ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್ಮೇಲ್ ಪ್ರಕರಣ: ಮೂವರಿಗೆ ಸುಪ್ರೀಂ ನೋಟಿಸ್
ಬೆಂಗಳೂರು, ಅ 17: ರಾಮಚಂದ್ರಾಪುರ ಮಠಕ್ಕೆ ಬ್ಲಾಕ್ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಚ.ಮೂ.ಕೃಷ್ಣಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಬಿ.ಟಿ.ವೆಂಕಟೇಶ್ ಮತ್ತು ಪದ್ಮನಾಭ ಶರ್ಮ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಮೂರು ಕೋಟಿ ರೂಪಾಯಿ ನೀಡಬೇಕು ಹಾಗೂ ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರಭಾರತೀ ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕು. ಇಲ್ಲದಿದ್ದರೆ ಶ್ರೀಗಳ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಮಾಡುವುದಾಗಿ ದಿವಾಕರ ಶಾಸ್ತ್ರಿ, ಪ್ರೇಮಲತಾ ದಂಪತಿ ಬ್ಲಾಕ್ಮೇಲ್ ಮಾಡಿದ್ದರು.
ಚ.ಮೂ.ಕೃಷ್ಣಶಾಸ್ತ್ರಿ ಮತ್ತು ಇತರರು ಈ ಸಂಚಿನಲ್ಲಿ ಆರೋಪಿಗಳಾಗಿದ್ದರು. ಪ್ರಕರಣದ ಬಗ್ಗೆ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧ ಮಾಡಿದ ಆರೋಪದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಈ ಮಧ್ಯೆ ಕೆಲ ತಿಂಗಳ ಹಿಂದೆ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಚ.ಮೂ.ಕೃಷ್ಣಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಬಿ.ಟಿ.ವೆಂಕಟೇಶ್ ಮತ್ತು ಪದ್ಮನಾಭ ಶರ್ಮ ಹೆಸರನ್ನು ಕೈಬಿಟ್ಟು ದಿವಾಕರ ಶಾಸ್ತ್ರಿ ದಂಪತಿ ಹಾಗೂ ಸಿ.ಎಂ.ಎನ್.ಶಾಸ್ತ್ರಿ ವಿರುದ್ಧ ವಿಚಾರಣೆ ನಡೆಸುವಂತೆ ಆದೇಶ ನೀಡಿತ್ತು.
ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಶ್ರೀಮಠದ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಬಿ.ಆರ್.ಚಂದ್ರಶೇಖರ್ ಅವರ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಿ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.












Click it and Unblock the Notifications