ನೀರಿನ ಬಿಕ್ಕಟ್ಟು: ಜಲಮಂಡಳಿಗೆ ₹37.5 ಕೋಟಿ ಕೊಟ್ಟ ಬಿಬಿಎಂಪಿ, ಹೊಸ ಬೋರ್ವೆಲ್?
ಬೆಂಗಳೂರು, ಮಾರ್ಚ್ 13: ರಾಜಧಾನಿಯಲ್ಲಿ ಕುರಿಯುವ ನೀರಿನ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಇದೆ. ಈ ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗೆ ಹೆಚ್ಚಿನ ಹೊಸ ಬೋರ್ವೆಲ್ಗಳನ್ನು ತೆಗೆಯಲು ಹಾಗೂ ಇನ್ನಿತರ ಕಾರ್ಯಗಳಿಗೆ ಅನುದಾನ ಒದಗಿಸಿದೆ.
ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಗೆ ಹೊಸ ಬೋರ್ವೆಲ್ ಕೊರೆಸಲು ಮತ್ತು ಅಸಮರ್ಪಕ ಬೋರ್ವೆಲ್ ದುರಸ್ತಿಗಾಗಿ ಒಟ್ಟು 37.5 ಕೋಟಿ ರೂಪಾಯಿ ಹಣ ನೀಡಿದೆ ಎಂದು 'ಡಿಎಚ್' ವರದಿ ಮಾಡಿದೆ.

ನೀರು ಸರಬರಾಜು ಕುರಿತಂತೆ ಬಿಬಿಎಂಪಿ ನಗರದ ವಿವಿಧೆಡೆ ಹೆಚ್ಚುವರಿಯಾಗಿ 32.60 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನಿಸಿದೆ. ಪೈಪ್ಲೈನ್ ಮೂಲ ಸೌಕರ್ಯ ಇರುವ ಪ್ರಮುಖ ಪ್ರದೇಶಗಳಿಗೆ ಬೆಂಗಳೂರು ಜಲಮಂಡಳಿ (BWSSB) ನೀರು ಸರಬರಾಜು ಮಾಡುತ್ತಿದ್ದರೆ, ಬಿಬಿಎಂಪಿ ಹೊರವಲಯದಲ್ಲಿ ಬೋರ್ವೆಲ್ಗಳನ್ನು ಕೊರೆದು ನೀರು ಪೂರೈಕೆಗೆ ಕ್ರಮವಹಿಸಿದೆ.
ಈ ಕ್ಷೇತ್ರಗಳಲ್ಲಿ ಹೊಸ ಬೋರ್ವೆಲ್
ನಗರದಲ್ಲಿ ಕಾವೇರಿ ನೀರು ಕಡಿಮೆ ಪೂರೈಕೆಯ ವಿವಿಧ ಪ್ರದೇಶಗಳಲ್ಲಿ ಬೋರ್ವೆಲ್ಗಳನ್ನು ಕೊರೆಯಲು ಬೆಂಗಳೂರು ಜಲಮಂಡಳಿ ತೀರ್ಮಾನಿಸಿದೆ. ಕ್ಷೇತ್ರಗಳಾದ ಹೆಬ್ಬಾಳ, ಜಯನಗರ ಪುಲಕೇಶಿನಗರ, ಗಾಂಧಿನಗರ, ಸರ್ವಜ್ಞನಗರ, ಗೋವಿಂದರಾಜನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿ, ವಿಜಯನಗರ ಮತ್ತು ಆರ್.ಆರ್.ನಗರ ಕ್ಷೇತ್ರಗಳಿಗೆ ತಲಾ 2ರಿಂದ 5 ಕೋಟಿ ರೂಪಾಯಿ ನೀಡಲಾಗಿದೆ.
110 ಗ್ರಾಮಗಳ ಬೋರ್ವೆಲ್ ವಿವರ
ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಲ್ಲಿ ಬಿಬಿಎಂಪಿ ಒಟ್ಟು 32.30 ಕೋಟಿ ವೆಚ್ಚದಲ್ಲಿ ಬೋರ್ವೆಲ್ಗಳನ್ನು ಕೊರೆಯಲಿದೆ. ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ ವಲಯಗಳಿಗೆ ನೀರು ಪೂರೈಸಲು ಮೂಲಸೌಕರ್ಯ ಕಲ್ಪಿಸಿ ಹಣ ನೀಡಲಾಗಿದೆ.

ಹೊಸ ಬೋರವೆಲ್ ಇದು ತಾತ್ಕಾಲಿಕ ಕ್ರಮ
ಉದ್ಯಾನ ನಗರಿ ಎಂದು ಹೆಸರು ಪಡೆದ ಐಟಿ ಕೇಂದ್ರ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವು ಈಗಾಗಲೇ ವ್ಯಾಪಕವಾಗಿ ಕುಸಿದಿದೆ. ಈ ಬೇಸಿಗೆಗೆ ಬೋರ್ವೆಲ್ಗಳನ್ನು ಕೊರೆಯುವುದು ತಾತ್ಕಾಲಿಕ ಕ್ರಮ ಎನ್ನಬಹುದಷ್ಟೇ. ಇದರಲ್ಲಿನ ನೀರು ಇದೇ ಬೇಸಿಗೆಯಲ್ಲಿಯೇ ಖಾಲಿಯಾಗುವಷ್ಟರ ಮಟ್ಟಿಗೆ ಬೇಡಿಕೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಾದರೂ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಕಳುಹಿಸಿ ಮತ್ತು ತೆರೆದ ಬಾವಿಗಳನ್ನು ತೋಡುವ ಮೂಲಕ ಮಳೆನೀರನ್ನು ವ್ಯರ್ಥವಾಗಿ ಹರಿಯಲು ಬಿಡದೇ ಬಳಸಿಕೊಳ್ಳಬೇಕು. ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳಬೇಕು, ಮಳೆ ನೀರು ಕೊಯ್ಲು ಕಡ್ಡಾಯವಾಗಿ ಜಾರಿಗೆ ಬರಬೇಕು. ಇಂತಹ ಎಲ್ಲ ಕಾರ್ಯಕ್ರಮಗಳ ಜಾರಿಗೆ ದೊಡ್ಡ ಮಟ್ಟದಲ್ಲಿ ಕ್ರಮಾಗಬೇಕು ಎಂದು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ.












Click it and Unblock the Notifications