ಕೇಂಬ್ರಿಡ್ಜ್ ಶಾಲೆ ಪ್ರಿನ್ಸಿಪಾಲ್, ನಿರ್ದೇಶಕನಿಗೆ ಜಾಮೀನು
ಬೆಂಗಳೂರು, ನ.2: ಒಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಇಂದಿರಾನಗರ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯ ಪ್ರಿನ್ಸಿಪಾಲ್ ಹಾಗೂ ನಿರ್ದೇಶಕರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಅತ್ಯಾಚಾರ ಆರೋಪಿ ಜೈಶಂಕರ್ ನನ್ನು ಬೈಯಪ್ಪನ ಹಳ್ಳಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಮಕ್ಕಳ ಸುರಕ್ಷತೆ ಮಾರ್ಗಸೂಚಿಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇಂದಿರಾನಗರ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆ ನಿರ್ದೇಶಕ ಹಾಗೂ ಪ್ರಾಂಶುಪಾಲರನ್ನು ಜೀವನ್ ಭೀಮಾ ನಗರ ಪೊಲೀಸರು ಶನಿವಾರ ಬಂಧಿಸಿದ್ದರು. ಶಾಲೆಯ ನಿರ್ದೇಶಕ ಪ್ರಮೋದ್ ಆರ್ಯ ಹಾಗೂ ಪ್ರಿನ್ಸಿಪಾಲ್ ವೈಜಯಂತಿ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಅದರೆ, ಇಬ್ಬರು ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. [ದೌರ್ಜನ್ಯ ಪ್ರಕರಣ, ಶಿಕ್ಷಕ ಪೊಲೀಸ್ ವಶಕ್ಕೆ]

ಶಾಲೆಯ ಮುಖ್ಯಸ್ಥರ ವಿರುದ್ಧ ಐಪಿಸಿ ಸೆಕ್ಷನ್ 188(ಸರ್ಕಾರಿ ಅಧಿಕಾರಿ ನೀಡಿದ ಸೂಚನೆಗಳನ್ನು ಪಾಲಿಸದಿರುವುದು) ಹಾಗೂ ಕಲಂ 366(ವ್ಯಕ್ತಿಯ ಖಾಸಗಿ ಜೀವನಕ್ಕೆ ಅಪಾಯ ಉಂಟುಮಾಡುವುದು) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಮಾರತ್ ಹಳ್ಳಿ ಸಮೀಪದ ವಿಬ್ ಗಯಾರ್ ಶಾಲೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಬಳಿಕ ಎಲ್ಲಾ ಶಾಳೆಗಳಿಗೆ ಪೊಲೀಸರು ಮಾರ್ಗ ಸೂಚಿ ನೀಡಿದ್ದರು. ಆದರೆ, ಬೆಂಗಳೂರಿನ ಬಹುತೇಕ ಶಾಲೆಗಳು ಮಾರ್ಗಸೂಚಿಗಳನ್ನು ನಿಗದಿತ ಅವಧಿಯಲ್ಲಿ ಅಳವಡಿಸಿಕೊಳ್ಳಲು ವಿಫಲವಾಗಿದ್ದವು. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]
ಸೋಮವಾರ ಪೋಷಕರ ಸಭೆ: ಆರ್ಕಿಡ್ಸ್ ಶಾಲೆಯಲ್ಲಿ ಸಭೆ ನಡೆಸಿದಂತೆ ಕೇಂಬ್ರಿಡ್ಜ್ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ಜತೆ ಸೋಮವಾರ ಚರ್ಚೆ ನಡೆಸಲಾಗುವುದು ಎಂದು ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಹೇಳಿದರು., ಶನಿವಾರ ಬಿಇಒ ರಮೇಶ್ ಅವರ ಜೊತೆ ಡಿಸಿಪಿ ಗೋಯಲ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications