ಶೋಭಾ ಹೇಳಿಕೆಗೆ ಡೋಂಟ್ ಕೇರ್: ಬಿಜೆಪಿಯ ಶಿಸ್ತಿನ ಸಿಪಾಯಿ ಎಂದು ಪ್ರೂವ್ ಮಾಡಿದ ಜಗ್ಗೇಶ್
ಕೆಲವೊಂದು ನಾಯಕರಿಗೆ ಪ್ರಚಾರದ ವೇಳೆ, ಜನರನ್ನು ತಮ್ಮತ್ತ ಸೆಳೆಯುವ ಶಕ್ತಿಯಿರುತ್ತದೆ. ಅದು, ಮತವಾಗಿ ತಿರುಗುತ್ತೋ, ಇಲ್ಲವೋ, ಅದು ಆಮೇಲಿನ ವಿಚಾರ. ಕರ್ನಾಟಕದಲ್ಲಿನ ಬಿಜೆಪಿ ಮುಖಂಡರ ಬಗ್ಗೆ ಹೇಳುವುದಾದರೆ, ಅಂತಹ ಶಕ್ತಿ, ಜಗ್ಗೇಶ್ ಅವರಲ್ಲೂ ಇದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2018) ಬೆಂಗಳೂರು ನಗರ ವ್ಯಾಪ್ತಿಯ ಯಶವಂತಪುರ ಕ್ಷೇತ್ರಕ್ಕೆ ಕಡೇಗಳಿಗೆಯಲ್ಲಿ ಜಗ್ಗೇಶ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ಜೆಡಿಎಸ್-ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರವದು.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ಸಿನ ಎಸ್.ಟಿ.ಸೋಮಶೇಖರ್, ಜೆಡಿಎಸ್ಸಿನ ಜವರಾಯಿಗೌಡ ವಿರುದ್ದ 10,711 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರಿಬ್ಬರ ನಡುವೆ ಫೈಟ್ ಇರುತ್ತದೆ ಎನ್ನುವುದು ಮೊದಲೇ ನಿರೀಕ್ಷಿಸಲಾಗಿತ್ತು.
ಆದರೆ, ಕಡಿಮೆ ಅವಧಿಯಲ್ಲಿ ಜಗ್ಗೇಶ್ 59,308 ಮತಗಳನ್ನು ಪಡೆದದ್ದು ಗಮನಾರ್ಹ ಸಂಗತಿಯಾಗಿತ್ತು. ಬದಲಾದ ರಾಜಕೀಯದಲ್ಲಿ, ಸೋಮಶೇಖರ್ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದರಿಂದ, ಅಲ್ಲಿ ಮತ್ತೆ ಚುನಾವಣೆ ಈಗ ಎದುರಾಗಿದೆ. ಜಗ್ಗೇಶ್, ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಕೂಡಾ...

ಬಿಜೆಪಿ ಟಿಕೆಟಿಗಾಗಿ ಜಗ್ಗೇಶ್ ಲಾಬಿ
ಜಗ್ಗೇಶ್, ಬಿಜೆಪಿ ಟಿಕೆಟಿಗಾಗಿ ಲಾಬಿ ನಡೆಸಿದ್ದರು. ಆದರೆ, ಎಸ್.ಟಿ.ಸೋಮಶೇಖರ್ ಅವರಿಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಇದ್ದಿದ್ದರಿಂದ ಜಗ್ಗೇಶ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದ ಪ್ರಾಥಮಿಕ ಸಭೆಯಿಂದಲೂ ಜಗ್ಗೇಶ್ ಬೇಸರದಿಂದ ದೂರವುಳಿದಿದ್ದರು. ಇದರ ಜೊತೆಗೆ, ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆ ಜಗ್ಗೇಶ್ ಅವರನ್ನು ಇನ್ನಷ್ಟು ಮುನಿಸುವಂತೆ ಮಾಡಿತ್ತು.

ಜಗ್ಗೇಶ್ ಅವರಿಗೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ, ಶೋಭಾ
ಯಶವಂತಪುರದ ಮಾಜಿ ಶಾಸಕಿಯಾಗಿದ್ದ, ಹಾಲೀ ಸಂಸದೆ, ಶೋಭಾ ಕರಂದ್ಲಾಜೆ, "ಜಗ್ಗೇಶ್ ಅವರಿಗೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವರಿಗೆ ಸ್ವಂತ ಕ್ಷೇತ್ರವೂ ಇಲ್ಲ. ಕಳೆದ ಬಾರಿ ಸೂಕ್ತ ಅಭ್ಯರ್ಥಿ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡಲಾಗಿತ್ತು" ಎಂದು ಹೇಳಿದ್ದರು. ಇದು ಜಗ್ಗೇಶ್ ಅವರನ್ನು ಕೆರಳಿಸಿತ್ತು ಮತ್ತು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು.

