ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಫೆ 12: ಸ್ಪೀಕರ್ ರಮೇಶ್ ಕುಮಾರ್ ಹೆಸರು ಆಡಿಯೋದಲ್ಲಿ ಪ್ರಸ್ತಾವನೆಯಾದ ವಿಚಾರ, ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಎಸ್ಐಟಿ ತನಿಖೆ ಬೇಡ. ಸದನ ಸಮಿತಿ ರಚಿಸಿ ಅಥವಾ ನ್ಯಾಯಾಂಗ ತನಿಖೆ ಮೂಲಕ ವಿಚಾರಣೆ ನಡೆಸಲಿ ಎಂದು ಬಿಜೆಪಿ ಪಟ್ಟು ಹಿಡಿದಿದ್ದರೆ, ರಮೇಶ್ ಕುಮಾರ್ ಅದಕ್ಕೆ ನೋ ಎಂದಿದ್ದಾರೆ.
ಆದರೆ, ಪ್ರಸಕ್ತ ವಿಚಾರವನ್ನು ಬಿಟ್ಟು, ಸದನದಲ್ಲಿ ಚರ್ಚೆಗಳು ಬೇರೆ ದಾರೀನೇ ಹಿಡಿಯುತ್ತಿದೆ. ಹಿಂದಿನ ರಾಜಕೀಯ ಕಥೆಗಳನ್ನು ಕೆದಕುತ್ತಾ, ಮೂರೂ ಪಕ್ಷಗಳ ಸದಸ್ಯರು ಚರ್ಚೆಗಿಂತ ಜಾಸ್ತಿ, ಗಲಾಟೆಯನ್ನೇ ಮಾಡುತ್ತಿದ್ದಾರೆ. ಇದರ ನಡುವೆ, ಬಿಜೆಪಿ ಶಾಸಕ ವಿ ಸೋಮಣ್ಣ, ಈ ಸದನದ ಸರ್ವಜ್ಞ ಎಂದು ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದಿದ್ದಾರೆ.
ಮೊದಲು ನೀವು ಕೂತುಕೊಳ್ಳಿ, ನೀವ್ಯಾರು ನಮಗೆ ಹೇಳುವುದಕ್ಕೆ, ಸ್ಪೀಕರ್ ಹೇಳಲಿ ಎಂದು ಸಚಿವ ಸಾ. ರಾ ಮಹೇಶ್ ಮತ್ತು ಬಿಜೆಪಿ ಶಾಸಕ ರೇಣುಕಾಚಾರ್ಯ ನಡುವೆ ವಾಗ್ಯುದ್ದವೇ ನಡೆಯುತ್ತಿತ್ತು. ಆಗ ಮಧ್ಯಪ್ರವೇಶಿಸಿದ ಸಚಿವ ಕೆ ಜೆ ಜಾರ್ಜ್, ಇನ್ನೊಬ್ಬ ಶಾಸಕರನ್ನು ಕೂತುಕೊಳ್ಳುವಂತೆ ಹೇಳುವುದು ನಿಮಗಿರುವ ಅಧಿಕಾರ, ಅವರು ಯಾರು ಪ್ರಶ್ನಿಸಲು ಎಂದು ಜಾರ್ಜ್, ಸ್ಪೀಕರ್ ಬಳಿ ಮನವಿ ಮಾಡುತ್ತಿದ್ದರು.

ಆಗ ಎದ್ದು ನಿಂತ ಗೋವಿಂದರಾಜ ನಗರ (ಬೆಂಗಳೂರು) ಕ್ಷೇತ್ರದ ಬಿಜೆಪಿ ಶಾಸಕ ವಿ ಸೋಮಣ್ಣ, ಸಿಎಂ ಸದನದಲ್ಲಿದ್ದಾರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದರೆ, ಹಿರಿಯ ನಾಯಕರು, ಸಚಿವರೂ ಆಗಿರುವ ಜಾರ್ಜ್ ಅವರಿಗೆ ಕುಳಿತುಕೊಳ್ಳುವ ವ್ಯವಧಾನ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ನಮಗೆ ಸೋಮಣ್ಣ ಅವರಿಂದ ಯಾವ ಸರ್ಟಿಫಿಕೇಟ್ ಕೂಡಾ ಬೇಕಾಗಿಲ್ಲ ಎಂದು ಜಾರ್ಜ್ ಮತ್ತೆ ಎದ್ದುನಿಂತರು.
ಜಾರ್ಜ್ ಅವರೇ ಸ್ವಲ್ಪ ಗಾಂಭೀರ್ಯತೆಯಿಂದ ಇರಿ ಎಂದು ಸೋಮಣ್ಣ ಮತ್ತೆ ಮನವಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಸೋಮಣ್ಣ ಅವರಿಗೆ ಈ ಸದನದಲ್ಲಿ ವಿಶೇಷವಾದ ಅಧಿಕಾರವಿದೆ. ಈ ಸದನದ ಎಲ್ಲಾ ಸದಸ್ಯರು ವಿ ಸೋಮಣ್ಣನವರ ಮಾತಿಗೆ ಬೆಲೆಕೊಡಬೇಕಾಗುತ್ತದೆ.
ಯಾಕೆಂದರೆ ಅವರು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರೂ ಪಕ್ಷವನ್ನು ಬಲ್ಲವರು, ಸೋಮಣ್ಣ ಈ ಸದನದ ಸರ್ವಜ್ಞ. ಅವರು ಹೇಳಿದ್ದನ್ನು ನಗುನಗುತ್ತಾ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಕಾಲೆಳೆದಾಗ, ಇಡೀ ಸದನ ನಗೆಗಡಲಲ್ಲಿ ತೇಲಿತು.












Click it and Unblock the Notifications