ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !
ಬೆಂಗಳೂರು, ಡಿಸೆಂಬರ್ 15 : ಡಿಸೆಂಬರ್ನ ತಣ್ಣನೆ ನಡುಗಿಸುವ ಚಳಿಗೆ ಸವಾಲು ಹಾಕುವಂತೆ ಮೈದಳೆದು ಎದ್ದು ನಿಲ್ಲುತ್ತದೆ ಕೇಕ್ ಸಾಮ್ರಾಜ್ಯ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಇದಕ್ಕೆ ಸಾಕ್ಷಿಯಾಗಿದೆ. ಶುಕ್ರವಾರದಿಂದ ಜನವರಿ 1 ರವರೆಗೂ ಕೇಕ್ ಶೋ ನಡೆಯಲಿದೆ.
ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ಸಂಸ್ಥೆಯ ಮನೀಶ್ ಗೌರ್ ಮತ್ತು ವಿದ್ಯಾರ್ಥಿಗಳು ಪರಿಣತ ಕಲಾವಿದರಾದ ಸಿ.ರಾಮಚಂದ್ರನ್ ನೇತೃತ್ವದಲ್ಲಿ ಸತತ ಮೂರು ತಿಂಗಳು ಶ್ರಮವಹಿಸಿ ಕೇಕ್ ನಿಂದ ವಿಭಿನ್ನ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಇದು ದೇಶ-ಕಾಲದ ಚೌಕಟ್ಟು ಮೀರಿದ, ಭಾಷೆ-ಬಣ್ಣಗಳ ಚೌಕಟ್ಟು ಮೀರಿದ ಆಹಾರ ಸಾಮ್ರಾಜ್ಯ. ಸರ್ವ ಋತುಗಳಲ್ಲೂ ಮುಟ್ಟಿದರೆ ನಲುಗುವ ಬಿಳಿ ಹಾಸಿಗೆಯಂಥ ಬ್ರೆಡ್ ತುಣುಕಿನ ಮೇಲೆ ವರ್ಣಚಿತ್ತಾರದ ಹೊದಿಕೆ ಹೊದ್ದ ಚಿತ್ತಾಕರ್ಷಕ ರೂಪ ಇದರದು.
ಕೇಕ್ ನಷ್ಟು ವೈವಿಧ್ಯಮಯ ರುಚಿ, ಆಕಾರ, ವರ್ಣರಂಜಿತ ತಿನಿಸು ಮತ್ತೊಂದಿರಲಾರದು. ಡಿಸೆಂಬರ್ ಎಂದರೆ ಕೇಕ್ ಹಬ್ಬ. ಒಂದೇ ವಾರದ ಅಂತರದಲ್ಲಿ ಎರಡು ಜಾಗತಿಕ ಸಂಭ್ರಮೋತ್ಸವಗಳ ಆಚರಣೆಯ ತಿಂಗಳಿದು. ಕ್ರಿಸ್ ಮಸ್ ಮತ್ತು ಹೊಸವರ್ಷದ ಸ್ವಾಗತದ ಸಂಭ್ರಮ ಅರ್ಥಪೂರ್ಣವಾಗುವುದು ಕೇಕ್ ಹಾಜರಿಯಲ್ಲೇ.

ಕ್ರಿಸ್ ಮಸ್ ಮತ್ತು ಹೊಸ ವರ್ಷ
ಕೇಕ್ ಗೆ ಮತ್ತಷ್ಟು ವಿಶೇಷ ಸ್ತಾನ ನೀಡಿರುವುದು ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗಳು. ಕ್ರಿಸ್ ಮಸ್ ಹತ್ತಿರ ಬರುತ್ತಿದ್ದಂತೆ ಕೇಕ್ ಬಡಿಕೆ ಹೆಚ್ಚು. ಒಂದೇ ವಾರದ ಅಂತರದಲ್ಲಿ ಹೊಸ ವರ್ಷ ಸ್ವಾಗತಿಸುವಾಗಲೂ ಕೇಕ್ ಬೇಕೇ ಬೇಕು. ಹೀಗಾಗಿ ಡಿಸೆಂಬರ್ ತಿಂಗಳಿಡೀ ಕೇಕ್ ಉದ್ದಿಮೆಗಳಿಗೆ, ಬೇಕರಿಗಳಿಗೆ ಬಿಡುವಿಲ್ಲದ ಕೆಲಸ. ಕ್ರಿಶ್ಚಿಯನ್ನರ ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುವ ಕಥೆಗಳು ಕೇಕ್ ನಲ್ಲಿ ಮೂಡುತ್ತವೆ. ಬಾಲ ಏಸು, ತಾಯಿ ಮೇರಿ ಮುಂತಾದ ಘಟನೆಗಳು ಕೇಕ್ ರೂಪದಲ್ಲಿ ದಾಖಲಾಗುತ್ತವೆ. ಕೇಕ್ ಇಲ್ಲದೆ ಈ ಎರಡು ಆಚರಣೆಗಳನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

