BWSSB: ನೀರು ಪೋಲು ಮಾಡಿದವರಿಗೆ ಬಿತ್ತು ₹5.60 ಲಕ್ಷ ದಂಡ, ಈ ಭಾಗದಲ್ಲೇ ಹೆಚ್ಚು
ಬೇಸಿಗೆ ಶುರುವಾಗಿರುವುದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ದಂಡಾಸ್ತ್ರವನ್ನು ಪ್ರಯೋಗಿಸುತ್ತಿದೆ. ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವವರು ಹಾಗೂ ನೀರನ್ನು ಪೋಲು ಮಾಡುವವರಿಗೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ಬಗ್ಗದ ಜನರ ವಿರುದ್ಧ ಕೇಸ್ ದಾಖಲಿಸಿ ಬರೋಬ್ಬರಿ 5.60 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.
ಕುಡಿಯುವ ನೀರನ್ನು ಪೋಲು ಮಾಡುವವರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸುವುದಾಗಿ ಕಳೆದ ವಾರವೇ ಜಲಮಂಡಳಿಯು ವಾರ್ನಿಂಗ್ ಕೊಟ್ಟಿತ್ತು. ಆದರೆ ಇದನ್ನು ಕೆಲವರು ಲೆಕ್ಕಕ್ಕೆ ತೆಗೆದುಕೊಳ್ಳದೆ ಎಂದಿನಂತೆ ಕುಡಿಯುವ ನೀರನ್ನು ಪೋಲು ಮಾಡುತ್ತಿದ್ದರು. ಇಂತವರ ಮೇಲೆ ನಿಗಾ ಇಟ್ಟಿದ್ದ ಜಲಮಂಡಳಿಯು ಒಂದೇ ವಾರದಲ್ಲಿ 112 ಕೇಸ್ ದಾಖಲಿಸಿ 5.60 ಲಕ್ಷ ದಂಡ ವಿಧಿಸಿದೆ.

ನೀರು ಪೋಲು ಮಾಡುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರಡಿ ದಂಡ ವಿಧಿಸುವ ವಿಧಿಸುವುದಾಗಿ ಹೇಳಿತ್ತು. ಕುಡಿಯುವ ನೀರನ್ನ ಬೇರೆ ಉದ್ದೇಶಗಳಿಗೆ ಬಳಸದಂತೆಯೂ ಜಲಮಂಡಳಿ ಆದೇಶ ಹೊರಡಿಸಿತ್ತು. ಇದನ್ನು ಕಡೆಗಣಿಸಿದವರ ಮೇಲೆ ಅಧಿಕಾರಿಗಳು ನಿಗಾ ಇಟ್ಟು ದಂಡ ವಿಧಿಸಿದ್ದಾರೆ. ಇವರೆಲ್ಲ ಜಲಮಂಡಳಿ ಎಚ್ಚರಿಕೆಯನ್ನು ಕಡೆಗಣಿಸಿದ್ದರು ಎಂದು ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಅದರಂತೆ ಫೆಬ್ರುವರಿ 23ರವೆರೆಗೆ ಬೆಂಗಳೂರು ಭಾಗದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ 112 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಬೆಂಗಳೂರು ದಕ್ಷಿಣ ಭಾಗದಲ್ಲೇ ಹೆಚ್ಚು ಕೇಸ್ಗಳು ದಾಖಲಾಗಿವೆ. ದಕ್ಷಿಣ ವಲಯದಲ್ಲಿ 33 ಕೇಸ್ ದಾಖಲಾಗಿದ್ದರೆ, ಉತ್ತರ ವಲಯದಲ್ಲಿ 23, ಪಶ್ಚಿಮ ವಲಯದಲ್ಲಿ 28 ಹಾಗೂ ಪೂರ್ವ ವಲಯದಲ್ಲಿ 28 ಕೇಸ್ ದಾಖಲಾಗಿವೆ.

ಬೆಂಗಳೂರಿಗರು ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಂಡಾಸ್ತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ಪ್ರಯೋಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಕುಸಿಯಬಹುದು ಎಂದು ಐಐಎಸ್ಸಿ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಬೆಂಗಳೂರಿನ ಉಳಿವಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈತೋಟ ನಿರ್ವಹಣೆ, ಕಟ್ಟಡ ನಿರ್ಮಾಣಕ್ಕೆ, ಮನರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆ ಸೇರಿದಂತೆ ಇನ್ನಿತರ ಯಾವುದೇ ಉದ್ದೇಶಗಳಿಗೆ ಬಳಸುವಂತಿಲ್ಲ. ಸಿನಿಮಾ ಹಾಲ್ ಹಾಗೂ ಮಾಲುಗಳಲ್ಲೂ ಕುಡಿಯುವ ನೀರಿನ ಹೊರತಾಗಿ ಬೇರೆ ಉದ್ದೇಶಗಳಿಗೆ ನೀರನ್ನು ಬಳಸುವಂತಿಲ್ಲ ಎಂದು ಜಲಮಂಡಳಿ ಆದೇಶದಲ್ಲಿ ತಿಳಿಸಿದೆ.
ಈ ನಿಯಮಗಳನ್ನು ಉಲ್ಲಂಘಿಸಿದವರು ಕಂಡುಬಂದರೆ ಜಲಮಂಡಳಿ ಸಹಾಯವಾಣಿ ಸಂಖ್ಯೆ 1916ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆಯೂ ತಿಳಿಸಿದೆ. ಬೆಂಗಳೂರಿನಲ್ಲಿ ಈ ಭಾರಿ ಬೇಸಿಗೆಯು ವಿಪರೀತವಾಗಿರಲಿದೆ. ಇದರಿಂದ ಜಲಮೂಲಗಳಲ್ಲಿ ನೀರಿನ ಅಭಾವ ಕೂಡ ಎದುರಾಗುವ ಸಾಧ್ಯತೆ ಇದೆ ಎಂಬ ಮುಂಜಾಗ್ರತಾ ಕ್ರಮವಾಗಿ ಈ ನಿಯಮಗಳನ್ನು ರೂಪಿಸಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಬರದಂತೆ ತಡೆಯುವುದು ಇದರ ಉದ್ದೇಶ ಎನ್ನಲಾಗಿದೆ.












Click it and Unblock the Notifications