ಲಂಚ ಪಡೆಯುವಾಗ ಸಿಕ್ಕಿಬಿದ್ದ ಜಲಮಂಡಳಿ ಅಧಿಕಾರಿ
ಬೆಂಗಳೂರು, ಜುಲೈ 05 : ಎರಡು ಹೊಸ ಮನೆಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಅನುಮತಿ ನೀಡಲು ಲಂಚ ಕೇಳಿದ್ದ ಜಲಮಂಡಳಿ ಅಧಿಕಾರಿಯೊಬ್ಬರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ಜಲ ಮಂಡಳಿಯಲ್ಲಿ ಜಲಪರಿವೀಕ್ಷಕರಾಗಿರುವ ವೆಂಕಟರಮಣಪ್ಪ ಅವರು ಈ ಪರವಾನಗಿ ನೀಡಲು 40 ಸಾವಿರ ರುಪಾಯಿ ಲಂಚ ಕೇಳಿದ್ದರು. ಇದರಲ್ಲಿ 20 ಸಾವಿರ ರುಪಾಯಿ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ನಗರದ ಶ್ರೀನಿವಾಸಪುರ ಕಾಲೋನಿ ನಿವಾಸಿಯಾಗಿರುವ ಖಾಸಗಿ ಗುತ್ತಿಗೆದಾರರೊಬ್ಬರು ಕುಮಾರಸ್ವಾಮಿ ಲೇಔಟ್ನಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಮನೆಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ನೀಡಲು ಗುತ್ತಿಗೆ ಪಡೆದಿದ್ದರು.
ಈ ಮನೆಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆಯಲು ಅನುಮತಿಗಾಗಿ ಬನಗಿರಿ ನಗರ, ಎಸ್-1 ಉಪವಿಭಾಗ, ಬೆಂಗಳೂರು ಜಲಮಂಡಳಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಪರವಾನಗಿ ನೀಡಲು 40 ಸಾವಿರ ರು. ಲಂಚದ ಹಣ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು.
ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು. ವೆಂಕಟರಮಣಪ್ಪ ಅವರು 20 ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುವ ಇವರನ್ನು ದಸ್ತಗಿರಿ ಮಾಡಲಾಗಿದೆ.
ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಎಸಿಬಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.