"ಬಿಬಿಎಂಪಿ ಬಜೆಟ್ಟಿಗೆ ತಡೆ, ಬಿಎಸ್ವೈ ಕ್ರಮದಿಂದ ಕಾಮಗಾರಿ ಕುಂಠಿತ"
ಬೆಂಗಳೂರು, ಆಗಸ್ಟ್ 13: ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ ತಡೆಯೊಡ್ಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿವೃದ್ಧಿಯ ಹೆಸರಿನಲ್ಲಿ ಹಣದ ಲೂಟಿ ಮಾಡಲಾಗುತ್ತಿದೆ, ಹಣದ ಲೂಟಿ ಹೊಡೆಯಲು ಕಾಮಗಾರಿ ನಡೆಸಬಾರದು ಎಂಬ ಕಾರಣವನ್ನು ನೀಡಿದ್ದಾರೆ. ಹಾಗಿದ್ದರೆ ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳ ಗತಿ ಏನು? ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
ಬಜೆಟ್ ಅನುಷ್ಠಾನವನ್ನು ರದ್ದುಗೊಳಿಸುವುದರಿಂದ ಭ್ರಷ್ಟಚಾರವನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಮರೆತಿದ್ದಾರೆ. ಕಾಮಗಾರಿಗಳು ಮತ್ತು ಅವುಗಳ ಖರ್ಚುವೆಚ್ಚದ ಲೆಕ್ಕಪತ್ರವನ್ನು ಪರಿಶೀಲಿಸಿ, ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯದಂತೆ ಸರ್ಕಾರ ಮೇಲ್ವಿಚಾರಣೆ ನಡೆಸದೆ ತಡೆಯಾಜ್ಞೆ ನೀಡಿದ್ದಾರೆ ಎಂದು ಎಎಪಿ ಹೇಳಿದೆ.
ಡೆಂಘೀ ಮಹಾಮಾರಿಯ ಆಕ್ರಮಣ, ನಿದ್ರೆಯಿಂದೇಳದ ಬಿಬಿಎಂಪಿ
"ಬಿಜೆಪಿ ದೇಶದ ಬಹುತ್ವವನ್ನು ತುಳಿದು ಸರ್ವಾಧಿಕಾರಿ ಧೋರಣೆಯನ್ನು ಪ್ರಜಾಪ್ರಭುತ್ವದ ಮೇಲೆ ಹೇರಲಾರಂಭಿಸಿದೆ. ಇದಕ್ಕೆ ರಾಜ್ಯ ರಾಜಕಾರಣವೇನೂ ಹೊರತಾಗಿಲ್ಲ. ತನ್ನ ಅನೈತಿಕ, ಅಸಂವಿಧಾನಿಕ ನಡೆಯಿಂದ ಕುದುರೆ ವ್ಯಾಪಾರಮಾಡಿ ಸರ್ಕಾರ ರಚಿಸಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿ ವಾರವೇ ಕಳೆದರೂ ಇನ್ನೂ ಸಂಪುಟ ರಚನೆಯನ್ನೇ ಮಾಡದೇ ಇರುವ ಮುಖ್ಯಮಂತ್ರಿ ಯಡಿಯೂರಪ್ಪ ಒಂದಾದ ಮೇಲೊಂದರಂತೆ ಯೋಜನೆಗಳಿಗೆ ಮತ್ತು ನೇಮಕಾತಿಗಳಿಗೆ ಬ್ರೇಕ್ ಹಾಕುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ" ಎಂದು ಎಎಪಿ ಆರೋಪಿಸಿದೆ.