2017 ರ ಕೇಕ್ ಶೋ ವಿಶೇಷತೆ
ಈ ಬಾರಿಯ ಕೇಕ್ ಶೋ ನಲ್ಲಿ, ದೇಶದ ಪಾರಂಪರಿಕ ಕಟ್ಟಡ ಗೇಟ್ ವೇ ಆಫ್ ಇಂಡಿಯಾ, ಮಕ್ಕಳೊಂದಿಗೆ ತುಂಟಾಟವಾಡುತ್ತಿರುವ ಮುದ್ದು ಪಾಂಡಗಳು, ಅಧ್ಯಾತ್ಮಿಕ ಶಕ್ತಿಯ ಚೈತನ್ಯಕ್ಕೆ ಸಾಕ್ಷಿಯಾಗಿರುವ ಬುದ್ಧ, ಪಲ್ಲಕ್ಕಿಯಲ್ಲಿ ಹೊರಟ ಮದುಮಗಳು ವಿಶೇಷವಾಗಿದೆ.
ಈ ವರ್ಷದ ಪ್ರದರ್ಶನ ರಾಷ್ಟ್ರೀಯ ಗ್ರಾಹಕ ಉತ್ಪನ್ನಗಳ ಮೇಳದ ಭಾಗವಾಗಿ ನಡೆಯುತ್ತಿದೆ. ವಿಭಿನ್ನ ಪರಿಕಲ್ಪನೆಯುಳ್ಳ 23 ಕೇಕ್ ಗಳನ್ನು ಇಲ್ಲಿ ವಿನ್ಯಾಸಗೊಳಿಸಲಾಗಿದೆ.

ಕೇಕ್ ಕಲಾಕೃತಿಗೆ ತಗಲುವ ವೆಚ್ಚ
ಕೇಕ್ ಕಲಾಕೃತಿಗಳ ಲೋಕದಲ್ಲಿ ಮುಂಬೈನ ಪಾರಂಪರಿಕ ಗೇಟ್ ವೇ ಆಫ್ ಇಂಡಿಯಾವನ್ನು 15 ಅಡಿ ಉದ್ದ, 11 ಅಡಿ ಎತ್ತರ ಹಾಗೂ ೫ ಅಡಿ ಅಗಲ ನಿರ್ಮಿಸಲಾಗಿದೆ. ಇದಕ್ಕಾಗಿ ಏಳು ಜನರ ತಂಡ, 75 ದಿನಗಳ ಕಾಲ ಅಹರ್ನಿಶಿ ದುಡಿದಿದ್ದಾರೆ. 40 ಟನ್ ಸಕ್ಕರೆ, ಖಾದ್ಯ, ರಾಯಲ್ ಐಸಿಂಗ್ ಬಳಸಿ ಬರೋಬ್ಬರಿ 1,200 ಕೆ.ಜಿ. ತೂಕದ ಗೇಟ್ ವೇ ಆಫ್ ಇಂಡಿಯಾ ಪ್ರತಿಕೃತಿ ತಯಾರಿಸಲಾಗಿದೆ. ದಟ್ಟ ಅರಣ್ಯದಲ್ಲಿ ವಾಸಿಸುವ ಬೃಹತ್ ಪಾಂಡಾದ ಕುಟುಂಬವೊಂದನ್ನು (180 ಕೆ.ಜಿ) ಕೇಕ್ ನಲ್ಲಿ ನಿರ್ಮಿಸಲಾಗಿದೆ.
ಈ ಪುಟ್ಟ ಸುಂದರ ಕುಟುಂಬ ಮನಸೂರೆಗೊಳ್ಳುತ್ತದೆ. ರಾಜವಂಶಸ್ಥರು ಬಳಸುತ್ತಿದ್ದ ಹಾಗೂ ಮದುವೆ ಸಂದರ್ಭದಲ್ಲಿ ಬಳಕೆಯಾಗುತ್ತಿದ್ದ ಡೋಲಿ(ಪಲ್ಲಕ್ಕಿ) ನೋಡುಗರ ಕೇಂದ್ರಬಿಂದುವಾಗಿದೆ. ಪಲ್ಲಕ್ಕಿಯ ಪ್ರತಿ ಹಂತದ ಸೂಕ್ಷ್ಮ ಕಸೂತಿ ಚಿತ್ರಣ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಸುಮಾರು 6.5 ಅಡಿ ಎತ್ತರ, 5 ಅಡಿ ಉದ್ದ ಮತ್ತು ೪ ಅಡಿ ಅಗಲವಿರುವ ಈ ಕೇಕ್ ಅದ್ಭುತವಾಗಿದೆ.

