Budget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿ
ಬೆಂಗಳೂರು, ಫೆಬ್ರವರಿ 03; ಕೇಂದ್ರ ಬಜೆಟ್ 2022-23ರಲ್ಲಿ ಬೆಂಗಳೂರು ನಗರದ ಬಹುನಿರೀಕ್ಷಿತ ಉಪ ನಗರ ರೈಲು ಯೋಜನೆಗೆ 450 ಕೋಟಿ ರೂ. ನೀಡಲಾಗಿದೆ. ಯೋಜನೆಯ ಸಿವಿಲ್ ಕಾಮಗಾರಿಗಳು ಮಾರ್ಚ್ನಲ್ಲಿ ಆರಂಭವಾಗಲಿವೆ.
ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ ಕರ್ನಾಟಕ ಲಿಮಿಟೆಡ್ (ಕೆ-ರೈಡ್) ಬೆಂಗಳೂರು ನಗರದಲ್ಲಿ ನಾಲ್ಕು ಕಾರಿಡಾರ್ಗಳ 148 ಕಿ. ಮೀ. ಉಪ ನಗರ ರೈಲು ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಕೆ-ರೈಡ್ ಈಗಾಗಲೇ ಬೈಯಪ್ಪನಹಳ್ಳಿ-ಚಿಕ್ಕಬಣಾವರ ಕಾರಿಡಾರ್ ನಂಬರ್ 2ರ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆದಿದೆ. ಮಾರ್ಚ್ನಲ್ಲಿ ಸಿವಿಲ್ ಕಾಮಗಾರಿಗಳು ಆರಂಭವಾಗಲಿವೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.

ಶೇ 90ರಷ್ಟು ಯೋಜನಾ ರೂಪುರೇಷೆ ಸಿದ್ಧವಾಗಿದೆ. ಇವುಗಳಲ್ಲಿ ಅಲೈನ್ಮೆಂಟ್, ನಿಲ್ದಾಣಗಳು, ಮೂಲ ಸೌಕರ್ಯಗಳ ಪೂರೈಕೆ, ಸಮೀಕ್ಷೆ ಎಲ್ಲವೂ ಸೇರಿದೆ. ಫೆಬ್ರವರಿ 10ರಂದು ಟೆಂಡರ್ ತೆರೆಯಲಾಗುತ್ತದೆ. ಮಾರ್ಚ್ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಮುಂದಿನ ಮೂರು ಅಥವ ನಾಲ್ಕು ತಿಂಗಳಿನಲ್ಲಿ ಹೀಲಲಿಗೆ-ರಾಜನಕುಂಟೆ ಮಾರ್ಗ. ಬಳಿಕ ಮೆಜೆಸ್ಟಿಕ್-ದೇವನಹಳ್ಳಿ ಮಾರ್ಗದ ಟೆಂಡರ್ ಕರೆಯಲಾಗುತ್ತದೆ. ಆರು ವರ್ಷಗಳಲ್ಲಿ ನಾಲ್ಕು ಕಾರಿಡಾರ್ಗಳನ್ನು ಪೂರ್ಣಗೊಳಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ.
ಕೇಂದ್ರ ವಿತ್ತ ಸಚಿವಾಲಯ ಯೋಜನೆಗೆ ಅನುದಾನ ಸಂಗ್ರಹಕ್ಕೆ ಒಪ್ಪಿಗೆ ನೀಡಿದೆ. ಫ್ರೆಂಚ್ ಮತ್ತು ಜರ್ಮನ್ ಬ್ಯಾಂಕ್ಗಳಿಂದ ಅನುದಾನ ಪಡೆಯುವ ಮಾತುಕತೆಗಳು ಜಾರಿಯಲ್ಲಿವೆ. ಉಪನಗರ ರೈಲು ಯೋಜನೆ ಅಂದಾಜು ಮೊತ್ತ 15,767 ಕೋಟಿ, ಕೆ-ರೈಡ್ 7,438 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆಯಲಿದೆ.
