ಸಾಲಬಾಧೆ ತಾಳಲಾರದೆ ಕ್ಯಾಬ್ ಚಾಲಕ ಆತ್ಮಹತ್ಯೆ
ಬೆಂಗಳೂರು, ಡಿಸೆಂಬರ್ 06 : ಸಾಲ ಬಾಧೆ ತಾಳಲಾರದೆ ಕ್ಯಾಬ್ ಚಾಲಕ ಅನಿಲ್ (30) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಎಸ್.ಬಿ.ಐ ಬ್ಯಾಂಕಿನಿಂದ ಅನಿಲ್ ತಂದೆ ರಾಜಣ್ಣ ಮನೆ ಅಡವಿಟ್ಟು 5 ಲಕ್ಷ ಸಾಲ ಪಡೆದಿದ್ದರು, ಆ ಸಾಲದ ಜವಾಬ್ದಾರಿಯನ್ನು ಅನಿಲ್ ಹೊತ್ತಿದ್ದರು. ಸರಿಯಾಗಿ ಕಂತು ಪಾವತಿಸುತ್ತಿದ್ದ ಅನಿಲ್ ಇತ್ತೀಚಿನ 3 ಕಂತು ಪಾವತಿಸಲು ವಿಫಲರಾಗಿದ್ದರು. ಇದರಿಂದ ಸಿಟ್ಟಿಗೆದ್ದ ಬ್ಯಾಂಕ್ ಸಿಬ್ಬಂದಿ ಮನೆ ಬಳಿ ಗಲಾಟೆ ಮಾಡಿ ಹೋಗಿದ್ದಾರೆ ಇದರಿಂದ ಮನನೊಂದು ಅನಿಲ್ ನೇಣಿಗೆ ಶರಣಾಗಿದ್ದಾರೆ.

ಸಾಯುವ ಮುನ್ನ ಸೆಲ್ಫಿ ವಿಡಿಯೊ ಮಾಡಿರುವ ಅನಿಲ್ ಬ್ಯಾಂಕ್ ಸಿಬ್ಬಂದಿಯ ದೌರ್ಜನ್ಯದ ಬಗ್ಗೆ ಹಿಗ್ಗಾಮುಗ್ಗಾ ಬೈದಿದ್ದಾರೆ, ಬ್ಯಾಂಕ್ ನಿಂದ ಯಾರೂ ಸಾಲ ಪಡೆಯಪೇಡಿ, ಮನೆ ಹಾಳು ಮಾಡುತ್ತಾರೆ ಎಂದಿದ್ದಾರೆ.
ಎಸ್.ಬಿ.ಐ ಸಿಬ್ಬಂದಿ ಮನೆ ಬಳಿ ಬಂದು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಲ ಮರುಪಾವತಿ ಮಾಡದ್ದಿರೆ ಮನೆ ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಅನಿಲ್ ಬಹಳ ಕುಗ್ಗಿ ಹೋಗಿದ್ದರು, ಕೆಲವು ದಿನಗಳ ಗಡುವು ಕೇಳಿದರೆ ನೀಡದೆ ಮನೆ ಹರಾಜು ಮಾಡುವುದಾಗಿ ಸಿಬ್ಬಂದಿ ಬೆದರಿಕೆ ಹಾಕಿದ್ದರು ಎಂದು ಅನಿಲ್ ಕುಟುಂಬ ಸದಸ್ಯರು ಹೇಳಿದ್ದಾರೆ.
ಇತ್ತೀಚೆಗೆ ಮದುವೆಯಾಗಿದ್ದ ಅನಿಲ್ ಗೆ 3 ತಿಂಗಳ ಮಗು ಇತ್ತು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications