ಗಾಲಿ ರೆಡ್ಡಿ ಬಿಜೆಪಿಯಲ್ಲಿಲ್ಲ, ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ: ಬಿಎಸ್ವೈ
Recommended Video

ಬೆಂಗಳೂರು, ನವೆಂಬರ್ 08: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈಗ ಹಣ ದ್ವಿಗುಣ ಮಾಡುವ ಅವ್ಯವಹಾರದಲ್ಲಿ ಸಿಲುಕಿಕೊಂಡಿದ್ದು, ಏಕಾಂಗಿಯಾಗಿದ್ದಾರೆ. ಅವರಿಗೆ ಬಿಜೆಪಿ ನಾಯಕರಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ.
'ತಪ್ಪು ಯಾರು ಮಾಡಿದ್ರೂ ಕಾನೂನು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ನೋಡಿದ್ದು ಬಿಟ್ಟರೆ, ನನಗೆ ಈ ಪ್ರಕರಣದ ಬಗ್ಗೆ ಹೆಚ್ಚು ತಿಳಿದಿಲ್ಲ' ಎಂದು ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ ಅವರು ಈಗ ಬಿಜೆಪಿಯಲ್ಲಿಲ್ಲ ಹಾಗಾಗಿ, ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲಾರೆ ಎಂದು ಯಡಿಯೂರಪ್ಪ ಹೇಳಿದರು. ಇದಕ್ಕೂ ಮುನ್ನ, ಗಾಲಿ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಯಾರ ರೀತಿ ನಡೆದುಕೊಳ್ಳಬೇಕು, ಏನು ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಈ ಬಗ್ಗೆ ಈಗಾಗಲೇ ಇಲ್ಲಿನ ನಾಯಕರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ, ಒಂದು ಕಾಲದ ಬಿಜೆಪಿಯ ಮಿತ್ರ ಗಾಲಿ ರೆಡ್ಡಿಯ ಬಗ್ಗೆ ಗಪ್ ಚುಪ್ ಆಗಿರುವಂತೆ ಹೈಕಮಾಂಡ್ ನೀಡಿರುವ ಆಜ್ಞೆಯನ್ನು ಪಾಲಿಸುತ್ತಿದ್ದಾರೆ ಎಂಬ ಮಾತಿದೆ.
'ಗಾಲಿ ರೆಡ್ಡಿ ಬಂಧನದ ಭೀತಿ ಸೇರಿ ಯಾವುದೇ ಮಾಹಿತಿ ನನಗಿಲ್ಲ. ಕಾನೂನು ಅದರ ಪಾಡಿಗೆ ಅದು ಕೆಲಸ ಮಾಡುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಚುನಾವಣೆ ಓಡಾಟದಿಂದ ದಣಿದಿದ್ದೇನೆ' ಎಂದು ಮೊಳಕಾಲ್ಮೂರು ಶಾಸಕ, ಗಾಲಿ ರೆಡ್ಡಿ ಆಪ್ತ ಬಿ.ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications