ನೌಕರರ ಮುಷ್ಕರ: ಎಸ್ಮಾ ಜಾರಿಗೆ ಕೇಂದ್ರಕ್ಕೆ ಪತ್ರ ಬರೆದ ಬಿಎಂಆರ್ ಸಿಎಲ್
ಬೆಂಗಳೂರು, ಏಪ್ರಿಲ್ 27: ಮೆಟ್ರೋ ನೌಕರರು ಮತ್ತೆ ಮುಷ್ಕರ ನಡೆಸುವುದಾಗಿ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಎಂಆರ ಸಿಎಲ್ , ದೇಶದ ಎಲ್ಲ ಮೆಟ್ರೋ ಸೇವೆಗಳಲ್ಲಿ ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಒಂದು ತಿಂಗಳು ನಡೆದ ಮೆಟ್ರೋ ನೌಕರರು ಹಾಗೂ ಅಧಿಕಾರಿಗಳ ನಡುವಿನ ಸಂಧಾನ ಸಭೆ ವಿಫಲವಾಗಿದೆ. ನೌಕರರು ಮತ್ತೆ ಮುಷ್ಕರ ನಡೆಸುವ ಚಿಂತನೆಯಲ್ಲಿದ್ದಾರೆ., ಕಳೆದ ವರ್ಷ ನೌಕರರು ಮುಷ್ಕರ ನಡೆಸಿದ್ದಾಗ ರಾಜ್ಯ ಸರ್ಕಾರ ಎಸ್ಮಾ ಜಾರಿಗೊಳಿಸಿತ್ತು.
ಇದರ ವಿರುದ್ಧ ನೌಕರರು ಹೈಕೋರ್ಟ್ ನಲ್ಲಿ ಪ್ರಕರಣ ಸಾಖಲಿಸಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರವನ್ನೇ ನಂಬಿಕೊಳ್ಳುವ ಬದಲು ಕೇಂದ್ರ ಸರ್ಕಾರದಿಂದ ಎಸ್ಮಾ ಜಾರಿ ಮಾಡಿಸುವ ತಂತ್ರವನ್ನು ಬಿಎಂಆರ್ ಸಿಎಲ್ ಹೆಣೆದಿದೆ.

ಅದರಂತೆ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಎಸ್ಮಾ ಜಾರಿಗೆ ಕೋರಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರೆ ಬರೆದಿದ್ದಾರೆ.
ಮೆಟ್ರೋ ರೈಲ್ವೆ ಕಾಯ್ದೆ 2002ರ ಸೆಕ್ಷನ್ 90 ರ ಪ್ರಕಾರ ಮೆಟ್ರೋ ನೌಕರರು ಸಾರ್ವಜನಿಕ ಸೇವೆಯಲ್ಲಿರುವವರಾಗಿದ್ದಾರೆ. ಮೆಟ್ರೋ ಸೇವೆಯನ್ನು ಪ್ರತಿದಿನ ಲಕ್ಷಾಂತರ ಜನರು ಬಳಸಿಕೊಳ್ಳುವುದರಿಂದ ಒಂದು ದಿನವೂ ಸೇವೆ ಸ್ಥಗಿತಗೊಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.
ದೇಶದ ಎಲ್ಲ ಮೆಟ್ರೋ ಸೇವೆಗಳನ್ನು ಕೇಂದ್ರದ ಎಸ್ಮಾ ಕಾಯ್ದೆ 1981 ರಡಿ ಅಗತ್ಯ ಸೇವೆಗಳು ಎಂದು ಹೆಸರಿಸುವ ಅಗತ್ಯವಿದೆ. ಇದರಿಂದ ಮೆಟ್ರೋ ಸೇವೆ ನಿರಂತರವಾಗಿ ದೊರೆಯುವಂತೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟ್ ನಿರ್ದೇಶನದಂತೆ ಒಂದು ತಿಂಗಳು ಸಭೆ ನಡೆದಿದ್ದರೂ ಒಂದೂ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿಲ್ಲ, ಈಡೇರಿಸಲಿರುವ ಬೇಡಿಕೆಗಳ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡುತ್ತೇವೆಯೇ ಹೊರತು ನೌಕರರ ಸಂಘಕ್ಕಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರರು ಸಂಧಾನವನ್ನು ಬಿಟ್ಟು ಮುಷ್ಕರದ ಹಾದಿಯಲ್ಲಿ ತೆರಳಲು ಮುಂದಾಗಿದ್ದಾರೆ.












Click it and Unblock the Notifications