BMLTA Rules 2025: ಬಿಎಂಎಲ್ಟಿಎ ಕಾಯ್ದೆಗೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪಣೆ ಸಲ್ಲಿಕೆ, ಕೊಟ್ಟ ಕಾರಣಗಳಿವು
ಬೆಂಗಳೂರು: ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ (BMLTA) ನಿಯಮಗಳು-2025 ಕರಡು ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಕ್ಷೇಪಣೆ ಸಲ್ಲಿದ್ದಾರೆ. ಅಲ್ಲದೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ನಿಯಮಗಳ ಹೆಸರಿನಲ್ಲಿ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಹಾಗೂ ದೊಡ್ಡ ಯೋಜನೆಗಳಿಗೆ ಹಿಂಬದಿ ಅನುಮೋದನೆ ನೀಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಎಂಎಲ್ಟಿಎ ಕಾಯ್ದೆಯ ಸೆಕ್ಷನ್ 19ರ ಪ್ರಕಾರ, ಎಲ್ಲ ದೊಡ್ಡ ಯೋಜನೆಗಳಿಗೆ ಪ್ರಾಧಿಕಾರದ ಅನುಮೋದನೆ ಕಡ್ಡಾಯವಾಗಿದೆ. ಆದರೆ ಕರಡು ನಿಯಮಗಳಲ್ಲಿನ ನಿಯಮ 24ರಲ್ಲಿರುವ 'ಸೇವಿಂಗ್ ಕ್ಲಾಸ್' ಮೂಲಕ ಈಗಾಗಲೇ ಘೋಷಿಸಲಾದ ಮೆಗಾ ಯೋಜನೆಗಳಿಗೆ ಬಿಎಂಎಲ್ಟಿಎ ಅನುಮೋದನೆ ಅಗತ್ಯವಿಲ್ಲ ಎಂಬ ಅಂಶ ಸೇರಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ನಡೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕಾಯ್ದೆಯಿಂದ ಅಪಾಯವೇ ಹೆಚ್ಚು
ಈ ನಿಯಮದ ಮೂಲಕ ಸುಮಾರು ₹1 ಲಕ್ಷ ಕೋಟಿ ಮೊತ್ತದ ಟನಲ್ ರಸ್ತೆ ಯೋಜನೆ ಸೇರಿದಂತೆ ಇತರ ದೊಡ್ಡ ಕಾಮಗಾರಿಗಳಿಗೆ ಹಿಂದಿನ ದಿನಾಂಕದಿಂದಲೇ ರಬ್ಬರ್ ಸ್ಟಾಂಪ್ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಅಗತ್ಯವಾದರೂ ಪರಿಶೀಲನೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತಪ್ಪಿಸುವ ಸಾಧನವಾಗಿ ಬಿಎಂಎಲ್ಟಿಎ ನಿಯಮಗಳನ್ನು ಬಳಸಬಾರದು ಎಂದು ಅವರು ಹೇಳಿದ್ದಾರೆ.
ಈ ಕರಡು ನಿಯಮಗಳು ಕಾನೂನಾತ್ಮಕವಾಗಿಯೂ ತಪ್ಪು ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಕಾಯ್ದೆಯನ್ನು ಮೀರಿಸುವಂತೆ ಉಪನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ ಎಂಬುದು ಕಾನೂನಿನ ಮೂಲ ತತ್ವವಾಗಿದ್ದು, ಈ ನಿಯಮಗಳ ಮೂಲಕ ಕಾಂಗ್ರೆಸ್ ಸರ್ಕಾರವೇ ಬಿಎಂಎಲ್ಟಿಎ ಕಾಯ್ದೆಯನ್ನು ಅಪ್ರಯೋಜಕಗೊಳಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಎಂಎಲ್ಟಿಎ ಕಾಯ್ದೆಯನ್ನು 2022ರಲ್ಲಿ ಬಿಜೆಪಿ ಸರ್ಕಾರ ಬೆಂಗಳೂರು ನಗರ ಸಾರಿಗೆ ಯೋಜನೆಯಲ್ಲಿ ಪಾರದರ್ಶಕತೆ, ಸಂಸ್ಥೆಯ ಮೇಲ್ವಿಚಾರಣೆ ಹಾಗೂ ಶಿಸ್ತು ತರಲು ಜಾರಿಗೆ ತಂದಿತ್ತು. ಆದರೆ ಇತ್ತೀಚಿನ ಕರಡು ನಿಯಮಗಳು, ವಿಶೇಷವಾಗಿ ನಿಯಮ 24, ಈ ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತಿವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದ ನಾಗರಿಕರು ಕೂಡ ಈ ಕರಡು ನಿಯಮಗಳಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಿಗೆ ನಾಗರಿಕರು ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಕರೆ ನೀಡಿದ್ದಾರೆ.












Click it and Unblock the Notifications