ಸಿಎಂ ಕಡೆಯಿಂದ ಜಗ್ಗೇಶ್ ಅವರಿಗೆ ತುರ್ತಾಗಿ ಬುಲಾವ್
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸಿಎಂ ಯಡಿಯೂರಪ್ಪ, ಜಗ್ಗೇಶ್ ಅವರಿಗೆ ತುರ್ತಾಗಿ ಬುಲಾವ್ ಕಳುಹಿಸಿದರು. ಜಗ್ಗೇಶ್ ಅವರನ್ನು ಸಮಾಧಾನ ಮಾಡಿ, ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಅಂದಿನಿಂದ, ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ತನ್ನ ಹೆಸರಿಲ್ಲದಿದ್ದರೂ, ಯಶವಂತಪುರದ ಜೊತೆಗೆ, ಬೆಂಗಳೂರಿನ ಇತರ ಕ್ಷೇತ್ರಗಳಲ್ಲೂ ಜಗ್ಗೇಶ್ ಪ್ರಚಾರದಲ್ಲಿ ಸಕ್ರಿಯವಾಗಿದ್ದಾರೆ.

ನನ್ನ ಸ್ವಕ್ಷೇತ್ರ ತುರುವೇಕರೆ. ಬಿಜೆಪಿ ನಮಗೆ ಮರ ಇದ್ದಂತೆ
"ನನ್ನ ಸ್ವಕ್ಷೇತ್ರ ತುರುವೇಕರೆ. ಬಿಜೆಪಿ ನಮಗೆ ಮರ ಇದ್ದಂತೆ, ಸದಾ ಅದು ನೆರಳಾಗಿರುತ್ತದೆ. ಯಡಿಯೂರಪ್ಪನವರು ಪೂರ್ಣಾವಧಿಗೆ ಸಿಎಂ ಆಗಿರಬೇಕು ಎನ್ನುವುದು ನನ್ನ ಅಭಿಲಾಶೆ. ನಾವೆಲ್ಲರೂ ಪಕ್ಷದ ಸೈನಿಕರು. ಪಕ್ಷ ಏನು ಹೇಳುತ್ತದೆ ಅದನ್ನು ನಾವು ಮಾಡಬೇಕು. ಸೋಮಶೇಖರ್ ಅವರ ಹೆಗಲಿಗೆ ಹೆಗಲು ಕೊಟ್ಟು, ಗೆಲುವಿಗೆ ಶ್ರಮಿಸುತ್ತೇನೆ". - ಜಗ್ಗೇಶ್

ಯಶವಂತಪುರದ ವಿವಿಧ ಬಡಾವಣೆಗಳಲ್ಲಿ ಜಗ್ಗೇಶ್ ಪ್ರಚಾರ
ಯಶವಂತಪುರದ ವಿವಿಧ ಬಡಾವಣೆಗಳಲ್ಲಿ ಜಗ್ಗೇಶ್ ಪ್ರಚಾರ ನಡೆಸುತ್ತಿದ್ದಾರೆ. ಇದರ ಜೊತೆಗೆ, ಪಕ್ಷದ ಚುನಾವಣಾ ಸಮಿತಿ ಸೂಚಿಸುವ ಇತರ ಕ್ಷೇತ್ರಗಳಲ್ಲೂ ಜಗ್ಗೇಶ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋದಲೆಲ್ಲಾ, ಜನ, ಜಗ್ಗೇಶ್ ಅವರ ಭಾಷಣಕ್ಕೆ ಡಿಮಾಂಡ್ ಮಾಡುತ್ತಿದ್ದಾರೆ.

ತಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ ಎನ್ನುವುದನ್ನು ರುಜುವಾತು ಮಾಡಿದ ಜಗ್ಗೇಶ್
ಈಗಾಗಲೇ, ಯಶವಂತಪುರ ಹೊರತಾಗಿ, ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ ಅಸೆಂಬ್ಲಿ ವ್ಯಾಪ್ತಿಯಲ್ಲೂ ಜಗ್ಗೇಶ್, ಪಕ್ಷದ ಇತರ ಮುಖಂಡರ ಜೊತೆಗೆ, ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಆ ಮೂಲಕ, ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಮತ್ತು ಟಿಕೆಟ್ ಸಿಗಲಿಲ್ಲ ಎನ್ನುವ ಬೇಸರವನ್ನು ಪಕ್ಕದಲ್ಲಿಟ್ಟು, "ತಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ ಎನ್ನುವುದನ್ನು" ಜಗ್ಗೇಶ್, ರುಜುವಾತು ಪಡಿಸಿದ್ದಾರೆ.












Click it and Unblock the Notifications