ಬಿಜೆಪಿ ಬೆನ್ನುತಟ್ಟಿ ಕಾಂಗ್ರೆಸ್ಸಿಗೆ ವಾರ್ನಿಂಗ್ ನೀಡಿದ ಅಮಿತಾ ಶಾ
ಬೆಂಗಳೂರು, ಆಗಸ್ಟ್, ೨೫ : ಬಿಬಿಎಂಪಿ ವಿಭಜನೆ ಕುರಿತು ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಬಿಎಂಪಿಯನ್ನು ಒಡೆಯುವ ಹುನ್ನಾರ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.
ದೆಹಲಿಗೆ ತೆರಳುವ ಮಾರ್ಗ ಮಧ್ಯೆ ಬೆಂಗಳೂರಿಗೆ ಬಂದಿಳಿದ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಬಿಬಿಎಂಪಿ ಚುನಾವಣೆಯಲ್ಲಿ ಜಯಬೇರಿ ಸಾಧಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮಂಗಳವಾರ ಅಭಿನಂದನೆ ಸಲ್ಲಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಸುಮಾರು 100 ಸ್ಥಾನಗಳನ್ನು ದಕ್ಕಿಸಿಕೊಂಡು ಬಿಬಿಎಮಪಿ ಅಧಿಕಾರ ಗದ್ದುಗೆ ಏರಲು ಹವಣಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಹಲವಾರು ಮುಖಂಡರು ಅಮಿತ್ ಶಾ ಅವರಿಗೆ ಹೂಗುಚ್ಛ ನೀಡುವುದರ ಮೂಲಕ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತ ಚುಕ್ಕಾಣಿ ಬಿಜೆಪಿ ಪಾಲಾಗುವಂತೆ ಮಾಡುವಲ್ಲಿ ಬಿಬಿಎಂಪಿ ಚುನಾವಣೆ ನೆರವಿಗೆ ಬರಲಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಅಧಿಕಾರ ನೆಲಕಚ್ಚಲಿದೆ ಎಂದು ಹೇಳಿದರು.
ಈ ಅವಧಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತಿತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.