ಬೆಂಗಳೂರಿನಲ್ಲಿ ಬೈಸಿಕಲ್ ಪ್ರತ್ಯೇಕ ಮಾರ್ಗಕ್ಕೆ ಸಂಪುಟ ಅಸ್ತು
ಬೆಂಗಳೂರು, ಜನವರಿ 3 : ನಗರದಲ್ಲಿ ಬೈಸಿಕಲ್ ಬಳಕೆಗೆ ಉತ್ತೇಜನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರವು ಎಂಜಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್ ನಿರ್ಮಿಸಲು ನಿರ್ಧರಿಸಿದೆ.
ಈ ಕುರಿತು ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅದರಂತೆ ಮಹಾತ್ಮ ಗಾಂಧಿ ರಸ್ತೆ, ವಿಧಾನಸೌಧ, ಕೋರಮಂಗಲ, ಇಂದಿರಾನಗರ, ಎಚ್ ಎಸ್ ಆರ್ ಲೇಔಟ್, ಎಚ್ ಬಿ ಆರ್ ಬಡಾವಣೆಗಳಲ್ಲಿ ವಿಶೇಷ ಸೈಕಲ್ ಪಥ ನಿರ್ಮಿಸಲಾಗುತ್ತದೆ.

ಜತೆಗೆ ಪಾಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ. ಬೆಂಗಳೂರಿನಲ್ಲಿ ಶುಲ್ಕ ಪಾವತಿಸಿ ಸೈಕಲ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಸೈಕಲ್ ಪಾರ್ಕಿಂಗ್ ಹಬ್ ಮತ್ತು ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ 80.18 ಕೋಟಿ ರೂ. ಒದಗಿಸಲಾಗುತ್ತದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಅರ್ಕಾವತಿ ಪುನರುಜ್ಜೀವನಕ್ಕೆ ಒಪ್ಪಿಗೆ: ಅರ್ಕಾವತಿ ನದಿ ಪುನರುಜ್ಜೀವನಗೊಳಿಸಬೇಕೆಂಬ ಕೂಗಿಗೆ ಸರ್ಕಾರ ಕಿವಿಗೊಟ್ಟಿದೆ. ಹೆಸರುಘಟ್ಟ ಕೆರೆಯಿಂದ ತಿಪ್ಪಗೊಂಡನಹಳ್ಳಿ ಕೆರೆವರೆಗೆ ನದಿ ಪಾತ್ರವನ್ನು ಸುಸ್ಥಿತಿಗೆ ತರಲು ಮೆ.ಅಖಿಲ್ ಇನ್ ಫ್ರಾ ಕಂಪನಿಗೆ ವಹಿಸುವ ಸಂಬಂಧ ಹಲವು ಸುತ್ತಿನಲ್ಲಿ ಸರ್ಕಾರ ಮಾತುಕತೆ ನಡೆಸಿತ್ತು. ಟೆಂಡರ್ ಮೊತ್ತದಲ್ಲಿ ಚೌಕಾಸಿ ನಡೆಸಿ 11.49 ಕೋಟಿ ರೂ.ಗೆ ಒಪ್ಪಿಗೆ ನೀಡಿದೆ.
ಇನ್ನು ಬೆಂಗಳೂರು ಕಾವೇರಿ ನೀರು ಪಂಪ್ ಮಾಡಿಕೊಡುವ ಮೂರು ಘಟಕ ಆಧುನೀಕರಣಕ್ಕೆ 170 ಕೋಟಿ ಬಳಸಲು ಸಂಪುಟ ನಿರ್ಧರಿಸಿದೆ. ಹಾಗೆಯೇ ಕೆಂಪೇಗೌಡ ಬಡಾವಣೆ ಗೆ ರಸ್ತೆ ನಿರ್ಮಿಸಲು 321 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದು, ಭೂಮಿ ನೀಡುವ ರೈತರಿಗೆ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಭೂಮಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications