ಆರ್. ಆರ್. ನಗರ, ಶಿರಾ ಚುನಾವಣೆ; ಬಹಿರಂಗ ಪ್ರಚಾರ ಭಾನುವಾರ ಅಂತ್ಯ
ಬೆಂಗಳೂರು, ಅಕ್ಟೋಬರ್ 30: ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.
ಶುಕ್ರವಾರ ಉಪ ಚುನಾವಣೆ ಪ್ರಚಾರ ರಂಗೇರಿತ್ತು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ವಿಜಯ ಸಂಕಲ್ಪ ಸಮಾವೇಶ' ಉದ್ದೇಶಿಸಿ ಮಾತನಾಡುವ ಮೂಲಕ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ಮತಯಾಚನೆ ಮಾಡಿದರು.
ಆರ್. ಆರ್. ನಗರ ಕ್ಷೇತ್ರದಲ್ಲಿ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು. ಭಾನುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಮತದಾರರು ಅಲ್ಲದವರು ಕ್ಷೇತ್ರ ಬಿಡಬೇಕು.

ಶಿರಾದಲ್ಲಿ ಬಿಜೆಪಿ ನಾಯಕರ ದೊಡ್ಡ ಪಡೆಯೇ ಇದೆ. ಭಾನುವಾರ ಪ್ರಚಾರ ನಡೆಸಿ ಮಧ್ಯಾಹ್ನದ ಬಳಿಕ ಎಲ್ಲರೂ ಕ್ಷೇತ್ರವನ್ನು ತೊರೆಯಲಿದ್ದಾರೆ. ಅಭ್ಯರ್ಥಿಗಳು ಸೋಮವಾರ ಮನೆ ಮನೆ ಪ್ರಚಾರ ನಡೆಸಬಹುದು.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತಯಾಚಿಸಿದರು. ಭಾನುವಾರ ಕೊನೆ ದಿನದ ಪ್ರಚಾರ ಮತ್ತಷ್ಟು ಬಿರುಸಾಗಿ ನಡೆಯಲಿದೆ.
ಶಿರಾದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮತಯಾಚನೆ ಮಾಡಿದರು. ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಟಿ. ಬಿ. ಜಯಚಂದ್ರ ಅವರು ವಿವಿಧ ಸ್ಥಳಗಳಲ್ಲಿ ಪ್ರಚಾರ ಮಾಡಿ ಮತವನ್ನು ಕೇಳಿದರು.












Click it and Unblock the Notifications