ಗಂಧರ್ವ ಲೋಕದ ಮದುವೆ ಅರಮನೆ
ಪ್ರದರ್ಶನಕ್ಕಿಟ್ಟಿರುವ ಎಲ್ಲಾ ಮಾದರಿಗಳು ವಿಶಿಷ್ಟವಾಗಿವೆ. ಚಿತ್ರಕಲೆಯ ಕ್ಯಾನ್ವಾಸ್(ಪ್ಯಾಲೆಟ್), ಆಧ್ಯಾತ್ಮಿಕ ಶಕ್ತಿಯ ಪಸರಿಸುವ ಬುದ್ಧ (ಯೋಗ), ಗಂಧರ್ವ ಲೋಕದ ಮದುವೆ ಅರಮನೆ, ಮತ್ಸ್ಯಕನ್ಯೆ, ಫ್ರೋಜನ್, ಪುಟ್ಬಾಲ್, ಆ್ಯಂಗ್ರಿ ಬರ್ಡ್, ಗೂಳಿ ಮತ್ತು ಕರಡಿ, ಐಫೆಲ್ ಟವರ್ ಮದುವೆ ಕೇಕ್, ಮರ್ದಿ ಗ್ರಾಸ್, ಸಂತೋಷವನ್ನು ಪ್ರತಿಬಿಂಬಿಸುವ ಕೇಕ್, ಕ್ಲೌನ್ ಮತ್ತು ಸರ್ಕಸ್, ಪೇಪರ್ ತಂತ್ರದಲ್ಲಿ ಅರಳಿರುವ ವಾಫೆರ್, ಸಿರಿಲ್, ಟೀ ಪಾಟ್, ಸ್ಕೂಟರ್, ಮ್ಯೂಸಿಕಲ್ ಥೀಮ್, ಕಾರ್ಟೂನ್ ಪಾತ್ರಗಳಾದ ಮಿನಿಯನ್ಸ್, ಸೆಲ್ಫಿ, ಡೈನೋಸಾರ್, ಜಾಯ್ ಕಲಾಕೃತಿಗಳನ್ನು ಕೇಕ್ ನಲ್ಲಿ ಅರಳಿಸಲಾಗಿದೆ.