9 ಸಾವಿರ ಕೋಟಿ ರು ಬಜೆಟ್
ಬಿಬಿಎಂಪಿಯು 2019ರ ಫೆಬ್ರವರಿಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯಕ್ಕಾಗಿ 12,957 ಕೋಟಿ ರೂಗಳ ಬಜೆಟ್ ಮಂಡನೆ ಮಾಡಲಾಗಿತ್ತು. ಆದರೆ ಬೆಂಗಳೂರು ನಗರಕ್ಕೆ ಇಷ್ಟು ದೊಡ್ಡ ಬಜೆಟ್ ಹೊಂದಿಸಿ, ಅನುಷ್ಠಾನ ಮಾಡುವುದು ಕಷ್ಟಸಾಧ್ಯವೆಂದು 9,000 ಕೋಟಿ ರೂಗಳಿಗೆ ಮೊಟಕುಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಅನುಮೋದನೆಗೆ ಆಯುಕ್ತ ಎನ್.ಮಂಜುಪ್ರಸಾದ್ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆ ಮೇ 23ರಂದು 11,624 ಕೋಟಿ ಮೊತ್ತದ ಬಜೆಟ್ಗೆ ಅನುಮೋದನೆ ನೀಡಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಪೋರೇಟರ್ಗಳೇ ಬಿಬಿಎಂಪಿಯಲ್ಲಿಯೂ ಅಧಿಕಾರದಲ್ಲಿರುವುದರಿಂದ ಮೈತ್ರಿ ಸರ್ಕಾರ ಕಾರ್ಪೋರೇಟರ್ಗಳ ಅನುಕೂಲಕ್ಕೆ ತಕ್ಕಂತೆ ಅನುಮೋದನೆ ನೀಡಿದ್ದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರಲ್ಲಿ ಭಾರಿ ಮಳೆ ಎಚ್ಚರಿಕೆ, ಬಿಬಿಎಂಪಿಯಿಂದ ಹೈ ಅಲರ್ಟ್
ಮೈತ್ರಿ ಸರ್ಕಾರದ ಅನುಮೋದನೆಗೆ ತಡೆ
ಅಲ್ಲದೆ, ಬಿಬಿಎಂಪಿಯನ್ನು ಸಂಪೂರ್ಣವಾಗಿ ತಮ್ಮ ಕೈಗೊಂಬೆಯಾಗಿ ಮಾಡಿಕೊಳ್ಳಲು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವ ಪಕ್ಷಗಳು ಹವಣಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಬಿಬಿಎಂಪಿಯು ರೂಪಿಸಿದ್ದ ಜನಪರವಾದ ಜಾಹೀರಾತು ಬೈಲಾವನ್ನು ಬುಡಮೇಲು ಮಾಡಿ ಜಾಹೀರಾತು ನೀಡುವ ಕಂಪನಿಗಳಿಗೆ ಅನುಕೂಲವಾಗುವಂತಹ ಹೊಸ ನಿಯಮಾವಳಿಯನ್ನು ರೂಪಿಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಈಗ ಸಚಿವ ಸಂಪುಟವೇ ಇಲ್ಲದ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಮೈತ್ರಿ ಸರ್ಕಾರ ಅನುಮೋದನೆ ನೀಡಿದ್ದ ಬಜೆಟ್ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿದ್ದಾರೆ.
ಬಿಬಿಎಂಪಿ ಬಜೆಟ್ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!
ಬಿಬಿಎಂಪಿಯ ಹಲವಾರು ಕಾಮಗಾರಿ
ಬಿಬಿಎಂಪಿಯ ಹಲವಾರು ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದು, ಅಧಿಕಾರಿಗಳು ಹಾಗೂ ರಾಜಕಾರಣಗಳ ದುರಾಡಳಿತ, ಬೇಜವಾಬ್ದಾರಿತನ ಮತ್ತು ಭ್ರಷ್ಟಾಚಾರದಿಂದಾಗಿ ಈಗಾಗಲೇ ನಲುಗಿಹೋಗಿರುದೆ. ಬಿಜೆಪಿಗೆ ಅನುಕೂಲವಾಗುವಂತಹ ಬಜೆಟ್ ರೂಪಿಸಿಕೊಳ್ಳುವ ಕೆಟ್ಟ ಹುನ್ನಾರದಿಂದ ನಗರಾಭಿವೃದ್ಧಿ ಇಲಾಖೆಯ ಸಚಿವರೇ ಇಲ್ಲದಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರೇ ಏಕಪಕ್ಷೀಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಸರ್ವಾಧಿಕಾರಿ ಧೋರಣೆಯನ್ನು ಸಾಬೀತುಪಡಿಸುತ್ತಿದ್ದಾರೆ.
ಜಯಮಹಲ್ ರಸ್ತೆ ಅಗಲೀಕರಣಕ್ಕೆ ಇದ್ದ ಅಡೆ-ತಡೆ ನಿವಾರಣೆ
ಮೂರು ಪಕ್ಷಗಳ ಪಾಲಿನ ಎಟಿಎಂ ಬಿಬಿಎಂಪಿ
ಒಟ್ಟಿನಲ್ಲಿ ಈ ಮೂರು ಪಕ್ಷಗಳು ಬಿಬಿಎಂಪಿಯನ್ನು ತಮ್ಮ ಎಟಿಎಂ ಆಗಿಕೊಂಡು ತನ್ನ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ರಾಜ್ಯ ಸರ್ಕಾರಗಳ ಹಸ್ತಕ್ಷೇಪದಿಂದ ಸ್ಥಳೀಯ ಆಡಳಿತ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗದೆ ಅವುಗಳ ಆಡಳಿತ ಹಕ್ಕುಗಳನ್ನು ಮೊಟಕುಗೊಳಿಸಿ ಸಂವಿಧಾನದ ಆಶಯಗಳಿಗೆ ಚ್ಯುತಿಯುಂಟಾಗುವಂತೆ ನಡೆದುಕೊಳ್ಳುತ್ತಿವೆ. ಬಿಜೆಪಿಯ ರಾಜಕೀಯ ಮೇಲಾಟದಿಂದ ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಕಾಣದೆ ಕಗ್ಗಂಟಾಗಿಯೇ ಉಳಿದಿದೆ.
ಬಿಬಿಎಂಪಿಯ ಹಲವಾರು ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ಹಲವಾರು ಯೋಜನೆಗಳಿಗೆ ಜಾಬ್ ಕೋಡ್ ನೀಡಲಾಗುತ್ತಿದೆ ಮತ್ತು ಟೆಂಡರ್ ಕೂಡ ಕರೆಯಲಾಗಿದೆ, ಇಂತಹ ಸಂದರ್ಭದಲ್ಲಿ ಪರ್ಯಾಯ ಬಜೆಟ್ನ ಸಲಹೆಯನ್ನೂ ಸೂಚಿಸದೆ ಬಜೆಟ್ ಅನುಷ್ಠಾನಕ್ಕೆ ತಡೆ ನೀಡಿರುವುದು ಬಿಬಿಎಂಪಿಯ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗುತ್ತಿದೆ.
ದಿನನಿತ್ಯ ಸಂಚಾರ ದಟ್ಟಣೆ ಸಮಸ್ಯೆ
ಆರಂಭಗೊಂಡಿರುವ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸುವುದರಿಂದ ಜನರು ದಿನನಿತ್ಯ ಸಂಚಾರ ದಟ್ಟಣೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗುತ್ತಿದೆ. ಹಾಗಾಗಿ ಮುಖ್ಯಮಂತ್ರಿಯವರು ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು, ಬಜೆಟ್ ಅನುಷ್ಠಾನಕ್ಕೆ ನೀಡಿರುವ ತಡೆಯನ್ನು ಹಿಂಪಡೆಯಬೇಕು. ಬಿಬಿಎಂಪಿಯ ಆಡಳಿತದಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ ಸ್ವತಂತ್ರವಾಗಿ ಆಡಳಿತ ನಿರ್ವಹಿಸಲು ಬಿಡಬೇಕು. ಆರಂಭಗೊಂಡಿರುವ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರೆಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ.