ಸೋಮವಾರವೇ ಯಡಿಯೂರಪ್ಪ ಬಹುಮತ ಸಾಬೀತು?
ಬೆಂಗಳೂರು, ಜುಲೈ 26: ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಗೆ ಮುಂದಾಗಲಿದ್ದಾರೆ.
ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮುಂದಾಗುತ್ತೇವೆ. ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ನಡೆಸುತ್ತೇವೆ. ಸೋಮವಾರ ಅಥವಾ ಮಂಗಳವಾರ ವಿಶ್ವಾಸಮತ ಯಾಚನೆ ನಡೆಸುತ್ತೇವೆ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ಸಿಎಂ ಯಡಿಯೂರಪ್ಪ (ಆದರೆ) ಮುಂದಿರುವ 5 ಪ್ರಮುಖ ಸವಾಲುಗಳು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಸಚಿವ ಸ್ಥಾನ ಸಿಗುತ್ತೆಯೋ ಇಲ್ಲವೋ ಗೊತ್ತಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ. ಸ್ಥಿರ ಸರ್ಕಾರ ನೀಡಲು ಬಿಎಸ್ ಯಡಿಯೂರಪ್ಪ ಅವರಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಜನಮೆಚ್ಚುವ ರೀತಿಯಲ್ಲಿ ಮುಂದಿನ ನಾಲ್ಕು ವರ್ಷ ಸರ್ಕಾರ ನಡೆಸಬೇಕು ಎನ್ನುವುದು ನಮ್ಮ ಆಶಯ. ಆಷಾಡ ಶುಕ್ರವಾರ ಬಹಳ ಶುಭದಿನ. ಇಂದು ಪ್ರಮಾಣವಚನ ನಡೆಯುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಬಹುಮತ ಸಾಬೀತಾದ ಬಳಿಕ ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಸಚಿವ ಸಂಪುಟ ರಚಿಸಲಾಗುವುದು ಎಂದು ತಿಳಿಸಿದರು.
ಬಿ. ಎಸ್. ಯಡಿಯೂರಪ್ಪ ಸಂಪುಟ ; ಶಿವಮೊಗ್ಗದಿಂದ ಯಾರು ಸಚಿವರು?
'ಕಳೆದ 14 ತಿಂಗಳಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಪರಿಸ್ಥಿತಿ ಇತ್ತು. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಸರ್ಕಾರ ಇದ್ದರೆ ಜನರಿಗೆ ಅನುಕೂಲಕರವಾದ ಕೆಲಸಗಳನ್ನು ಹೆಚ್ಚು ಮಾಡಬಹುದು. ಈ ಹಿಂದೆ ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಹಾಗಾಗಿ ಹೆಚ್ಚು ಜನಪರ ಕೆಲಸ ಮಾಡಲು ಆಗಲಿಲ್ಲ. ಈಗ ಹಾಗಾಗುವುದಿಲ್ಲ. ರೈತರಿಗೆ, ಶೋಷಿತರಿಗೆ ಒಳ್ಳೆಯದಿನಗಳು ಬರಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.