ಮಳೆಯಿಂದ ತತ್ತರಿಸಿರುವ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ
ಬೆಂಗಳೂರು, ಸೆ. 11: ಎಡಬಿಡದೆ ಸುರಿಯುತ್ತಿರುವ ಮಳೆಗೆ ತತ್ತರಿಸಿರುವ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಕೂಡಾ ಎದುರಾಗಿದೆ. ನಗರದ ಉತ್ತರ ಹಾಗೂ ಪೂರ್ವ ಭಾಗಕ್ಕೆ ಕಾವೇರಿ ನೀರು ಪೂರೈಸುವ ಪೈಪ್ ಲೈನ್ ನಲ್ಲಿ ಸೋರಿಕೆ ಕಂಡು ಬಂದಿದ್ದರಿಂದ ಭಾನುವಾರ ಪೂರ್ತಿ ಆ ಭಾಗದ ಜನತೆ ಪರದಾಡಿದ್ದಾರೆ.
ಭಾನುವಾರದಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು, ಪೈಪ್ ಲೈನ್ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸೋಮವಾರದ ಸಂಜೆ ವೇಳೆಗೆ ನೀರು ಪೂರೈಸಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಕೋರಿದೆ.

ಕಾವೇರಿ ನಾಲ್ಕನೇ ಘಟ್ಟದ 2ನೇ ಹಂತದ ನೀರು ಬೆಂಗಳೂರಿನ ಉತ್ತರ ಹಾಗೂ ಪೂರ್ವ ಭಾಗದ ಕೆಲವು ಕಡೆಗೆ ಕುಡಿಯುವ ನೀರು ಒದಗಿಸುತ್ತಿದೆ. ಉತ್ತರಹಳ್ಳಿ ಬಳಿ ಈ ಪೈಪ್ ಲೈನ್ ನಲ್ಲಿ ಸೋರಿಕೆಯಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಕುಡಿಯುವ ನೀರು ವ್ಯರ್ಥವಾಗೋದನ್ನು ತಪ್ಪಿಸೋಕೆ ಜಲಮಂಡಳಿ ತುರ್ತು ರಿಪೇರಿ ಕಾರ್ಯ ಹಮ್ಮಿಕೊಂಡಿತ್ತು.
ಇದರಿಂದಾಗಿ ಅನಿವಾರ್ಯವಾಗಿ ರಾಜಾಜಿನಗರ, ಮಹಾಲಕ್ಷ್ಮೀ ಲೇ ಔಟ್, ಬಸವೇಶ್ವರ ನಗರ, ಜಿಕೆವಿಕೆ, ಎಚ್.ಎಸ್.ಆರ್ ಲೇಔಟ್,ರಾಜರಾಜೇಶ್ವರಿ ನಗರ, ಎಚ್ ಆರ್ ಬಿಆರ್ ಲೌಟ್, ಸರ್ವಜ್ಞನಗರ, ಜೆಪಿನಗರ ಸೇರಿದಂತೆ ನಗರದ ಪಶ್ಚಿಮ, ಪೂರ್ವ, ಉತ್ತರ ಭಾಗಗಳಲ್ಲಿ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.
ಮಳೆಯಿಂದಾಗಿ ಹಲವೆಡೆ ನೀರು ಪೂರೈಕೆ ಪೈಪ್ ಗಳಲ್ಲಿ ಕೆಸರು, ಕಸ, ಮಣ್ಣು ಸೇರಿಕೊಂಡಿವೆ. ಕೆಲವೆಡೆ ಕೊಳಚೆ ನೀರು ಹಾಗೂ ಶುದ್ಧ ನೀರು ಮಿಶ್ರಣವನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ಜಾರಿಯಲ್ಲಿದ್ದು, ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ನೀರು ಪೂರೈಕೆಯಾಗಲಿದೆ ಎಂದು ಜಲಮಂಡಳಿ (ಉತ್ತರ) ಮುಖ್ಯ ಇಂಜಿನಿಯರ್ ರವೀಂದ್ರ ಅವರು ಹೇಳಿದರು.












Click it and Unblock the Notifications