ಫಲಿತಾಂಶದ ಬಳಿಕ RSS ಕಚೇರಿಗೆ ಭೇಟಿ ನೀಡಿದ ಬೊಮ್ಮಾಯಿ
ಬೆಂಗಳೂರು, ಮೇ 15: ಚುನಾವಣೆಯ ಫಲಿತಾಂಶದ ಬಳಿಕ ಮತ್ತಷ್ಟು ಕ್ರೀಯಾಶೀಲರಾಗಿರುವ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿಗೆ ಭೇಟಿ ನೀಡಿದರು. ಪಕ್ಷ ಸಂಘಟನೆ ಕುರಿತು ಸಂಘದ ನಾಯಕರೊಂದಿಗೆ ಚರ್ಚೆ ಮಾಡಿದರು.
ಸೋಮವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಕೃಪಕ್ಕೆ ಭೇಟಿ ನೀಡಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಆರ್ ಎಸ್ ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಮಾತುಕತೆಯು ನಡೆದಿದೆ ಎಂದರು.

ಬಿಜೆಪಿ ರಾಜ್ಯಾಧಕ್ಷರು, ಕೇಂದ್ರದ ವರಿಷ್ಠರ ಜೊತೆಗೆ ಹಲವಾರು ಬಾರಿ ಚರ್ಚಿಸಲಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಮುಂದಿನ ದಿನಗಳಲ್ಲಿ ಹೇಗೆ ಸಂಘಟನೆ ಮಾಡಬೇಕು ಎನ್ನುವ ತೀರ್ಮಾನ ಮಾಡಲಿದ್ದೇವೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಸಭೆಯನ್ನು ಕರೆದಿಲ್ಲ. ಶಾಸಕರ ಸಭೆಯನ್ನು ರಾಜ್ಯಾಧಕ್ಷರು ಕರೆಯಲಿದ್ದಾರೆ ಎಂದು ಹೇಳಿದರು.
ಈ ವಾರ ಬಿಜೆಪಿಯಿಂದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಅವರು ಸಭೆ ಕರೆದಿದ್ದಾರೆ. ಆದರೆ ಯಾವಾಗ ಸಭೆ ನಡೆಯಲಿದೆ ಎಂಬುದು ಇನ್ನು ನಿಗದಿಯಾಗಿಲ್ಲ. ಈ ಸಭೆಯಲ್ಲಿಯೇ ವಿರೋಧ ಪಕ್ಷದ ನಾಯಕರ ಆಯ್ಕೆ ಬಗ್ಗೆ ತಿಳಿದು ಬರಲಿದೆ.

ಬಿಜೆಪಿಯಿಂದ ಆತ್ಮಾವಲೋಕ: ಯಾರಾಗುತ್ತಾರೆ ವಿಪಕ್ಷ ನಾಯಕ?
ಮುಖ್ಯಮಂತ್ರಿ ಸ್ಥಾನ ನಿರ್ವಹಣೆ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ವಿಪಕ್ಷ ಸ್ಥಾನ ಅಲಂಕರಿಸಬೇಕು ಎಂಬುದು ಬಿಜೆಪಿ ನಾಯಕರ ಒಲವಾಗಿದೆ. ಇತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ವಿ.ಸುನೀಲ್ ಕುಮಾರ್, ಆರ್.ಅಶೋಕ್ ಹೆಸರುಗಳು ಕೇಳಿ ಬಂದಿವೆ. ಆದರೆ ಈ ರೇಸ್ನಲ್ಲಿ ಬಸವರಾಜ ಬೊಮ್ಮಾಯಿಯವರು ವಿಪಕ್ಷ ಸ್ಥಾನ ಅಲಂಕರಿಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಕರ್ನಾಟಕ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಗಳಿಸುವ ಮೂಲಕ ಬಿಜೆಪಿಗೆ ಭಾರೀ ಆಘಾತ ನೀಡಿದೆ. ಕರ್ನಾಟಕ ಬಿಜೆಪಿ ಸದ್ಯ 66 ಸದಸ್ಯರನ್ನು ಹೊಂದುವ ಮೂಲಕ ಪ್ರತಿಪಕ್ಷ ಸ್ಥಾನಕ್ಕೆ ಕುಸಿದಿದೆ. ಆದರೆ ಈ ನಡುವೆ ಸೋಲಿಗೆ ಕಾರಣಗಳೇನು, ಆದ ತಪ್ಪುಗಳು ಏನು? ಎಂಬ ಮುಂತಾದ ವಿಷಯಗಳ ಕುರಿತು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಬಿಜೆಪಿ ವಲಯದಲ್ಲಿ ಮೇಲಿಂದ ಮೇಲೆ ಸಭೆ ನಡೆಯುತ್ತಿದೆ.












Click it and Unblock the Notifications