ನಿತ್ಯಾಗೆ ಕಂಟಕ : ಮೇಲೆತ್ತಲಿದ್ದಾರೆ ಹೂತ ಯುವತಿಯ ಶವ
ಬೆಂಗಳೂರು, ಜ. 7: ವಿವಾದಿತ ಗುರು ಸ್ವಾಮಿ ನಿತ್ಯಾನಂದ ಅವರ ಬಿಡದಿ ಆಶ್ರಮದಲ್ಲಿ ಮೃತಪಟ್ಟಿದ್ದ ಸಂಗೀತಾ (24) ಪ್ರಕರಣದ ತನಿಖೆಗಾಗಿ ಮೂವರು ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.
ಪೊಲೀಸ್ ಉಪ ನಿರೀಕ್ಷಕ ಬಿ.ಎನ್. ಲೋಹಿತ್ ನೇತೃತ್ವದ ತಂಡ ತಿರುಚನಾಪಳ್ಳಿ ಜಿಲ್ಲೆಯ ರಾಮಜಿ ನಗರದ ನವಲೂರು ಕುಟ್ಟಪಟ್ಟುಗೆ ಆಗಮಿಸಿದೆ. ಸಂಗೀತಾ ಪಾಲಕರ ಕೋರಿಕೆಯಂತೆ ನವಲೂರು ಕುಟ್ಟಪಟ್ಟು ಗ್ರಾಮದಲ್ಲಿ ಹೂಳಲಾಗಿರುವ ಶವವನ್ನು ಹೊರತೆಗೆದು ಪುನಃ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ನಿತ್ಯಾನಂದ ಆಶ್ರಮದ ಯುವತಿ ಸಾವಿನ ತನಿಖೆಗೆ ಮನವಿ]
ಪ್ರಕರಣವೇನು? : ವಿವಾದಿತ ಧರ್ಮಗುರು ನಿತ್ಯಾನಂದ ಸ್ವಾಮೀಜಿಯ ಕರ್ನಾಟಕದ ಬಿಡದಿ ಆಶ್ರಮದಲ್ಲಿ 2014ರ ಡಿಸೆಂಬರ್ 28ರಂದು ಸಂಗೀತಾ ಮೃತಪಟ್ಟಿದ್ದರು. ಸಂಗೀತಾ ಎಂಬ ಭಕ್ತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಇದೊಂದು ಸಹಜ ಸಾವು ಎಂದು ಬಿಡಾಡಿ ಆಶ್ರಮದವರು ತಿಳಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ್ದರು. [ಹಾಟ್ ನಟಿ ರಂಜಿತಾ ಈಗ ಸನ್ಯಾಸಿನಿ]
ಪಾಲಕರ ಪ್ರಶ್ನೆ : ಸಂಗೀತಾ ಸಾವು ಸಹಜ ಎಂದಾಗಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ್ದು ಏಕೆಂದು ತಾಯಿ ಪ್ರಶ್ನಿಸಿದ್ದಾರೆ. ಆಶ್ರಮದವರು ಮೊದಲು ಶವಪರೀಕ್ಷೆ ನಡೆಸಿಲ್ಲ ಎಂದು ತಿಳಿಸಿದ್ದರು. ಆದರೆ, ನಂತರ ಶವ ಪರೀಕ್ಷೆ ನಡೆಸಿದ್ದು ತಿಳಿಯಿತು. ಆದ್ದರಿಂದ ಸಾವಿನ ಕುರಿತು ಶಂಕೆ ಮೂಡಿದೆ. ಸಂಗೀತಾ ಶವವನ್ನು ಪುನಃ ಪರೀಕ್ಷೆಗೆ ಒಳಪಡಿಸಬೇಕೆಂದು ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಕೂಡ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಅವರಿಗೆ ಸೂಚಿಸಿ ಪತ್ರ ಬರೆದಿದ್ದರು.