ಮೆಜೆಸ್ಟಿಕ್ ದೇವನಹಳ್ಳಿ ಕಾರಿಡಾರ್ ಕಾಮಗಾರಿ ಬೇಗ ಆರಂಭಿಸಬೇಕು ಎಂದು ಆನ್ಲೈನ್ ಅಭಿಯಾನ ನಡೆಯುತ್ತಿದೆ. ಈ ಮಾರ್ಗ ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದ ಉದ್ದ 41.40 ಕಿ. ಮೀ.ಗಳು. ಈ ಮಾರ್ಗದಲ್ಲಿ ಕೆಎಸ್ಆರ್ ರೈಲು ನಿಲ್ದಾಣ, ಶ್ರೀರಾಂಪುರ, ಮಲ್ಲೇಶ್ವರ, ಯಶವಂತಪುರ, ಮುತ್ಯಾಲನಗರ, ಕೊಡಿಗೇಹಳ್ಳಿ, ನ್ಯಾಯಾಂಗ ಬಡಾವಣೆ, ಯಲಹಂಕ, ನಿಟ್ಟೆ ಕಾಲೇಜು, ಬೆಟ್ಟಹಲಸೂರು, ದೊಡ್ಡಜಾಲ, ಕೆಐಎ ಟ್ರಂಪೆಟ್, ದೇವನಹಳ್ಳಿ ನಿಲ್ದಾಣಗಳಿವೆ.
ಉಪನಗರ ರೈಲು ಯೋಜನೆಗೆ ಬಜೆಟ್ನಲ್ಲಿ ಅನುದಾನ ನೀಡಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕೆ-ರೈಡ್ ಬೇಗ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವರ್ಷವೇ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇನ್ನೂ ಅದು ಆಗಿಲ್ಲ.
ಉಪ ನಗರ ಯೋಜನೆ ಕಾರಿಡಾರ್ಗಳು
* ಕಾರಿಡಾರ್ 1 ಬೆಂಗಳೂರು ಸಿಟಿ-ದೇವನಹಳ್ಳಿ. ಒಟ್ಟು ಉದ್ದ 41.40 ಕಿ. ಮೀ.ಗಳು
* ಕಾರಿಡಾರ್ 2 ಚಿಕ್ಕಬಾಣಾವರ-ಬೈಯಪ್ಪನಹಳ್ಳಿ. 25. 01 ಕಿ. ಮೀ.ಗಳು
* ಕಾರಿಡಾರ್ 3 ಹೀಲಲಿಗೆ-ರಾಜನಕುಂಟೆ. 46.24 ಕಿ. ಮೀ.ಗಳು
* ಕಾರಿಡಾರ್ 4 ಕೆಂಗೇರಿ-ಬೈಯಪ್ಪನಹಳ್ಳಿ. 36.12 ಕಿ. ಮೀ.ಗಳು.
ಯೋಜನೆ ಕುರಿತ ವಿವರ; 2018ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಉಪ ನಗರ ರೈಲು ಯೋಜನೆ ಪ್ರಸ್ತಾವನೆ ತಯಾರು ಮಾಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಯ ಶೇ 20ರಷ್ಟು ವೆಚ್ಚ ಹಾಕುವುದು ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಲು ತೀರ್ಮಾನವಾಯಿತು.
2019ರಲ್ಲಿ ಯೋಜನೆ ಡಿಪಿಆರ್ ಸಿದ್ಧವಾಯಿತು. ರೈಲ್ವೆ ಸಚಿವಾಲಯ ವೆಚ್ಚ ಕಡಿತಕ್ಕೆ ಸೂಚನೆ ನೀಡಿದ ಕಾರಣ ಡಿಪಿಆರ್ ಪರಿಷ್ಕರಣೆ ಮಾಡಲಾಯಿತು. 2020ರ ಬಜೆಟ್ನಲ್ಲಿ ಯೋಜನೆ ಘೋಷಣೆಯಾಯಿತು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯೂ ಸಿಕ್ಕಿತು.
ಒಟ್ಟು 57 ನಿಲ್ದಾಣಗಳನ್ನು ಯೋಜನೆ ಒಳಗೊಂಡಿದೆ. ಕಾಮಗಾರಿ 6 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸುಮಾರು 103 ಎಕರೆ ಭೂಮಿ ಯೋಜನೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications