇ ಇಲ್ಲ ಎನ್ನಬಹುದು.
ರಾಜರಾಜೇಶ್ವರಿ ನಗರ ಚುನಾವಣೆ ಇದೇ ತಿಂಗಳ 28ಕ್ಕೆ ನಡೆಯುತ್ತದೆ, ಈಗ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅದೇ ನಾಮಪತ್ರಗಳು ಮುಂದುವರೆಯಲಿವೆ. ಹೊಸದಾಗಿ ಯಾವ ನಾಮಪತ್ರವನ್ನೂ ಸ್ವೀಕೃತಿ ಮಾಡಲಾಗುವುದಿಲ್ಲ.
ಅಕಸ್ಮಾತ್, ಭಾರಿ ಚುನಾವಣೆ ಅಕ್ರಮ ನಡೆದಿರುವುದು ಸಾಬೀತಾಗಿ, ನಡೆದಿರುವ ಚುನಾವಣಾ ಅಕ್ರಮ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ ಎಂದು ಚುನಾವಣಾ ಆಯೋಗಕ್ಕೆ ಮನದಟ್ಟಾದರೆ ಆಯೋಗವು ಹೊಸ ನಾಮಪತ್ರಗಳನ್ನು ಸ್ವೀಕರಿಸಿದಲ್ಲಿ ಮಾತ್ರವೇ ಪ್ರಜ್ವಲ್ ರೇವಣ್ಣಗೆ ಅವಕಾಶ ಸಿಗಬಹುದೇನೊ ಆದರೆ ಆ ಸಾಧ್ಯತೆ ಬಹಳ ಕಡಿಮೆ.
ಏಕೆಂದರೆ ಈಗ ಚುನಾವಣಾ ಆಯೋಗ ರಾಜರಾಜೇಶ್ವರಿ ನಗರ ಪ್ರಕರಣದಲ್ಲಿ ಒಬ್ಬ ಅಭ್ಯರ್ಥಿಯ (ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ) ಮೇಲೆ ಮಾತ್ರವೇ ಆರೋಪ ಹೊರಿಸಿದೆ ಹಾಗಾಗಿ ಆ ಒಬ್ಬ ಅಭ್ಯರ್ಥಿಯ ನಾಮಪತ್ರ ಮಾತ್ರವನ್ನೇ ತಿರಸ್ಕರಿಸುವ ಸಾಧ್ಯತೆಗಳಿರುತ್ತವೆಯೇ ಹೊರತು ಎಲ್ಲ ನಾಮತ್ರಗಳನ್ನೂ ಅಲ್ಲ.
ಚುನಾವಣಾ ಅಕ್ರಮವು ಮತದಾರರ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ, ನಿಷ್ಪಕ್ಷಪಾತ ಜನಾಭಿಪ್ರಾಯಕ್ಕೆ ಅದು ಧಕ್ಕೆ ತರುತ್ತದೆ ಎಂದಾದರೆ ಮಾತ್ರವೇ ಆರೋಪಿ ಅಭ್ಯರ್ಥಿ ಮುನಿರತ್ನ ಅವರ ನಾಮಪತ್ರ ತಿರಸ್ಕೃತವಾಗಲಿದೆ. ಈಗಾಗಲೇ ಮುನಿರತ್ನ ಅವರು ಚುನಾವಣಾ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಇದೇ ತಿಂಗಳ ಮೇ 28ಕ್ಕೆ ನಡೆಸಲಿದ್ದು, ಫಲಿತಾಂಶ ಮೇ 31ಕ್ಕೆ ಪ್ರಕಟವಾಗಲಿದೆ.












Click it and Unblock the Notifications