ಕೇಕ್ ಒಂದು ಕಲೆಯೂ ಹೌದು
ಕಲೆಯಾಗಿ ಕೇಕ್ : ಕೇಕ್ ಕೇವಲ ಆಹಾರದ ಉತ್ಪನ್ನವಲ್ಲ. ಅದೊಂದು ವಿಶಿಷ್ಟ ಕಲೆಯಾಗಿಯೂ ಬೆಳೆದಿದೆ. ಚಿತ್ರಕಲಾವಿದ, ಶಿಲ್ಪಿಗಳ ಸೂಕ್ಷ್ಮ ಕುಸುರಿ ಕೆಲಸದಂತೆಯೇ ಕೇಕ್ ವಿನ್ಯಾಸ ಕೂಡ. ವರ್ಣರಂಜಿತ ಅಲಂಕಾರದ, ಬಗೆ ಬಗೆ ವಿನ್ಯಾಸದ ಕೇಕ್ ಗಳಿಗೆ ಬಹುಬೇಡಿಕೆ. ಕೇಕ್ ನಲ್ಲಿ ಕಲೆ ಅರಳಿಸುವ ಕೆಲಸ ಸುಲಭವಲ್ಲ. ಅದಕ್ಕೆ ಜ್ಞಾನ, ತಾಳ್ಮೆ ಅತ್ಯಗತ್ಯ.
ಕೇಕ್ ಅಲಂಕಾರದ ಇತಿಹಾಸ ಇರುವುದು 17ನೇ ಶತಮಾನದ ಮಧ್ಯಭಾಗದ ಉತ್ತರ ಯುರೋಪ್ನಲ್ಲಿ. ಅದರಲ್ಲೂ ಯುರೋಪಿನ ವಾಯವ್ಯ ಪ್ರಾಂತ್ಯದಲ್ಲಿ ಕೇಕ್ ಅಲಂಕಾರ ಒಂದು ಸಾಮಾನ್ಯ ಪ್ರಕ್ರಿಯೆಯಂತೆ ಪ್ರಾರಂಭವಾಯಿತು.
ಬಳಿಕ ಅದು ಇಡೀ ಖಂಡವನ್ನು ಆವರಿಸಿತು. ಇತ್ತೀಚಿನ ದಿನಗಳಲ್ಲಿ ಕೇಕ್ ಅಲಂಕಾರ ಸಾಮಾನ್ಯ ಸಂಗತಿಯಾಗಿರದೆ, ಅಧ್ಯಯನ ಶೀಲ ವಿಷಯವೂ ಆಗಿದೆ. ಕೇಕ್ ತಯಾರಿಕೆ, ವಿನ್ಯಾಸ ಕುರಿತ ಅನೇಕ ಕೋರ್ಸ್ ಗಳು ತಲೆ ಎತ್ತಿವೆ. ಕೇಕ್ ಲಾಭದಾಯಕ ಉದ್ದಿಮೆಯಾಗಿ ಬೆಳೆದಿರುವುದರಿಂದ ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಮುಗಿಬೀಳುತ್ತಿರುವವರ ಸಂಖ್ಯೆಯೂ ಅಧಿಕ.
ವಿವಿಧ ಸಮಾರಂಭಗಳಿಗೆ ಅದರ ಸ್ವರೂಪ, ಉದ್ದೇಶಕ್ಕೆ ಅನುಗುಣವಾಗಿ ಕೇಕ್ ತಯಾರಿಸಲಾಗುತ್ತದೆ. ಹುಟ್ಟುಹಬ್ಬದ ಕೇಕ್ ಗಳದ್ದೇ ಒಂದು ಮಾದರಿ, ವಿವಾಹ ಮಹೋತ್ಸವದಲ್ಲಿ ಬಳಕೆಯಾಗುವ ಕೇಕ್ ಮಾದರಿ ಇನ್ನೊಂದು ಬಗೆಯದು. ವಿಲ್ಟನ್ ಮಾದರಿ, ದಿ ಲಾಂಬೆತ್ ವಿಧಾನ, ದಿ ಆಸ್ಟ್ರೇಲಿಯನ್ ವಿಧಾನ ಇತ್ಯಾದಿ ಅನೇಕ ಕೇಕ್ ವಿನ್ಯಾಸದ ವಿಧಾನಗಳಿವೆ.

ಪ್ರವೇಶ ಶುಲ್ಕದ ವಿವರಗಳು
ಕೇಕ್ ಪ್ರದರ್ಶನ ಡಿ.15 ರಿಂದ ಜ.1 ರವರೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ (ಯುಬಿಸಿಟಿ ಎದುರು, ಕಂಠೀರವ ಕ್ರೀಡಾಂಗಣ, ವಿಠಲ್ ಮಲ್ಯ ರಸ್ತೆ, ಬೆಂಗಳೂರು) ದಲ್ಲಿ ನಡೆಯಲಿದೆ. ಸಮಯ: ಬೆಳಗ್ಗೆ 11 ರಿಂದ ರಾತ್ರಿ 9 ಗಂಟೆ. ಪ್ರವೇಶ ಶುಲ್ಕ ವಯಸ್ಕರಿಗೆ ₹60 ,10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ












Click it and Unblock the Notifications